ಇದೇ ಮೊದಲ ಬಾರಿ ದಸರಾಗೆ ಆಗಮಿಸಿದ ಕಂಜನ್ ಆನೆ ಬಗ್ಗೆ ನಿಮಗೆಷ್ಟು ಗೊತ್ತು?, ಇದರ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ
ಮೈಸೂರು, ಸೆಪ್ಟೆಂಬರ್, 07: ಒಂದು ಕಾಲದ ಪುಂಡಾನೆ ಇದೀಗ ದಸರಾ ಮಹೋತ್ಸವದ ಅತಿಥಿ. ಕಾಡಲ್ಲಿ ಅಲೆಯುತ್ತಾ ಸಿಕ್ಕಸಿಕ್ಕ ತೋಟಕ್ಕೆ ನುಗ್ಗುತ್ತಿದ್ದ ಆನೆ ಇದೀಗ ವಿಧೇಯ ವಿದ್ಯಾರ್ಥಿಯಂತೆ ದಸರಾದಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿದೆ.
ಅಂದಹಾಗೆ ಅವನ ಹೆಸರು ಕಂಜನ್. ಕಂಜನ್ ಎಂದರೆ ಗಣಪತಿ ಹೆಸರು. 24 ವರ್ಷದ ಶಾಂತ ಸ್ವಭಾವದ ಧೈರ್ಯಶಾಲಿ ಕಂಜನ್ ಆನೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಗಮಿಸಿದ್ದಾನೆ. ಸುಪ್ರೀಂಕೋರ್ಟ್ 60 ವರ್ಷದ ತುಂಬಿದ ಆನೆಗಳನ್ನು ಭಾರ ಹೊರುವ ಕಠಿಣ ಕೆಲಸಗಳಿಗೆ ಬಳಸುವಂತಿಲ್ಲ ಎಂದು ಆದೇಶಿಸಿದೆ. ಹಾಗಾಗಿ ಎರಡನೇ ತಲೆಮಾರಿನ ಆನೆಗಳನ್ನು ಅರಣ್ಯ ಇಲಾಖೆ ಸಜ್ಜುಗೊಳಿಸಬೇಕಿದೆ. ಹಾಗಾಗಿ ಈ ವರ್ಷದಿಂದಲೇ ಹೊಸ ಆನೆಗಳಿಗೆ ತಲಾಶ್ ಮಾಡಲಾಗುತ್ತಿದೆ.

ಕಳೆದ ಬಾರಿಗೆ ಮೂರು ಹೊಸ ಆನೆಗಳು ದಸರೆಯಲ್ಲಿ ಭಾಗವಹಿಸಿದ್ದು, ಈ ಬಾರಿಯೂ ನಾಲ್ಕು ಆನೆಗಳಿಗೆ ಅವಕಾಶ ನೀಡಲಾಗಿದೆ, ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. "ಕಂಜನ್ ಚಿಕ್ಕ ವಯಸ್ಸಿನ ಆನೆಯಾದರೂ ಹೆಚ್ಚು ಬಲಶಾಲಿ ಹಾಗೂ ಧೈರ್ಯವಂತ. ಬಂಡೀಪುರದ ರಾಂಪುರ ಕ್ಯಾಂಪ್ನ ಪಾರ್ಥಸಾರಥಿ ಆನೆಯನ್ನು ಮೊದಲ ತಂಡದಲ್ಲಿ ಕರೆತರಲು ಉದ್ದೇಶಿಸಲಾಗಿತ್ತು. ಆದರೆ, ಪಾರ್ಥಸಾರಥಿ ಮದವೇರಿದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ದುಬಾರೆಯ ಕಂಜನ್ ಆನೆಯನ್ನು ಕರೆತರಲಾಗಿದೆ," ಎಂದು ಸಿಎ ಮಾಲತಿಪ್ರಿಯಾ ತಿಳಿಸಿದ್ದಾರೆ.
2014ರಲ್ಲಿ ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದ ಆನೆ ಸೆರೆ ಕಾರ್ಯಾಚರಣೆಯಲ್ಲಿ ಕಂಜನ್ ಆನೆಯನ್ನು ಸೆರೆಹಿಡಿಯಲಾಯಿತು. ಚಿಕ್ಕವಯಸ್ಸಿನಲ್ಲೇ ಪುಂಡಾಟಿಕೆ ಮಾಡುತ್ತಿದ್ದ ಅವನನ್ನು ದುಬಾರೆ ಆನೆ ಶಿಬಿರಕ್ಕೆ ತಂದು ಪಳಗಿಸಲಾಯಿತು. ಸೆರೆ ಸಿಕ್ಕ ಎರಡು ಮೂರು ತಿಂಗಳಿನಲ್ಲೇ ಕಂಜನ್ ಶಿಬಿರದ ನೆಚ್ಚಿನ ಆನೆಯಾದ. ಅಂಬಾರಿ ಆನೆಗೆ ಇರಬೇಕಾದ ಮುಖಲಕ್ಷಣ, ಹೆಗಲು, ಆಕರ್ಷಕ ದಂತ ಕಂಜನ್ಗೆ ಇದೆ.
ಈ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲರ ನಿರೀಕ್ಷೆ ಕಂಜನ್ ಮೇಲೆ ಇದೆ. ಕಂಜನ್ ಆನೆಯನ್ನು ಮಾವುತರಾಗಿ ವಿಜಯ್, ಕಾವಾಡಿಯಾಗಿ ಮಣಿಕಂಠ ಕಂಜನ್ ಪೋಷಣೆ ಮಾಡುತ್ತಿದ್ದಾರೆ. ಕಳೆದ ಬಾರಿ ಗರ್ಭಿಣಿ ಹೆಣ್ಣಾನೆಯನ್ನು ದಸರಾ ಮಹೋತ್ಸವಕ್ಕೆ ಕರೆತಂದು ಟೀಕೆಗೆ ಗುರಿಯಾಗಿದ್ದ ಅರಣ್ಯ ಇಲಾಖೆ ಈ ಬಾರಿ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಬಹಳ ಸೂಕ್ಷ್ಮವಾಗಿ ನಿಗಾ ವಹಿಸಿ ಮಾಡಿದೆ.
ಹಾಗೇ ನೋಡಿದರೆ ಮೊದಲ ತಂಡದಲ್ಲಿ ಕಂಜನ್ ಬರುವ ಆಗಿರಲಿಲ್ಲ. ಬಂಡೀಪುರದ ಪಾರ್ಥ ಸಾರಥಿ ಆನೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಪಾರ್ಥಸಾರಥಿ ಆನೆಗೆ ಮದದ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಮೊದಲ ತಂಡದಿಂದ ಅವಕಾಶ ಕಳೆದುಕೊಂಡನು. ಪರಿಣಾಮ ಹೊಸ ಆನೆ ಕಂಜನ್ ದಸರಾದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದುಕೊಂಡಿದೆ.












Click it and Unblock the Notifications