ಮೈಸೂರು ದಸರಾ 2022; ಈ ಬಾರಿ 124 ಕಿಲೋ ಮೀಟರ್ ರಸ್ತೆಗೆ ದೀಪಾಲಂಕಾರ
ಮೈಸೂರು, ಸೆಪ್ಟೆಂಬರ್, 16: ದಸರಾ ಪ್ರಯುಕ್ತ ಕಳೆದ ವರ್ಷ ಮೈಸೂರಿನಲ್ಲಿ 100 ಕಿಲೋ ಮೀಟರ್ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ 124 ಕಿಲೋ ಮೀಟರ್ ರಸ್ತೆ ದೀಪಾಲಂಕಾರ ಮಾಡಲಾಗುತ್ತಿದೆ. ಸೂರ್ಯಾಸ್ತದಿಂದ ರಾತ್ರಿ 10:30ರವರೆಗೆ ದೀಪಾಲಂಕಾರ ಇರಲಿದೆ.
ಸೆಸ್ಕ್ ಎಂಡಿ ಜಯವಿಭವಸ್ವಾಮಿ ಈ ಬಗ್ಗೆ ಮಾತನಾಡಿ, 96 ವೃತ್ತಗಳಲ್ಲಿ ಅಲಂಕಾರ ಮಾಡಲಾಗುವುದು. 35 ಪ್ರಾಯೋಜಕರು ಮುಂದೆ ಬಂದಿದ್ದಾರೆ. ಮೈಸೂರು, ನಂಜನಗೂಡು ಮತ್ತು ನರಸೀಪುರದ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಇರಲಿದೆ. ಬನ್ನೂರು ಮತ್ತು ಎಚ್.ಡಿ.ಕೋಟೆ ರಸ್ತೆಗಳಲ್ಲೂ ದೀಪಾಲಂಕಾರ ಮಾಡುವ ಚಿಂತನೆ ಇದೆ ಎಂದರು.
Dasara Flower Show 2022: ಮೈಸೂರು ಅರಮನೆ ಆವರಣದಲ್ಲಿ ಅರಳಲಿದೆ ಪುಷ್ಪಲೋಕ
ಜಂಬೂ ಸವಾರಿ ಮೆರವಣಿಗೆ ಸಂಜೆ 5:30ಕ್ಕೆ ಆರಂಭ ಆಗಲಿದೆ. ಗಜಪಡೆ ದೀಪದ ಬೆಳಕಿನಲ್ಲಿ ಸಂಚರಿಸಬೇಕಿದೆ. ಅಂಬಾರಿ ಹೊತ್ತ ಆನೆ 16 ಅಡಿ ಇರುತ್ತದೆ. ಹಾಗಾಗಿ ಮೆರವಣಿಗೆ ಸಾಗುವ ಮಾರ್ಗದಲ್ಲಿ 22 ಅಡಿ ಎತ್ತರದಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡುತ್ತೇವೆ. ದೀಪಾಲಂಕರದ ಬೆಳಕಿನಲ್ಲಿ ಗಜಪಡೆಗೆ ತಾಲೀಮು ನೀಡಬೇಕು. ಆದ್ದರಿಂದ ಮೂರು ದಿನ ಮುಂಚಿತವಾಗಿಯೇ ರಾಜಮಾರ್ಗದಲ್ಲಿ ದೀಪಾಲಂಕಾರ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ದೀಪಾಲಂಕಾರ ಸಮಿತಿ ಉಪ ವಿಶೇಷಾಧಿಕಾರಿ, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾತನಾಡಿ, ''ಎಲ್ಐಸಿ ವೃತ್ತದಲ್ಲಿ ರಾಷ್ಟ್ರ ಲಾಂಛನ, ರಾಷ್ಟ್ರ ಧ್ವಜ, ಪ್ರಾಣಿ, ಪಕ್ಷಿಗಳ ಮಾದರಿ ಇರಲಿದೆ. ಕನ್ನಡದ ಜ್ಞಾನಪೀಠ ಪುರಸ್ಕೃತರ ಪ್ರತಿಕೃತಿಗಳು, ಮೈಸೂರು ಮಹಾರಾಜರು, ಕೆಂಪುಕೋಟೆ ಮತ್ತು ಸುಭಾಷ್ ಚಂದ್ರ ಬೋಸ್ ಮಾದರಿಯ ದೀಪಾಲಂಕಾರದಲ್ಲಿ ಕಂಗೊಳಿಸಲಿವೆ. ನಟ ಡಾ.ಪುನೀತ್ ರಾಜಕುಮಾರ್ಗೆ ಪ್ರತಿಮೆ ಜೊತೆಗೆ 3ಡಿ ಲೈಟಿಂಗ್ ಮೂಲಕ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ,'' ಎಂದರು.
ಗಮನ ಸೆಳೆಯಲಿರೋ ಸಂಸತ್ ಭವನ ಮಾದರಿ
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ 2019ರಲ್ಲಿ ಮಹಿಷ ಮರ್ದಿನಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಈ ವರ್ಷ 3ಡಿ ವಿಡಿಯೋ ಮೂಲಕ ಮಹಿಷಾ ಮರ್ದಿನಿ ಪ್ರದರ್ಶನ ಎಲ್ಲರ ಗಮನ ಸೆಳೆಯಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವುಳ್ಳ ದೀಪಾಲಂಕಾರವೂ ಪ್ರಮುಖ ಆಕರ್ಷಣೆ ಆಗಿರಲಿದೆ. ನವದೆಹಲಿಯಲ್ಲಿ 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ನೂತನ ಸಂಸತ್ ಭವನದ ಮಾದರಿಯೂ ಈ ಬಾರಿಯ ದಸರಾ ದೀಪಾಲಂಕಾರದ ಆಕರ್ಷಣೆಯನ್ನು ಹೆಚ್ಚಿಸಲಿದೆ.
ತಾಂತ್ರಿಕ ಸಮಸ್ಯೆಯಿಂದ ಕಾಮಗಾರಿ ವಿಳಂಬ
ಮೈಸೂರು ವರ್ತುಲ ರಸ್ತೆಯಲ್ಲಿ ಬೀದಿದೀಪಗಳನ್ನು ಅಳವಡಿಕೆ ಮಾಡುವುದು ನಮ್ಮ ಆದ್ಯತೆ ಆಗಿದೆ. ಹಾಗಾಗಿ ಕಾಮಗಾರಿಗೆ ಚಾಲನೆ ಕೊಟ್ಟಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲಸ ವಿಳಂಬವಾಗಿದೆ. ವರ್ಷಾಂತ್ಯಕ್ಕೆ ವರ್ತುಲ ರಸ್ತೆ ಕತ್ತಲೆಯಿಂದ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ವಿವರಿಸಿದರು.
ಚಾಮುಂಡಿ ಬೆಟ್ಟದ ಮಳಿಗೆಗಳಿಗೆ ಶೀಘ್ರದಲ್ಲೇ ವಿದ್ಯುತ್ ಸಂಪರ್ಕ ನೀಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಸಂಸದ ಪ್ರತಾಪ್ ಸಿಂಹ ತಾಕೀತು ಮಾಡಿದರು. ಪ್ರಪ್ರಥಮ ಬಾರಿಗೆ ದಸರಾ ಉದ್ಘಾಟಿಸಲು ರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ಹಾಗಾಗಿ ಬೆಟ್ಟದಲ್ಲಿ ಯಾವುದೇ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗಿ ಆಗಿದ್ದರು.
ಸಾಂಸ್ಕೃತಿಕ ನಗರಿಯಲ್ಲಿ ದಸರಾಗೆ ಭರ್ಜರಿ ಸಿದ್ಧತೆ
ಸಾಂಸ್ಕೃತಿಕ ನಗರಿ ಮೈಸೂರಲ್ಲಿ ದಸರಾ ಕಳೆಗಟ್ಟುತ್ತಿದೆ. ದಸರಾ ಆರಂಭಕ್ಕೆ 9 ದಿನಗಳು ಬಾಕಿ ಉಳಿದಿದ್ದು, ದಸರಾದ ಆಕರ್ಷಣೀಯ ಕೇಂದ್ರ ಬಿಂದು ದೀಪಾಲಂಕಾರಕ್ಕೆ ಮೈಸೂರು ಸಜ್ಜುಗೊಳ್ಳುತ್ತಿದೆ. ಈ ನಡುವೆ ಸಂಸದ ಪ್ರತಾಪ್ ಸಿಂಹ ಪ್ರಸಕ್ತ ಸಾಲಿನ ದೀಪಾಲಂಕಾರ ತಯಾರಿ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾಗೆ ಈ ಬಾರಿ ವಿಶೇಷ ದೀಪಾಲಂಕಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ದೀಪಾಲಂಕಾರ ಸಮಯ ವಿಸ್ತರಣೆಗೆ ಚಿಂತನೆ
ಈ ಬಾರಿ ಅದ್ಧೂರಿ ಹಾಗೂ ಸಾಂಪ್ರದಾಯಿಕ ದಸರಾದ ಹಿನ್ನೆಲೆಯಲ್ಲಿ ವಿಶೇಷ ದೀಪಾಲಂಕಾರ ಮಾಡಲು ಸಭೆಯಲ್ಲಿ ತೀರ್ಮಾನಿ ಸಲಾಗಿದೆ. ಮೈಸೂರು ನಗರದ ಸುತ್ತಮುತ್ತಲೂ ಸುಮಾರು 124 ಕಿಲೋ ಮೀಟರ್ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ. ಡಾ.ಪುನೀತ್ ರಾಜಕುಮಾರ್ ಸೇರಿದಂತೆ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದಸರಾ ದೀಪಾಲಂಕರದಲ್ಲಿ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಪ್ರತಿ ವರ್ಷದಂತೆ ರಾತ್ರಿ 7 ಗಂಟೆಯಿಂದ 10:30ರ ವರೆಗೆ ದೀಪಾಲಂಕಾರ ವಿಸ್ತರಣೆಗೆ ಅವಕಾಶ ಮಾಡಲಾಗಿತ್ತು. ಈ ಬಾರಿ ಅರ್ಧ ಗಂಟೆಗೂ ಹೆಚ್ಚು ಕಾಲ, ರಾತ್ರಿ 11 ಗಂಟೆಯವರೆಗೂ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.