ಮೈಸೂರು ದಸರಾ 2022: ಕೆಎಸ್ಆರ್ಟಿಸಿಗೆ ಬಂದ ಲಾಭ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
ಮೈಸೂರು, ಅಕ್ಟೋಬರ್, 12: ಈ ಬಾರಿ ಅದ್ಧೂರಿಯಾಗಿ ಮೈಸೂರು ದಸರಾ ನಡೆದಿದ್ದು, ಕೆಎಸ್ಆರ್ಟಿಸಿಗೆ ಭರ್ಜರಿ ಆದಾಯ ಬಂದಿದೆ. ರಾಜ್ಯ ಸಾರಿಗೆ ಇಲಾಖೆ ಮೊದಲೇ ನಷ್ಟದಲ್ಲಿ ನಡೆಯುತ್ತಿದೆ. ಆದರೆ ಈ ಬಾರಿಯ ದಸರಾ ಮಹೋತ್ಸವ ಕೆಎಸ್ಆರ್ಟಿಸಿಗೆ ವರದಾನ ಆಗಿದೆ.
ಕಳೆದ ಎರಡು ವರ್ಷದಲ್ಲಿ ಕೋವಿಡ್ ಕಾರಣದಿಂದ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಇದರ ಪರಿಣಾಮ ಪ್ರವಾಸೋದ್ಯಮದ ಆದಾಯ ಕುಸಿದಿತ್ತು. ಆದರೆ ಈ ಬಾರಿ ಕೆಎಸ್ಆರ್ಟಿಸಿಗೆ ಹತ್ತು ದಿನಗಳ ದಸರಾದ ಅವಧಿಯಲ್ಲಿ 2.75 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದೊರೆತಿದೆ. ಸಾಮಾನ್ಯವಾಗಿ ದಸರಾ ಸಂದರ್ಭದಲ್ಲಿ ಹಿಂದೆ 1.5 ಕೋಟಿ ಆದಾಯ ಬರುತ್ತಿತ್ತು. ಆದರೆ ಈ ಬಾರಿ ಹೆಚ್ಚುವರಿಯಾಗಿ 1.25 ಕೋಟಿ ರೂಪಾಯಿ ಆದಾಯ ಬಂದಿದೆ. ಹೀಗಾಗಿ ಕೆಎಸ್ಆರ್ಟಿಸಿ ವತಿಯಿಂದ ದಸರಾ ಕಾರ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಸಿಹಿ ವಿತರಿಸಿ ಸಂಭ್ರಮದಿಂದ ಬೀಳ್ಕೊಡುಗೆ ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದರು. ದಸರಾ ಸಂದರ್ಭದಲ್ಲಿ ಇರುವ ಮಾರ್ಗಗಳಲ್ಲಿಯೇ ಹೆಚ್ಚುವರಿ ಬಸ್ಗಳ ಸೇವೆಯನ್ನು ಬೇಡಿಕೆ ಆದಾರದಲ್ಲಿ ನೀಡಲಾಗುತ್ತದೆ. ಈ ಸೇವೆಗೆ ಕಳೆದ ಬಾರಿ ಹೆಚ್ಚುವರಿಯಾಗಿ 175 ವಾಹನ ಬಳಕೆ ಮಾಡಲಾಗಿತ್ತು.
ದಸರಾ ಮುಗಿದರೂ ಮೈಸೂರಿನತ್ತ ಪ್ರವಾಸಿಗರ ದಂಡು; ಬೆಟ್ಟಕ್ಕೆ ಆಗಮಿಸಿದ ಜನಸಾಗರ
ವಿಶೇಷ ಕಾರ್ಯಾಚರಣೆಯಿಂದ ಬಂದ ಆದಾಯ
ಕೆಎಸ್ಆರ್ಟಿಸಿಗೆ ದಸರಾ ಅವಧಿಯಲ್ಲಿ ಅಕ್ಟೋಬರ್ 1ರಿಂದ ಈವರೆಗೆ ನಡೆಸಿದ ಹೆಚ್ಚುವರಿ ಟ್ರಿಪ್ಗಳಿಂದ ಈ ಆದಾಯ ಬಂದಿದೆ. ನಿತ್ಯವೂ ಮೈಸೂರಿನಂದ ರಾಜ್ಯದ ವಿವಿಧ ಭಾಗಗಳಿಗೆ ಹೆಚ್ಚುವರಿಯಾಗಿ 250 ಬಸ್ಗಳ ಸೇವೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಗರ ವ್ಯಾಪ್ತಿಯಲ್ಲಿ 2.3 ಲಕ್ಷ, ಜಿಲ್ಲಾ ವ್ಯಾಪ್ತಿಯಲ್ಲಿ 4.2 ಲಕ್ಷ ಸೇರಿದಂತೆ ಒಟ್ಟು 6.5 ಲಕ್ಷ ಜನ ಕೆಎಸ್ಆರ್ಟಿಸಿ ಬಸ್ ಬಳಕೆ ಮಾಡಿಕೊಂಡಿದ್ದಾರೆ. ಈ ವಿಶೇಷ ಕಾರ್ಯಾಚರಣೆಯಿಂದ ಕೆಎಸ್ಆರ್ಟಿಸಿಗೆ 2.75 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.
ನಿತ್ಯ ಆಗುತ್ತಿದ್ದ ಒಟ್ಟು ಟ್ರಿಪ್ಗಳು
ದಸರಾ ಕಾರಣದಿಂದ ಹಾಗೂ ದಶಪಥ ರಸ್ತೆಯ ಬಹುತೇಕ ಭಾಗ ಬಳಕೆ ಆಗುತ್ತಿರುವುದರಿಂದ ಬೆಂಗಳೂರು-ಮೈಸೂರು ನಡುವಿನ ಸಾರಿಗೆ ಸೇವೆ ಹೆಚ್ಚಳವಾಗಿದೆ. ಸಾಮಾನ್ಯ ದಿನಗಳಲ್ಲಿ ನಿತ್ಯವೂ 150 ಟ್ರಿಪ್ ಆಗುತ್ತಿತ್ತು. ಕಳೆದ ಹತ್ತು ದಿನಗಳಿಂದ 250ಕ್ಕೂ ಹೆಚ್ಚು ಟ್ರಿಪ್ ಆಗಿದೆ. ಅಲ್ಲದೇ ಮಡಿಕೇರಿ ಕಡೆಗೂ ನಿತ್ಯ 75 ಟ್ರಿಪ್ಗೆ ಬದಲಾಗಿದೆ. 100ಕ್ಕೂ ಹೆಚ್ಚು ಟ್ರಿಪ್ಗಳಿಗೆ ವಾಹನ ಬಳಕೆ ಮಾಡಲಾಗಿದೆ ಎಂದರು.
ಪ್ಯಾಕೇಜ್ ಟೂರ್ನಿಂದ ಬಂದ ಆದಾಯ
ಕೆಎಸ್ಆರ್ಟಿಸಿ ಆರಂಭಿಸಿದ ಜಲ ದರ್ಶಿನಿ, ಗಿರಿದರ್ಶಿನಿ ಪ್ಯಾಕೇಜ್ ಟೂರ್ ಸೇವೆಯನ್ನು ಜನರು ಮುಗಿಬಿದ್ದು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ದಸರಾಗಳಲ್ಲಿ ಗರಿಷ್ಠ 4 ಲಕ್ಷ ಸಂಗ್ರಹವಾಗಿದೆ. ಆದರೆ ಈ ಬಾರಿ 6 ಲಕ್ಷ ರೂಪಾಯಿ ಆದಾಯ ಬಂದಿದೆ. 1,554 ಜನ 43 ಟ್ರಿಪ್ ಪ್ಯಾಕೇಜ್ ಟೂರ್ ಬಳಕೆ ಮಾಡಿಕೊಂಡಿದ್ದಾರೆ.
ದೀಪಾವಳಿವರೆಗೂ ವಿಸ್ತರಣೆ
ದಸರಾ ಸಂದರ್ಭದಲ್ಲಿ ಆಯೋಜಿಸಿರುವ ಗಿರಿದರ್ಶಿನಿ ಪ್ಯಾಕೇಜ್ನಡಿ ಜನರು ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಗೋಲ್ಡನ್ ಟೆಂಪಲ್, ದುಬಾರೆ, ನಿಸರ್ಗ ಧಾಮ, ಅಬ್ಬಿ ಫಾಲ್ಸ್, ರಾಜಾಸೀಟ್, ಹಾರಂಗಿ ಜಲಾಶಯ, ಕೆಆರ್ಎಸ್ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಜಲದರ್ಶಿನಿ ವಿಶೇಷ ಪ್ರವಾಸಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೀಗಾಗಿ ದೀಪಾವಳಿವರೆಗೂ ಸೇವೆ ವಿಸ್ತರಿಸಲಾಗುತ್ತಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
Kuvempu Express: ತಾಳಗುಪ್ಪ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿಗೆ 'ಕುವೆಂಪು ಎಕ್ಸ್ಪ್ರೆಸ್' ಎಂದು ನಾಮಕರಣ