ಮೈಸೂರಿನಲ್ಲಿ ಯೋಗದ್ದೇ ಧ್ಯಾನ, ಯೋಗದ್ದೇ ಕನವರಿಕೆ
Recommended Video
ಮೈಸೂರು, ಜೂನ್ 21 : ಚಾಮುಂಡಿಬೆಟ್ಟದ ತಪ್ಪಲಿನಿಂದ ಹಾದು ಬರುತ್ತಿದ್ದ ತಣ್ಣನೆ ಗಾಳಿಗೆ ಯೋಗಪಟುಗಳು ಮುಖವೊಡ್ಡಿ ಧ್ಯಾನದಲ್ಲಿ ಮುಳುಗಿದ್ದರೆ, ಮತ್ತೊಂದು ಕಡೆಯಿಂದ ಓಂಕಾರದ ಝೇಂಕಾರ. ಚುಮುಚುಮು ಚಳಿ, ಆಗಾಗ್ಗೆ ಜಿನುಗುತ್ತಿದ್ದ ಮಳೆ ಹನಿ ನಡುವೆ ಬೆಟ್ಟದ ತಪ್ಪಲಲ್ಲಿ ಯೋಗಾಯೋಗ...
ಯೋಗ ರಾಜಧಾನಿ ಎಂದೇ ಕರೆಸಿಕೊಳ್ಳುವ ಸಾಂಸ್ಕೃತಿಕ ನಗರಿಯಲ್ಲಿ ಇಂದು ಯೋಗದ್ದೇ ಧ್ಯಾನ, ಯೋಗದ್ದೇ ಕನವರಿಕೆ. 45 ಎಕರೆ ವಿಸ್ತೀರ್ಣದ ವಿಶಾಲ ಹಸಿರು ಹಾಸಿನಲ್ಲಿ ಜನಸಾಗರವೇ ನಿರ್ಮಾಣವಾಗಿತ್ತು. ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಂಡುಬಂದ ದೃಶ್ಯವಿದು.
ಈ ಬಾರಿ ಯೋಗದಲ್ಲಿ ಗಿನ್ನಿಸ್ ದಾಖಲೆಗೆ ಪ್ರಯತ್ನ ನಡೆಯದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಕಂಡುಬಂತು. ಬೆಳಿಗ್ಗೆ 5 ಗಂಟೆಯಿಂದಲೇ ರೇಸ್ ಕೋರ್ಸ್ ಗೆ ಯೋಗ ಆಕಾಂಕ್ಷಿಗಳು ಬಿಳಿ ಉಡುಪು ಧರಿಸಿ ಯೋಗ ಮ್ಯಾಟ್ ಜೊತೆ ಬರಲಾರಂಭಿಸಿದರು. ಐದಾರು ವರ್ಷದ ಮಕ್ಕಳಿಂದ ಹಿಡಿದು ವಯೋವೃದ್ಧರೂ ಯೋಗ ಪ್ರದರ್ಶಿಸಿದರು. ಸಾವಿರಾರು ಮಂದಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡಿದ್ದರು.

ಯೋಗಾಸಕ್ತರು, ನಾಗರಿಕರು, ವಿವಿಧ ಕ್ಷೇತ್ರಗಳ ಗಣ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ಸಂಘ ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು, ವಿದೇಶಿಗರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಸಾಮೂಹಿಕ ಯೋಗ ಪ್ರದರ್ಶನಕ್ಕೆ ಡೊಳ್ಳು ಬಾರಿಸುವ ಮೂಲಕ ಸಚಿವರಾದ ಜಿ.ಟಿ.ದೇವೇಗೌಡ ಮತ್ತು ಸಾ.ರಾ ಮಹೇಶ್ ಹಾಗೂ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳು ಚಾಲನೆ ನೀಡಿದರು. ಬೃಹತ್ ವೇದಿಕೆಯಲ್ಲಿ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಶಾಸಕ ರಾಮದಾಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್, ಪೊಲೀಸ್ ಆಯುಕ್ತ ಬಾಲಕೃಷ್ಣ ಮತ್ತಿತರರು ಭಾಗಿಯಾಗಿದ್ದರು.

ಸ್ಟಿವರ್ಡ್ ಗಳು, ಸ್ವಯಂ ಸೇವಕರು, ತರಬೇತುದಾರರು ಮಾರ್ಗದರ್ಶನ ಹಾಗೂ ನೆರವು ನೀಡಿದರು. ರೇಸ್ ಕೋರ್ಸ್ ಸುತ್ತಮುತ್ತಲಿನ ಮಾರ್ಗದಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿತ್ತು. ಅಂದಾಜು 30-40 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಸಾಮೂಹಿಕ ಯೋಗಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.












Click it and Unblock the Notifications