'ನಮ್ಮನ್ನು ಜೈಲಿಗಟ್ಟಿದರೂ ಮಂಗಳೂರು ಚಲೋ ನಿಲ್ಲಿಸುವುದಿಲ್ಲ'
ಮೈಸೂರು, ಸ್ಟೆಪ್ಟೆಂಬರ್ 5 : ನಮ್ಮನ್ನು ಹಿಡಿದು ಜೈಲಿಗೆ ನೂಕಲು ಮುಂದಾದರೂ ನಾವು ಅಂದುಕೊಂಡಿರುವ 'ಮಂಗಳೂರು ಚಲೋ' ಬೈಕ್ ಜಾಥಾವವನ್ನು ನಡೆಸಿಯೇ ತೀರುತ್ತೇವೆ ಎಂದು ಮೈಸೂರು ಬಿಜೆಪಿ ನಗರ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.
'ಮಂಗಳೂರು ಚಲೋ' ಕುರಿತಾಗಿ ಮೈಸೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈಸೂರು ಬಿಜೆಪಿ ಯುವ ಮೋರ್ಚಾವು ಮೈಸೂರಿನಿಂದ ಮಂಗಳೂರಿಗೆ ಹಮ್ಮಿಕೊಂಡಿರುವ ಬೈಕ್ ಜಾಥಾ ನಡೆದೆ ನಡೆಯುತ್ತದೆ ಎಂದರು".

ಪೊಲೀಸರು ಬಂಧಿಸಿದರೆ ಜೈಲಿಗೆ ಹೋಗುತ್ತೇವೆ ಹೊರತು ಮಂಗಳೂರು ಚಲೋ ನಿಲ್ಲಿಸುವುದಿಲ್ಲ. ಪ್ರತಿಭಟನೆ ಬಂದೋಬಸ್ತ್ ಮಾಡುವ ತಾಕತ್ ಪೊಲೀಸ್ ಇಲಾಖೆಗೆ ಇಲ್ಲವೇ, ನಮ್ಮ ಪ್ರತಿಭಟನೆಗೆ ಗೃಹ ಇಲಾಖೆ ಹೆದರಿದ್ಯಾ ಎಂದು ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿದರು.
ಸೆಪ್ಟೆಂಬರ್ 6ರ ಬೆಳಗ್ಗೆ 9.30ಕ್ಕೆ ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ಮೈಸೂರು ಮೂರು ಮಂಡಲದ ಸಹಸ್ರಾರು ಜನ ಕಾರ್ಯಕರ್ತರು ಮಂಗಳೂರಿನ ಕಡೆ ಹೊರಡಲಿರುವ ಬೈಕ್ ಜಾಥಾದಲ್ಲಿ ಪಾಲ್ಗೊಳ್ಳುವರು.
ಸರ್ಕಾರ ಪೊಲೀಸ್ ಮೂಲಕ ನಮ್ಮನ್ನು ತಡೆಯಲು ಪ್ರಯತ್ನಿಸಿದರೆ ಅದರ ನೇರ ಪರಿಣಾಮವನ್ನು ಎದುರಿಸಬೇಕಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ. 'ಸಾಮಾಜಿಕ ಹೋರಾಟ, ಪ್ರತಿಭಟನೆ, ಜಾಥಾವನ್ನು ತಡೆಯುವುದು ಪ್ರಜಾಪ್ರಭುತ್ವ ವಿರೋಧಿ, ಹೋರಾಟಗಾರರಿಗೆ ಸರ್ಕಾರ ರಕ್ಷಣೆ ನೀಡಬೇಕೆ ಹೊರತು, ಹತ್ತಿಕ್ಕುವ ಪ್ರಯತ್ನ ನಡೆಸುವುದು ಖಂಡನೀಯವೆಂದು' ಸಿಎಂ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಅಂದು ಕಾಂಗ್ರೆಸ್ ಪಕ್ಷ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿತ್ತು, ಆ ಸಮಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವಾಗದಂತೆ ಅಂದಿನ ಬಿಜೆಪಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಿತೇ ಹೊರತು ಸಾಮಾಜಿಕ ಹೋರಾಟವನ್ನು ಹತ್ತಿಕ್ಕಲಿಲ್ಲ ಎಂದರು.
ಸೆ.7ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆಯ ಸಭೆ ನಡೆಸಲಾಗುವುದು ಎಂದು ತಿಳಿಸಿದರು.












Click it and Unblock the Notifications