Bengaluru-Mysuru Vande Bharat Express: ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭದಿಂದ ಮೈಸೂರು-ಬೆಂಗಳೂರು ಪ್ರಯಾಣಿಕರಿಗೇಕೆ ಆತಂಕ?
ಮೈಸೂರು, ಮಾರ್ಚ್ 30: ಈಗಾಗಲೇ ಬೆಂಗಳೂರು- ಮೈಸೂರು ಮಾರ್ಗದಲ್ಲಿ ಐದು ಹೊಸ ರೈಲುಗಳನ್ನು ನೈಋತ್ಯ ರೈಲ್ವೆ (ಎಸ್ಡಬ್ಲ್ಯುಆರ್) ಆರಂಭಿಸಿದ್ದು, ಇವುಗಳಿಗೆ ಸರಿಯಾಗಿ ಪ್ಲಾಟ್ಫಾರ್ಮ್ ಇಲ್ಲದೆ ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಮತ್ತೆ ಹೊಸ ವಂದೇ ಭಾರತ್ ರೈಲು ಆರಂಭವಾಗುತ್ತಿದ್ದು, ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ಐದು ರೈಲುಗಳಿಂದ ಮೈಸೂರು ರೈಲು ನಿಲ್ದಾಣ ಮತ್ತು ಬೆಂಗಳೂರು ರೈಲು ನಿಲ್ದಾಣದಲ್ಲಿ ಅಡಚಣೆಯ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಪ್ರಯಾಣದ ಸಮಯ ಕೂಡ ಹೆಚ್ಚಾಗಿದೆ. ಇದರ ನಡುವೆ ಏಪ್ರಿಲ್ 5 ರಿಂದ ಬೆಳಗ್ಗೆ 6 ಗಂಟೆಗೆ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭವಾಗಲಿದೆ. ಇದು ಈ ಮಾರ್ಗದ ಪ್ರಯಾಣಿಕರಲ್ಲಿ ಹೊಸ ತಲೆ ನೋವು ತಂದಿದೆ. ಹೊಸ ವಂದೇ ಭಾರತ್ ರೈಲಿನಿಂದಾಗಿ ಬೆಳಗಿನ ರೈಲುಗಳಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಆತಂಕ ಪಡುತ್ತಿದ್ದಾರೆ.

ರೈಲು ಸಮಯದಲ್ಲಿ ವ್ಯತ್ಯಯದ ಆತಂಕ!
ಸಾಮಾನ್ಯ ಪ್ರಯಾಣಿಕರ ಪ್ರಕಾರ, ಪ್ಲಾಟ್ಫಾರ್ಮ್ ದಟ್ಟಣೆಯಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯ ನಾಲ್ಕು ಗಂಟೆಗಳಾಗಿವೆ. ರೈಲು ವೇಳಾಪಟ್ಟಿ ಮತ್ತು ಸದ್ಯಕ್ಕೆ ರೈಲುಗಳು ಬರುವ ಸಮಯಗಳು ಹೊಂದಿಕೆಯಾಗುತ್ತಿಲ್ಲ ಎಂದು ಹಲವರು ಆರೋಪಿಸಿದ್ದಾರೆ. ಈ ಮೊದಲು ಬೆಳಗ್ಗೆ 9.30 ಕ್ಕೆ ಬೆಂಗಳೂರು ತಲುಪುತ್ತಿದ್ದ ಚಾಮುಂಡಿ ಎಕ್ಸ್ಪ್ರೆಸ್ ಈಗ 9.40 ಅಥವಾ 9.50 ಕ್ಕೆ ತಲುಪುತ್ತಿದೆ. ಇದರಿಂದ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗುತ್ತಿದೆ.
ಮೈಸೂರಿನಿಂದ ಬರುವ ಚಾಮುಂಡಿ ಎಕ್ಸ್ಪ್ರೆಸ್ ಬೆಳಗ್ಗೆ 8.40 ಗಂಟೆಗೆ ಕೆಂಗೇರಿ ತಲುಪುತ್ತದೆ. ಆದರೆ, ಅಲ್ಲಿಂದ ಕೆಎಸ್ಆರ್ ನಿಲ್ದಾಣ ತಲುಪಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ ಎಂದು ಆರೋಪಿಸಿದ್ದಾರೆ. ಇದು ಬರೀ ಒಂದು ರೈಲಿನ ಕಥೆಯಲ್ಲ. ಬದಲಾಗಿ ಎಲ್ಲಾ ರೈಲುಗಳು ರಾಮನಗರ ಅಥವಾ ಕೆಂಗೇರಿಯಲ್ಲಿ ಒಂದು ಗಂಟೆ ನಿಲ್ಲುತ್ತವೆ. ಆದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಪ್ರಯಾಣಿಕರು.

ಮೈಸೂರು ರೈಲ್ವೆ ಪ್ರಯಾಣಿಕರ ವೇದಿಕೆಯ ಎಸ್ ಯೋಗೇಂದ್ರ ಅವರ ಪ್ರಕಾರ, "ಅಡಚಣೆಯ ಸಮಸ್ಯೆಯಿಂದಾಗಿ ಮೈಸೂರು ಮತ್ತು ಬೆಂಗಳೂರು ನಗರ ರೈಲು ನಿಲ್ದಾಣಗಳಲ್ಲಿ ವಿಳಂಬವಾಗುತ್ತಿದೆ. ಪ್ಲಾಟ್ಫಾರ್ಮ್ಗೆ ಹೋಗಲು ಪರ್ಮಿಷಶ್ ಸಿಗುವವರಗೂ ಎರಡೂ ನಗರಗಳ ಹೊರವಲಯದಲ್ಲಿ ರೈಲು ನಿಲ್ಲಿಸಲಾಗುವುದು" ಎಂದು ಹೇಳಿದ್ದಾರೆ.
ನೈಋತ್ಯ ರೈಲ್ವೆ (SWR) ಎಕ್ಸ್ಪ್ರೆಸ್ ಮತ್ತು MEMU ರೈಲುಗಳು ಸೇರಿದಂತೆ 35 ಜೋಡಿ ರೈಲುಗಳನ್ನು ಮೈಸೂರು- ಬೆಂಗಳೂರು ಮಾರ್ಗದಲ್ಲಿ ಕಾರ್ಯ ನಿರ್ವಹಿಸುತ್ತವೆ. ಬೆಂಗಳೂರು ಮತ್ತು ಮೈಸೂರು ನಡುವೆ ಪ್ರತಿದಿನ ಪ್ರಯಾಣಿಸುವ ಸುಮಾರು 30,000 ಪ್ರಯಾಣಿಕರಿಗೆ ಮತ್ತು ದಾರಿಯುದ್ದಕ್ಕೂ ಇರುವ ಇತರ ಸ್ಥಳಗಳಿಗೆ ಈ ರೈಲುಗಳು ಅತ್ಯಗತ್ಯ ಎಂದಿದ್ದಾರೆ.
ನೈರುತ್ಯ ರೈಲ್ವೆ ಅಧಿಕಾರಿಯೊಬ್ಬರು ಮಾತನಾಡಿ, "ಮೈಸೂರಿನ ರೈಲುಗಳು ಕೆಎಸ್ಆರ್ ಬೆಂಗಳೂರು, ಸರ್ ಎಂ ವಿಶ್ವೇಶ್ವರಯ್ಯ, ಕಂಟೋನ್ಮೆಂಟ್, ಯಶವಂತಪುರ ಮತ್ತು ಯಲಹಂಕ ಸೇರಿದಂತೆ ಇತರ ನಿಲ್ದಾಣಗಳಲ್ಲಿ ನಿಲ್ಲುತ್ತವೆ. ನಾವು ಪ್ಲಾಟ್ಫಾರ್ಮ್ಗಳನ್ನು ಅವುಗಳ ಪೂರ್ಣ ಸಾಮರ್ಥ್ಯಕ್ಕೆ ಒಳಗಾಗಿ ಬಳಸುತ್ತಿದ್ದೇವೆ. ಆದರೂ, ರೈಲುಗಳ ಆಗಮನ ಮತ್ತು ನಿರ್ಗಮನದಲ್ಲಿ ತೊಂದರೆಗಳಾಗುತ್ತಿವೆ. ಇದು ಅದೇ ಮಾರ್ಗದಲ್ಲಿ ಇತರ ರೈಲುಗಳ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುತ್ತಿದೆ" ಎಂದಿದ್ದಾರೆ.
ಇನ್ನು, "ಇದನ್ನು ಕಡಿಮೆ ಮಾಡಲು ರೈಲ್ವೆಯು ಗತಿ ಶಕ್ತಿ ಯೋಜನೆಯಡಿ ಪ್ಲಾಟ್ಫಾರ್ಮ್ ಸಂಖ್ಯೆ 5, 6 ಮತ್ತು 7 ಅನ್ನು ವಿಸ್ತರಿಸುವ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಇದರಿಂದ ಭವಿಷ್ಯದಲ್ಲಿ ಹೆಚ್ಚಿನ ರೈಲುಗಳನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಬೆಂಗಳೂರು ಮೈಸೂರು ಮಾರ್ಗಕ್ಕೆ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಕಳೆದ ವರ್ಷವೇ ಅನುಮೋದಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
(ಮಾಹಿತಿ ಕೃಪೆ - ಟೈಮ್ಸ್ ಆಪ್ ಇಂಡಿಯಾ)












Click it and Unblock the Notifications