ಯುಗಾದಿಯಂದು ಪುಣ್ಯಸ್ನಾನಕ್ಕೆ ತೆರಳಿದ್ದ ಇಬ್ಬರು ನೀರುಪಾಲು
ಮೈಸೂರು, ಮಾರ್ಚ್ 19 : ಯುಗಾದಿಯಂದು ಪುಣ್ಯಸ್ನಾನಕ್ಕೆಂದು ನದಿಗೆ ತೆರಳಿದ ವೇಳೆ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವವನ್ನಪ್ಪಿರುವ ದುರ್ಘಟನೆ ತಿ.ನರಸೀಪುರ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ನಡೆದಿದೆ.
ತಾಲೂಕಿನ ಬನ್ನಹಳ್ಳಿಹುಂಡಿ ಗ್ರಾಮದ ಪ್ರಮೋದ್ (12) ಹಾಗೂ ತೇಜೇಂದ್ರಪ್ರಸಾದ್ (17) ಮೃತ ಬಾಲಕರು. ನುರಿತ ಈಜುಗಾರರು ನದಿಯಲ್ಲಿ ಮುಳುಗಿರುವ ಬಾಲಕರಿಗಾಗಿ ಸತತ ಒಂದು ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿದರು. ಆಗ ತೇಜೇಂದ್ರಪ್ರಸಾದ್ ಸಿಕ್ಕಿದ್ದ. ನೀರು ಸೇವಿಸಿ ನಿತ್ರಾಣಗೊಂಡಿದ್ದ ತೇಜೇಂದ್ರಪ್ರಸಾದ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರು ಮದುವೆಗೆ ನಿರಾಕರಣೆ: ಯುವತಿ ಆತ್ಮಹತ್ಯೆ
ಈಗಾಗಲೇ ಮದುವೆಯಾಗಿ ಪತಿ ಸಾವನ್ನಪ್ಪಿ, ನಂತರ ಮರುಮದುವೆಗೆ ಮುಂದಾದ ಯುವತಿಯ ನಿರ್ಧಾರಕ್ಕೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜೋಡಿಯೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಜಿಲ್ಲೆಯ ಹುಣಸೂರು ತಾಲೂಕಿನ ಗಾವಡಗೆರೆಯಲ್ಲಿ ಘಟನೆ ನಡೆದಿದೆ. ಕೆ.ಆರ್. ನಗರ ತಾಲೂಕು ಮದೇನಹಳ್ಳಿ ನಿವಾಸಿ ಜಮುನಾ(28) ಸಾವಿಗೆ ಶರಣಾದ ಮಹಿಳೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ದಿಲೀಪ್(20) ಸ್ಥಿತಿ ಗಂಭೀರವಾಗಿದೆ. ದಿಲೀಪ್ ಹುಣಸೂರು ತಾಲೂಕಿನ ತಿಂಡಾಳು ಗ್ರಾಮದ ಶ್ರೀನಿವಾಸ ಶೆಟ್ಟಿ ಎಂಬುವರ ಪುತ್ರ ಎಂದು ತಿಳಿದು ಬಂದಿದೆ.
ಪತಿಯಿಂದ ದೂರವಾಗಿದ್ದ ಮಹಿಳೆ ತನಗಿಂತ ವಯಸ್ಸಿನಲ್ಲಿ ಚಿಕ್ಕವನಾಗಿದ್ದ ಯುವಕನ್ನು ಪ್ರೀತಿಸಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗಲು ಮುಂದಾಗಿದ್ದರು. ಆದರೆ ಇದಕ್ಕೆ ಯುವಕನ ಮನೆಯವರು ನಿರಾಕರಿಸಿದ ಹಿನ್ನೆಲೆಯಲ್ಲಿ ಇಬ್ಬರು ಗಾವಡಗೆರೆ ಪೆಟ್ರೋಲ್ ಬಂಕ್ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ