ನಾನು ಪತ್ರಕರ್ತನಾಗಲು ಹೆಗ್ಗಡೆಯವರು ಸಹ ಮೂಲ ಕಾರಣ: ಪ್ರತಾಪ್ ಸಿಂಹ
ಮೈಸೂರು, ನವೆಂಬರ್.2: ಸರ್ಕಾರ ಮಾಡುವ ಎಲ್ಲಾ ಕಾರ್ಯಕ್ರಮಗಳನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ. ಹೀಗೆ ಶ್ರೀ ಕ್ಷೇತ್ರ ಜನಪರ ಕಾರ್ಯಕ್ರಮಗಳನ್ನು ಮಾಡಿ ನಮಗೆ ಮಾರ್ಗದರ್ಶಕರಾಗಲಿ ಎಂದು ಸಚಿವ ಜಿಟಿ ದೇವೇಗೌಡ ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಡಾ.ವೀರೇಂದ್ರ ಹೆಗ್ಗಡೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಹೆಗ್ಗಡೆಯವರಿಗೆ ಆಯೋಜಿಸಲಾಗಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಧರ್ಮಸ್ಥಳ ಅಭಿವೃದ್ಧಿ ಸಂಘದಿಂದ ಸಾಕಷ್ಟು ಪ್ರಯೋಜನವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸ್ವಸಹಾಯ ಸಂಘದಿಂದ ಮಹಿಳೆಯರಿಗೆ ಅನುಕೂಲಗಳಾಗಿವೆ. ನಿಮ್ಮ ಕಷ್ಟಗಳನ್ನ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಸಹಾಯ ಸಹಾಯ ಮಾಡುತ್ತಿವೆ. ನನ್ನ ತಾಯಿ ಕೂಡ ಸ್ವಸಹಾಯ ಸಂಘದಲ್ಲಿ ಇದ್ದರು. ನಾನು ಕೂಡ ಹಸುವಿನಲ್ಲಿ ಹಾಲು ಕರೆದು ದುಡ್ಡು ತಂದು ಕಟ್ಟುತ್ತಿದ್ದೆ.

ಸಂಸದ ಪ್ರತಾಪ್ ಸಿಂಹ ಮಾತನಾಡಿ ನಾನು ಪತ್ರಕರ್ತನಾಗಲು ವೀರೇಂದ್ರ ಹೆಗ್ಗಡೆಯವರು ಸಹ ಮೂಲ ಕಾರಣ. ಅನೇಕ ಮಹಿಳೆಯರು ಸ್ವಾವಲಂಬನೆಯಿಂದ ಬದುಕುತ್ತಿದ್ದಾರೆ ಎಂದರೆ ಸ್ವಸಹಾಯ ಸಂಘಗಳಿಂದ ಎಂದು ತಿಳಿಸಿದರು.
ಪ್ರತಾಪ್ ಸಿಂಹ ಹಾಗೂ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಇಬ್ಬರೂ ಅಕ್ಕ-ಪಕ್ಕದಲ್ಲಿಯೇ ಕುಳಿತಿದಿದ್ದರೂ ಮಾತನಾಡಿಸದೇ ತಮ್ಮ ಮುನಿಸನ್ನು ವೇದಿಕೆಯಲ್ಲೇ ಬಹಿರಂಗಪಡಿಸಿದ್ದಾರೆ.ಪ್ರತಾಪ ಸಿಂಹ ಶಾಸಕ ನಾಗೇಂದ್ರ ಜೊತೆ ಮಾತನಾಡಿದರೂ, ಪಕ್ಕದಲ್ಲೇ ಇದ್ದ ತನ್ನ ಹಳೆಯ ಸ್ನೇಹಿತ ವಿಜಯಶಂಕರ್ ಕಡೆಗೆ ನೋಡಲಿಲ್ಲ.

ಈ ವೇಳೆ ಸಾ.ರಾ.ಮಹೇಶ್ ಆಗಮಿಸುತ್ತಿದ್ದಂತೆ ಶಾಸಕ ನಾಗೇಂದ್ರ ಬೇರೆ ಕುರ್ಚಿಗೆ ತೆರಳಿದರೆ, ಇತ್ತ ಪ್ರತಾಪ್ ಸಿಂಹ ಕೂಡ ಮತ್ತೊಂದು ಖುರ್ಚಿಯಲ್ಲಿ ಆಸೀನರಾದರು. ಮಹೇಶ್ ಆಸೀನರಾದ ಎಡ ಹಾಗೂ ಬಲದಲ್ಲಿ ಹಾಲಿ ಹಾಗೂ ಮಾಜಿ ಸಂಸದರು ಕುಳಿತು ತಮ್ಮ ಮುನಿಸನ್ನು ಬಹಿರಂಗ ವೇದಿಕೆಯಯಲ್ಲೇ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗುರುಲಿಂಗ ಜಂಗಮದೇವ ಮಠದ ಶ್ರೀ ನಟರಾಜ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.












Click it and Unblock the Notifications