Contaminated Water: ಕಲುಷಿತ ನೀರು ಸೇವಿಸಿ 114 ಮಂದಿ ಅಸ್ವಸ್ಥ: ಸಿಎಂ ಕ್ಷೇತ್ರದಲ್ಲಿ ಏನಾಯ್ತು?
ಮೈಸೂರು ಮೇ 23: ಕಲುಷಿತ ನೀರು ಸೇವಿಸಿ 114 ಮಂದಿ ಅಸ್ವಸ್ಥಗೊಂಡ ಘಟನೆ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ನಡೆದಿದೆ. ಅಲ್ಲದ ಓರ್ವ ಯುವಕ ಬಲಿಯಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ವರುಣಾ ಕ್ಷೇತ್ರದ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಕುಲುಷಿತ ನೀರು ಸೇವಿಸಿ ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದೆಲ್ಲೆಡೆ ಮಳೆ ಜೋರಾಗಿದೆ. ಇದರಿಂದಾಗಿ ಮೋರಿ ಚರಂಡಿ ನೀರು ಮಿಶ್ರಿತವಾಗಿ ಮಳೆ ನೀರು ಕಲುಷಿತವಾಗುತ್ತಿದೆ. ಇಂತಹ ನೀರನ್ನು ಗ್ರಾಮಗಳಿಗೆ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನೀರು ಕುಡಿದವರಿಗೆ ವಾಂತಿ ಭೇದಿ ಶುರುವಾಗಿದ್ದು ಕೆ.ಸಾಲುಂಡಿಯಲ್ಲಿ ಓರ್ವ ಯುವಕ ಮೃತಪಟ್ಟಿದ್ದಾನೆ. ಅಲ್ಲದೆ 94 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ 3 ಜನರಿಗೆ ಕಾಲರ ರೋಗ ಇರುವುದು ಪತ್ತೆಯಾಗಿದೆ. ಉಳಿದಂತೆ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದಾರೆ.
ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಗ್ರಾಮಸ್ಥರಿಗೆ ಧೈರ್ಯ ತುಂಬಿ ಸೂಕ್ತ ಚಿಕಿತ್ಸೆ ಹಾಗೂ ನೀರು ಪರಿಶೀಲನೆಯ ಭರವಸೆ ನೀಡಿದ್ದಾರೆ.
ಆಸ್ಪತ್ರೆ ಭೇಟಿ ಬಳಿಕ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹದೇವಪ್ಪ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನೀತಿ ಸಂಹಿತೆ ಜಾರಿ ಇರುವುದರಿಂದ ಗ್ರಾಮಕ್ಕೆ ಬರಲು ಸಾಧ್ಯವಾಗಿರಲಿಲ್ಲ. ದೂರವಾಣಿ ಮೂಲಕ ಮಾಹಿತಿಯನ್ನು ಪಡೆಯುತ್ತಿದೆ. ನೀತಿ ಸಂಹಿತೆಗೂ ಇದಕ್ಕೂ ಏನೂ ಸಂಬಂಧವಿಲ್ಲ ಮೊದಲು ಗ್ರಾಮಕ್ಕೆ ಭೇಟಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಅವರ ಆದೇಶದ ಮೇರೆಗೆ ನಾನು ಬಂದಿದ್ದೇನೆ ಎಂದರು.

ಇನ್ನು ಮುಂದೆ ಮಳೆ ಹೆಚ್ಚಾಗಲಿದೆ. ಆಗ ನೀರು ಕಲುಷಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹದೇವಪ್ಪ ಅವರು ಹೇಳಿದರು. ಅಲ್ಲದೆ ಚರಂಡಿಗಳನ್ನು ಆಗಾಗ ಸ್ವಚ್ಚಗೊಳಿಸಿ ಪಾಡರ್ ಸಿಂಪಡಣೆ ಮಾಡಬೇಕು. ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಆಗದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಮೂರು ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಜೊತೆಗೆ ನೀರು ಕಲುಷಿತಗೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳಲು ಡಾ ಎಚ್ಸಿ ಮಹದೇವಪ್ಪ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.












Click it and Unblock the Notifications