ಮಂಡ್ಯದಲ್ಲಿ ಎಂಎಲ್ಸಿ ಪುತ್ರನಿಂದ ಪತ್ರಕರ್ತರ ಮೇಲೆ ಪೊಲೀಸ್ ದೂರು
ಮಂಡ್ಯ, ಏಪ್ರಿಲ್ 30: ಎಂಎಲ್ಸಿ ಶ್ರೀಕಂಠೇಗೌಡ ಅವರ ಪುತ್ರ ಕೃಷಿಕ್ ಗೌಡ ಅವರು ನಾಲ್ವರು ಪತ್ರಕರ್ತರ ಮೇಲೆ ಪೊಲೀಸ್ ದೂರು ಕೊಟ್ಟಿದ್ದಾರೆ.
ಮಂಡ್ಯ ನಗರದಲ್ಲಿ ಕೆಲವು ದಿನಗಳ ಹಿಂದಷ್ಟೆ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಕೃಷಿಕ್ ಗೌಡ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದರು.
ಮಂಡ್ಯದ ತಮ್ಮ ಮನೆ ಸಮೀಪದಲ್ಲಿ ಪತ್ರಕರ್ತರಿಗೆ ಕೊರೊನಾ ವೈರಸ್ ಪರಿಕ್ಷೆ ನಡೆಸುವುದು ಬೇಡ ಎಂಬುದು ಇವರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಘಟನೆಯನ್ನು ಖಂಡಿಸಿ, ಶಾಸಕರಿಗೆ ಬುದ್ದಿ ಹೇಳಿದ್ದರು.
ಅದರೆ ಇದೀಗ ಈ ಪ್ರಕರಣ ಮತ್ತೆ ಮುಂದುವರಿದಿದ್ದು, ಅಂದು ಪರ್ತಕರ್ತರ ಮೇಲೆ ಉದ್ಧಟತನ ತೋರಿದ್ದವರೇ ಈಗ ಪತ್ರಕರ್ತರ ವಿರುದ್ಧ ದೂರು ಕೊಟ್ಟಿದ್ದಾರೆ. ನನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕೃಷಿಕ್ ಗೌಡ ಅವರು ನಾಲ್ಕು ಪತ್ರಕರ್ತರ ವಿರುದ್ಧ ದೂರು ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.