ಬಹಿರಂಗ ಚರ್ಚೆಗೆ ಬಿಜೆಪಿ ಸದಾ ಸಿದ್ಧ : ಶಾಸಕ ರಾಮ್ ದಾಸ್
ಮೈಸೂರು, ಮಾರ್ಚ್ 16 : ರಾಜ್ಯದಲ್ಲಿ ಬಿಜೆಪಿ ಲೋಕಸಭಾ ಸದಸ್ಯರು ಮಾಡಿರುವ ಅಭಿವೃದ್ಧಿ ಬಗ್ಗೆ ಚರ್ಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಸವಾಲನ್ನು ಸ್ವೀಕರಿಸಿದ್ದೇನೆ. ಮೈಸೂರಿನಲ್ಲೇ ಚರ್ಚೆಗೆ ನಾವು ಸಿದ್ಧ ಎಂದು ಶಾಸಕ ಬಿಜೆಪಿ ನಾಯಕ ರಾಮದಾಸ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಅವರು ಅಷ್ಟೇ ಅಲ್ಲ. ಬಿಜೆಪಿಯ ಯಾವುದೇ ಸಂಸದರು ಅಭಿವೃದ್ಧಿ ಮಾಡಿಲ್ಲ.
ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದ್ದರು. ಅದನ್ನು ಸ್ವಾಗತಿಸಿದ್ದು ಬಿಜೆಪಿ ಸಂಸದರು ದಾಖಲೆಗಳೊಂದಿಗೆ ಸಾಧನೆಯನ್ನು ಮಂಡಿಸಲು ಸಿದ್ಧರಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಹಿಂದಿನ ಯುಪಿಎ - 1, ಯುಪಿಎ- 2, ಸರ್ಕಾರಗಳ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಸಾಧನೆಗಳನ್ನು ದಾಖಲೆಗಳ ಸಹಿತ ಒದಗಿಸಲಿ ಎಂದು ಸವಾಲು ಹಾಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಕೃಷಿ ಕ್ಷೇತ್ರ, ಸಾರ್ವಜನಿಕ ವಲಯ, ಕಾರ್ಮಿಕ ವರ್ಗ , ಯುವಪೀಳಿಗೆ ಸೇರಿದಂತೆ ವಿವಿಧ ವಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕೊಡುಗೆ, ತೆರಿಗೆ ನೀತಿ, ದುರ್ಬಲ ವರ್ಗದ ಮಹಿಳೆಯರ ಸಬಲೀಕರಣ ಮತ್ತು ಆದ್ಯತೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನುತ್ಪಾದಿತ ಸ್ವತ್ತಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ನಾವು ಬದ್ಧ ಎಂದು ತಿಳಿಸಿದ್ದಾರೆ.
ಅಲ್ಲದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಯುಪಿಎ ಸರ್ಕಾರದಿಂದ ರಾಜ್ಯಕ್ಕೆ ಬಂದ ಆರ್ಥಿಕ ಸಹಾಯವೆಷ್ಟು ಮತ್ತು ಯೋಜನೆಗಳು ಯಾವುವು? ಎನ್ ಡಿ ಎ ಸರ್ಕಾರದಲ್ಲಿ ಬಿಡುಗಡೆಯಾಗಿರುವ ಅನುದಾನ ಎಷ್ಟು ಮತ್ತು ಯೋಜನೆಗಳು ಯಾವುವು ? ಇವೆಲ್ಲವನ್ನೂ ಕುರಿತು ಚರ್ಚೆ ನಡೆಯಲಿ. ಅದಕ್ಕೆ ಸೂಕ್ತ ದಿನ ಸಮಯ ಮತ್ತು ಸ್ಥಳವನ್ನು ಸಿದ್ದರಾಮಯ್ಯ ಅವರೇ ನಿಗದಿ ಮಾಡಲಿ ಎಂದಿದ್ದಾರೆ.












Click it and Unblock the Notifications