ಹುಣಸೂರು ಹೈರಿಗೆ ಕೆರೆಗೆ ಹೈಟೆಕ್ ತಂತ್ರಜ್ಞಾನ, ರೈತರಲ್ಲಿ ಸಂತಸ
ಮೈಸೂರು,ಮಾರ್ಚ್,01: ಈಗಾಗಲೇ ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಿಳೆಯರು ಬಿಂದಿಗೆ ಹಿಡಿದು ಕಿಲೋಮೀಟರ್ ಗಟ್ಟಲೇ ನಡೆಯುವ ಪರಿಪಾಠ ನಿಲ್ಲಬೇಕಾದರೆ ಗ್ರಾಮೀಣ ಪ್ರದೇಶದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಅಂತರ್ಜಲ ಮಟ್ಟ ಸುಧಾರಿಸುವುದಲ್ಲದೇ ಬೇಸಿಗೆಯಲ್ಲಿನ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಬಹುದು.
ನೀರಿನ ಸಮಸ್ಯೆ ಅರಿತ ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಹೈರಿಗೆ ಕೆರೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದು, ಮಂಗಳವಾರ ಚಾಲನೆ ನೀಡುವುದರ ಮೂಲಕ ಜೂನ್ ವೇಳೆಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ.[ಒಡಲಲಿ ವಿಷ ತುಂಬಿಕೊಂಡ ಯಮಲೂರು ಕೆರೆಯ ಕಥೆ ವ್ಯಥೆ]

ಹೈರಿಗೆ ಕೆರೆ ಬಗ್ಗೆ ಮಾಹಿತಿ:
ಸುಮಾರು 3.94 ಕೋಟಿ ರೂ ವೆಚ್ಚದಡಿಯಲ್ಲಿ ಹೈರಿಗೆ ಕೆರೆ ಅಭಿವೃದ್ಧಿಯಾಗಲಿದ್ದು. ಇದರಿಂದ 1750 ಎಕರೆ ಪ್ರದೇಶಕ್ಕೆ ನೀರು ದೊರೆಯಲಿದೆ. 525 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ಹೈರಿಗೆ ಕೆರೆಯು 0.80 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಈ ಕೆರೆಯ ಬಗ್ಗೆ ಪರಿಶೀಲನೆ ನಡೆಸಲು ಚೆನ್ನೈನಿಂದ ಆಗಮಿಸಿದ ತಂಡವು ಪರಿಶೀಲನೆ ನಡೆಸಿ ಹೈಟೆಕ್ ತಂತ್ರಜ್ಞಾನವಾದ ಗೊನೆಂಬ್ರಾನೆ ಕಬ್ಬಿಣದ ಶೀಟ್ ಅಳವಡಿಸಿದರೆ ನೀರು ಪೋಲಾಗುವುದನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದೆ.[ಬೆಂಗಳೂರಿನ ಕೆರೆಗಳು ನಕ್ಷೆಯಲ್ಲಿ ಮಾತ್ರ ಇವೆ]
ರೈತರ ಮೊಗದಲ್ಲಿ ನಗು
ಹೈರಿಗೆ ಕೆರೆಯಲ್ಲಿ ನೀರು ಸೋರಿಕೆಯಾಗುತ್ತಿರುವುದು ಕಂಡ ಅಚ್ಚುಕಟ್ಟು ಪ್ರದೇಶದ ರೈತರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಇಂಜಿನಿಯರ್ ಗಳು ನೀರು ಸೋರಿಕೆ ತಡೆಯಲು ತೆಗೆದುಕೊಂಡ ಕ್ರಮಗಳು ವಿಫಲವಾಗಿದ್ದವು. ಇದೀಗ ಕೆರೆ ಸಂರಕ್ಷಣೆ ವಿಚಾರದಲ್ಲಿ ಹುಣಸೂರು ಶಾಸಕ ಹೆಚ್.ಪಿ. ಮಂಜುನಾಥ್ ಅವರು ತೆಗೆದುಕೊಂಡ ಕಾರ್ಯ ಎಲ್ಲರ ಮೆಚ್ಚುಗೆಗೆ ಒಳಗಾಗಿದ್ದು, ರೈತರು ಖುಷಿಪಟ್ಟಿದ್ದಾರೆ.[ಮೈಸೂರಿನ ಕಾರಂಜಿಕೆರೆಯಲ್ಲಿ ನಿತ್ಯ ಪ್ರೇಮೋತ್ಸವ]
ಸರ್ಕಾರ ಮಾಡಬೇಕಾಗಿರುವುದು ಏನು?
ಪೂರ್ವಜರ ದೂರದೃಷ್ಟಿಯಿಂದ ನಿರ್ಮಾಣವಾದ ಬಹಳಷ್ಟು ಕೆರೆಗಳು ಒತ್ತುವರಿಯಾಗಿವೆ. ಇನ್ನು ಕೆಲವು ಕೆರೆಗಳು ಹೂಳು ತುಂಬಿ ಉಪಯೋಗಕ್ಕೆ ಬಾರದಂತಾಗಿವೆ. ಈ ಕೆರೆಗಳ ಅಭಿವೃದ್ಧಿ ಬಗ್ಗೆ ಸರ್ಕಾರಗಳು ಕೈಗೊಂಡಿರುವ ಯೋಜನೆಗಳು ಸರಿಯಾಗಿಲ್ಲ. ಒಂದು ವೇಳೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕೆರೆಗಳ ಹೂಳೆತ್ತಿ, ಒತ್ತುವರಿ ತೆರವುಗೊಳಿಸಿ ಕೆರೆಗಳನ್ನು ಸಂರಕ್ಷಿಸಿದ್ದಲ್ಲಿ ನಿಜಕ್ಕೂ ನೀರಿನ ಸಮಸ್ಯೆ ಕಾಡಲಾರದು.[ಕೆರೆಗೆ ಉರುಳಿದ ಕಾರು, 7 ಟೋಯೋಟಾ ಉದ್ಯೋಗಿಗಳ ಸಾವು]
ಮಳೆಗಾಲದಲ್ಲಿ ಸಮೀಪದ ನದಿಗಳಿಂದ ನೀರನ್ನು ಕೆರೆಗೆ ಹಾಯಿಸಿ ನೀರನ್ನು ಸಂಗ್ರಹಿಸಿಡುವ ಕೆಲಸ ಕಾರ್ಯವೂ ಅಗತ್ಯವಾಗಿ ಆಗಬೇಕಾಗಿದೆ. ಇವತ್ತು ಗ್ರಾಮೀಣ ಪ್ರದೇಶದ ಬಹುತೇಕ ಕೆರೆಗಳು ಒಣಗಿ ನಿಂತಿವೆ. ಅಷ್ಟೇ ಅಲ್ಲ ಅವು ಹೂಳು ತುಂಬಿ ಕೆರೆಗಳಾಗಿ ಉಳಿದಿಲ್ಲ. ಸರ್ಕಾರ ಕೆರೆಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.[ಬೆಳ್ಳಂದೂರು ಕೆರೆ ಸ್ವಚ್ಛ ಮಾಡಲು ಎಷ್ಟು ವರ್ಷ ಬೇಕು?]
ಗ್ರಾಮಸ್ಥರು ಕೆರೆ ಬಗ್ಗೆ ಆಸ್ಥೆವಹಿಸಲಿ
ಗ್ರಾಮಸ್ಥರು ಕೂಡ ಎಲ್ಲದಕ್ಕೂ ಸರ್ಕಾರವನ್ನು ಕಾಯದೆ ಒಂದು ವೇಳೆ ಕೆರೆಯನ್ನು ಒತ್ತುವರಿ ಮಾಡಿದ್ದರೆ ಅದನ್ನು ತೆರವುಗೊಳಿಸಿ ಶ್ರಮದಾನಗಳ ಮೂಲಕ ಹೂಳು ತೆಗೆದು ಮಳೆಗಾಲದಲ್ಲಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಇದಕ್ಕೊಂದು ಸಮಿತಿಯನ್ನು ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು.












Click it and Unblock the Notifications