31 ಕೆಜಿ ತೂಕದ ಎರಡು ಬೆಳ್ಳಿ ಆನೆ ಚಾಮುಂಡಿಗೆ ಅರ್ಪಿಸಿದ ಡಿಕೆಶಿ
ಮೈಸೂರು, ಸೆಪ್ಟೆಂಬರ್ 25: ಇಂಧನ ಸಚಿವ ಡಿಕೆ ಶಿವಕುಮಾರ್ ಅದೇನು ಹರಕೆ ಹೊತ್ತುಕೊಂಡಿದ್ದರೋ ಅವರೇ ಬಲ್ಲರು. ಅದು ಈಡೇರಿದಂತೆ ಒಂದು ಕಡೆಯಿಂದ ಹರಕೆ ತೀರಿಸುತ್ತಿದ್ದಾರೆ. ಮೊನ್ನೆಯಷ್ಟೇ ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದ ಅವರು, ಇದೀಗ ಚಾಮುಂಡೇಶ್ವರಿ ದೇವಿಗೆ ಬೆಳ್ಳಿ ಆನೆ ಸಮರ್ಪಿಸಿದ್ದಾರೆ.
ನವರಾತ್ರಿಯೂ ನಡೆಯುತ್ತಿರುವುದರಿಂದ ಸೋಮವಾರ ಚಾಮುಂಡಿ ಬೆಟ್ಟಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಪತ್ನಿ ಸಮೇತ ಮೈಸೂರಿಗೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಚಾಮುಂಡಿಗೆ ಎರಡು ಬೃಹತ್ ಬೆಳ್ಳಿಯ ಆನೆಗಳನ್ನು ಅರ್ಪಿಸಿದರು. ತೆರಿಗೆ ಅಧಿಕಾರಿಯ ದಾಳಿಯ ನಂತರ ಇದು ಎರಡನೇ ಭೇಟಿಯಾಗಿದ್ದು, ಅವರೊಟ್ಟಿಗೆ ಪುತ್ರ ಹಾಗೂ ಪುತ್ರಿಯೂ ಆಗಮಿಸಿದ್ದರು.

ಈ ಹಿಂದೆ ಚಾಮುಂಡೇಶ್ವರಿ ದೇವಿಗೆ ಅರ್ಪಿಸಿದ್ದ ಬೆಳ್ಳಿ ಆನೆಯು ಸರಿ ಇರಲಿಲ್ಲ. ಆದ್ದರಿಂದ ಈಗ ಹೊಸದಾಗಿ ಮಾಡಿಸಿ ಸಮರ್ಪಿಸುತ್ತಿದ್ದೇನೆ. ನಾನು ಅಂದುಕೊಂಡಿದ್ದನ್ನು ಆ ದೇವಿ ನೆರವೇರಿಸಿಕೊಟ್ಟಿರುವುದರಿಂದ ಈ ಎರಡು ಬೆಳ್ಳಿ ಆನೆಯನ್ನು ಅರ್ಪಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಎರಡು ಬೆಳ್ಳಿ ಆನೆಯ ತೂಕ 31 ಕೆ.ಜಿ ಇದ್ದು, 14 ಲಕ್ಷ ರುಪಾಯಿವರೆಗೆ ಬೆಲೆ ಆಗಬಹುದು.












Click it and Unblock the Notifications