ಮನಸ್ಸಿಗೆ ಬಹಳ ನೋವಾಗಿದೆ; ಸಚಿವ ಸಿ. ಪಿ. ಯೋಗೀಶ್ವರ್
ಮೈಸೂರು, ಜೂನ್ 01; "ಕಳೆದ ಮೂರು ದಿನಗಳಿಂದ ಮಾಧ್ಯಮಗಳ ಹಾಗೂ ನನ್ನ ಸ್ನೇಹಿತರು ನನ್ನನ್ನು ಖಳನಾಯಕನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ" ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಹೇಳಿದರು.
ಮಂಗಳವಾರ ಸಂಜೆ ಸಚಿವರು ದಿಢೀರ್ ಆಗಿ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಪೊಲೀಸ್ ಭದ್ರತೆ ಇಲ್ಲದೇ, ಖಾಸಗಿ ಕಾರಿನಲ್ಲಿ ಸಚಿವರು ಆಗಮಿಸಿದ್ದು ಭಾರೀ ಕುತೂಹಲಕ್ಕೆ ಕಾರಣವಾಯಿತು.
ಮಠದ ಆವರಣದಲ್ಲಿ ಮಾತನಾಡಿದ ಸಚಿವರು, "ಸ್ವಾಮೀಜಿಗಳ ಮುಂದೆ ನೋವನ್ನು ಹೇಳಿಕೊಂಡರೆ ಹಗುರವಾಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ" ಎಂದು ತಿಳಿಸಿದರು.

"ಸಿನಿಮಾದಲ್ಲೂ ನಾಯಕ, ರಾಜಕೀಯದಲ್ಲೂ ನಾನು ನಾಯಕನಾಗಿದ್ದೇನೆ. ಆದರೆ ನನ್ನನ್ನು ಖಳನಾಯನನ್ನಾಗಿ ಮಾಡಲು ಯತ್ನ ನಡೆದಿದೆ. ಇದರ ಹಿಂದೆ ಯಾರದ್ದೋ ಪ್ರಚೋದನೆ ಇರಬಹುದು" ಎಂದು ಬೇಸರ ವ್ಯಕ್ತಪಡಿಸಿದರು.
"ವೈಯುಕ್ತಿಕವಾಗಿ ನಾನು ನೀಡಿದ ಒಂದು ಹೇಳಿಕೆಯಿಂದ ಇಷ್ಟೆಲ್ಲ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ. ನಾನು ಬೇರೆ ಮಾತನಾಡುವುದಿಲ್ಲ" ಎಂದು ಸ್ಪಷ್ಟಪಡಿಸಿ ಯೋಗೀಶ್ವರ್ ನಿರ್ಗಮಿಸಿದರು.
"ಎಸ್ಕಾರ್ಟ್ ಇಲ್ಲದೆ ಮಠಕ್ಕೆ ಬಂದಿರುವುದರಲ್ಲಿ ವಿಶೇಷವಿಲ್ಲ. ಕೊರೊನಾ ಹಿನ್ನಲೆಯಲ್ಲಿ ನಾನು ಎಸ್ಕಾರ್ಟ್ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದದೂ ನಾನು ಸಚಿವ. ಪೊಲೀಸರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶವಾಗಿದೆ" ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆರಂಭವಾಗಿದೆ. ಇಂತಹ ಸಮಯದಲ್ಲಿ ಸಿ. ಪಿ. ಯೋಗೀಶ್ವರ್ ದೆಹಲಿಗೆ ಭೇಟಿ ನೀಡಿದ್ದ ಭಾರೀ ಚರ್ಚೆಗೆ ಕಾರಣವಾಗಿತ್ತು.
ಹಲವು ಬಿಜೆಪಿ ನಾಯಕರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೆಹಲಿಗೆ ಭೇಟಿ ನೀಡಿದ್ದು ನಿಜ ಎಂದು ಸಚಿವರು ಸಹ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.












Click it and Unblock the Notifications