ಮೈಸೂರು ಪಾಲಿಕೆ ಚುನಾವಣೆ; ದೋಸ್ತಿ ಚೆಂಡು ಸಿದ್ದರಾಮಯ್ಯ ಅಂಗಳಕ್ಕೆ!
ಮೈಸೂರು, ಫೆಬ್ರವರಿ 19; ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಮೈತ್ರಿ ಮಾತುಕತೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಫೆಬ್ರವರಿ 24ರಂದು ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದೆ.
ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಕಸರತ್ತನ್ನು ಪಕ್ಷಗಳು ನಡೆಸುತ್ತಿವೆ. ಈ ಬೆಳವಣಿಗೆಗಳ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಗಳದಲ್ಲಿ ದೋಸ್ತಿ ಚೆಂಡು ಬಿದ್ದಿದೆ .
ಶನಿವಾರ ಕಾಂಗ್ರೆಸ್ ಪಾಲಿಕೆ ಸದಸ್ಯರ ಸಭೆ ನಡೆಯಲಿದೆ. ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನು, ಬಿಜೆಪಿಗೆ ಟಕ್ಕರ್ ಕೊಡಲು ಶಾಸಕ ತನ್ವೀರ್ ಸೇಠ್ ಟೊಂಕಕಟ್ಟಿ ನಿಂತಿದ್ದು , ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಜೊತೆ ಎರಡು ಬಾರಿ ಮಾತುಕತೆ ನಡೆಸಿದ್ದಾರೆ.
ಗುರುವಾರ ಸಂಜೆಯಿಂದ ಮೂರು ದಿನಗಳ ಕಾಲ ಸಿದ್ದರಾಮಯ್ಯ ಅವರು ಮೈಸೂರು ಪ್ರವಾಸದಲ್ಲಿಯೇ ಇದ್ದಾರೆ. ಯಾವ ಪಕ್ಷವಾದರೂ ಮೇಯರ್ ಪಟ್ಟಕ್ಕೆ ಏರಲು ಮೈತ್ರಿ ಅನಿವಾರ್ಯವಾಗಿದೆ. ಯಾವ-ಯಾವ ಪಕ್ಷದ ನಡುವೆ ಮೈತ್ರಿ ಆಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ, ತನ್ವೀರ್ ಸೇಠ್ ಭೇಟಿ
ಶುಕ್ರವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸಕ್ಕೆ ತನ್ವೀರ್ ಸೇಠ್ ಭೇಟಿ ನೀಡಿದರು. ಮೇಯರ್ ಚುನಾವಣೆ ವಿಚಾರವಾಗಿ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, "ಕೋಮುವಾದ ಶಕ್ತಿಯನ್ನು ದೂರ ಇಡಲು ಮುಂದಾಗಿದ್ದೇನೆ. ಇದಕ್ಕಾಗಿ ಜಾತ್ಯಾತೀತರು ಸೇರಿ ಅಧಿಕಾರ ಹಿಡಿಯುತ್ತೇವೆ. ನಾವು ಹಗಲು ಹೊತ್ತಿನಲ್ಲಿ ರಾಜಕೀಯ ಮಾಡುವವರು. ರಾತ್ರಿ ರಾಜಕಾರಣ ಮಾಡುವವರು ಪಾಲಿಕೆ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿದ್ದಾರೆ" ಎಂದರು.
ಬಿಜೆಪಿಯಿಂದಲೂ ಪ್ರಯತ್ನ
ಮೇಯರ್ ಹುದ್ದೆಗಾಗಿ ಬಿಜೆಪಿ ಸಹ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸ್ವತಃ ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಜೊತೆ ಮಾತುಕತೆ ನಡೆಸಿದ್ದಾರೆ. ಆದರೆ, ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಲು ಕಾಂಗ್ರೆಸ್ ಶತಪ್ರಯತ್ನ ನಡೆಸುತ್ತಿದೆ.
ಸಾ. ರಾ. ಮಹೇಶ್ ಹೇಳಿದ್ದೇನು?
ತನ್ವೀರ್ ಸೇಠ್ ಜೊತೆ ಸಭೆಯ ಬಳಿಕ ಮಾತನಾಡಿದ್ದ ಸಾ. ರಾ. ಮಹೇಶ್, "ಮೈಸೂರು ಪಾಲಿಕೆ ಮೇಯರ್ ವಿಚಾರದಲ್ಲಿ ಸ್ಥಳೀಯ ನಾಯಕರೆಲ್ಲ ಹಿಂದಿನ ಮಾತುಕತೆಗೆ ಬದ್ಧರಾಗಿದ್ದೇವೆ. ಎರಡು ಅವಧಿ ಕಾಂಗ್ರೆಸ್ಗೆ, ಮೂರು ಅವಧಿ ಜೆಡಿಎಸ್ಗೆ ಎಂಬ ಮಾತಾಗಿತ್ತು" ಎಂದು ಹೇಳಿಕೆ ನೀಡಿದ್ದರು.
ಮೀಸಲಾತಿ ಪ್ರಕಟವಾಗಿದೆ
ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದೆ. ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಹಾಗೂ ಉಪ ಮೇಯರ್ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಾಗಿರಿಸಿ ಸರ್ಕಾರ ಆದೇಶ ಹೊರಡಿಸಿದೆ.