Mangaluru dasara 2023: ಮಂಗಳೂರು ದಸರಾಗೆ ಚಾಲನೆ, ಈ ಬಾರಿಯ ವಿಶೇಷತೆಗಳನ್ನು ತಿಳಿಯಿರಿ
ಮಂಗಳೂರು, ಅಕ್ಟೋಬರ್, 15: ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ದಸರಾ ಅದ್ದೂರಿಯಾಗಿ ನಡೆಯುತ್ತಿದ್ದರೆ, ಇತ್ತ ಕಡಲ ನಗರಿಯಲ್ಲೂ ಮಂಗಳೂರು ದಸರಾ ಸಂಭ್ರಮ, ಸಡಗರ ಶುರುವಾಗಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿದೆ.
ಮಂಗಳೂರು ದಸರಾ ಸಂಭ್ರಮ ಶುರುವಾಗಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಶ್ರೀಕ್ಷೇತ್ರ ಕುದ್ರೋಳಿಯ ಕೊರಗಪ್ಪ ಸಭಾಂಗಣದಲ್ಲಿ ಶ್ರೀ ಅದ್ದೂರಿ ದರ್ಬಾರ್ ಮಂಟಪದಲ್ಲಿ ಶಾರದಾ ಮಾತೆ, ಶ್ರೀ ಮಹಾಗಣಪತಿ ಹಾಗೂ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಕರ್ಣಾಟಕ ಬ್ಯಾಂಕ್ ಸಿಇಒ ಪ್ರದೀಪ್ ಕುಮಾರ್ ಮಂಗಳೂರು ದಸರಾಗೆ ಚಾಲನೆ ನೀಡಿದರು. ಕಣ್ಮನ ಸೆಳೆಯುವ ದಸರಾ ದರ್ಬಾರ್ ಮಂಟಪ ಕಣ್ಮನ ಸೆಳೆದರೆ, ಶಿಲಾಬಾಲಿಕೆಯರು, ವಿವಿಧ ದೇವರುಗಳ ಕಲಾಕೃತಿಗಳು ದರ್ಬಾರ್ ಮಂಟಪದಲ್ಲಿ ರಾರಾಜಿಸುತ್ತಿದೆ.

ಮಂಟಪದ ಮೇಲ್ಗಡೆ ಸ್ವಯಂಚಾಲಿತವಾಗಿ ತಿರುಗುವ ಮೇಲ್ಛಾವಣಿಯನ್ನು ಅತ್ಯಾಕರ್ಷಕವಾಗಿ ರಚಿಸಲಾಗಿದೆ. ದೇಗುಲದ ಪ್ರಾಂಗಣದಲ್ಲಿ ಹುಲಿ ವೇಷದ ಅಬ್ಬರ ಜೋರಾಗಿತ್ತು. ಮಂಗಳೂರಿಗರು ಮಾತ್ರವಲ್ಲದೇ, ದೂರದ ಊರುಗಳಿಂದ ಬಂದ ಸಾವಿರಾರು ಮಂದಿ ಮಂಗಳೂರು ದಸಾರಾ ಸಂಭ್ರಮ ಕಣ್ತುಂಬಿಕೊಂಡರು.
ಒಟ್ಟಿನಲ್ಲಿ, ಹತ್ತು ದಿನಗಳ ಕಾಲ ಮಂಗಳೂರಿನಲ್ಲಿ ದಸರಾ ಸಂಭ್ರಮ ಮೇಳೈಸಲಿದೆ. ಲಕ್ಷಾಂತರ ಭಕ್ತರು ಕುದ್ರೋಳಿ ದಸರಾಕ್ಕೆ ಸಾಕ್ಷಿಯಾಗಲಿದ್ದಾರೆ. ಇನ್ನು ಅಕ್ಟೋಬರ್24 ರಂದು ಬೃಹತ್ ಶೋಭಾ ಯಾತ್ರೆ ನಡೆಯಲಿದೆ.
ನಾಡಹಬ್ಬಕ್ಕೆ ನಾದಬ್ರಹ್ಮ ಹಂಸಲೇಖ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಭಾನುವಾರ (ಅಕ್ಟೋಬರ್) ವಿಧ್ಯುಕ್ತ ಚಾಲನೆ ನೀಡಿದರು.
ದಸರಾ ಮಹೋತ್ಸವ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣ ನಿರ್ಮಾವಾಗಿತ್ತು. ರಸ್ತೆಗಳ ತುಂಬಾ ರಂಗೋಲಿಗಳ ಚಿತ್ತಾರ ಆಕರ್ಷಕವಾಗಿತ್ತು. ವೀರಗಾಸೆ, ಡೊಳ್ಳು, ಕಂಸಾಲೆ ಹಾಗೂ ನಗಾರಿ ಕಲಾತಂಡಗಳು ಹಂಸಲೇಖ ಅವರನ್ನು ಬರಮಾಡಿಕೊಂಡರು. ಬೆಳಗ್ಗೆ 10.15ರಿಂದ 10.36ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಹತ್ತು ದಿನಗಳ ನಾಡಹಬ್ಬಕ್ಕೆ ಚಾಲನೆ ನೀಡಿದರು.
ಈ ವೇಳೆ ಹಂಸಲೇಖ ಅವರಿಗೆ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೇಯರ್ ಶಿವಕುಮಾರ್, ಸಂಸದ ಪ್ರತಾಪಸಿಂಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶದ, ಇಂಧನ ಸಚಿವ ಕೆ.ಜೆ.ಜಾರ್ಚ್ ಸೇರಿದಂತೆ ಇತರ ಸಚಿವರು ಹಾಗೂ ಶಾಸಕರು ಸಾಥ್ ನೀಡಿದರು.
ನಾದಬ್ರಹ್ಮ ಹಂಸಲೇಖ ಪೂಜ್ಯ ಕನ್ನಡಿಗರಿಗೆ ಎನ್ನುತ್ತಲೇ ಮಾತು ಶುರು ಮಾಡಿದರು. ಕರ್ನಾಟಕದ ಏಕೀಕರಣಕ್ಕೆ ಇದೀಗ 50 ವರ್ಷ ತುಂಬಿದೆ. ನನ್ನ ಕಲಾ ಕಾಯಕಕ್ಕೂ 50 ವರ್ಷ ತುಂಬಿದೆ. ಇಂದು ನನಗೆ ಸಿಕ್ಕಿರುವ ಈ ಅವಕಾಶ ಬಹಳ ಬೆಲೆ ಬಾಳುವಂತದ್ದು. ಸಾವಿರ ಮೆಟ್ಟಿಲು ಹತ್ತಿ ಇಲ್ಲಿಯವರೆಗೆ ಬಂದಿದ್ದೇನೆ. ಈ ಬೆಟ್ಟ, ಈ ಹಬ್ಬ, ಈ ದೀಪ ಹಚ್ಚೋದು ಪುಣ್ಯದ ಕೆಲಸ. ಈ ಸಂಭ್ತಮಕ್ಕೆ ನಾನು ಯಾರನ್ನು ನೆನೆಯಲಿ ಎಂದು ತಿಳಿಸಿದರು.












Click it and Unblock the Notifications