ಥ್ಯಾಂಕ್ ಗಾಡ್, ಒಂದು ಹುಲಿ ಜೀವ ಉಳಿಯಿತು
ಮೈಸೂರು, ಡಿ. 5 : ಕಳೆದ ಎರಡು ವಾರಗಳಿಂದ ಎಚ್.ಡಿ.ಕೋಟೆ ತಾಲೂಕಿನ ಅರಣ್ಯದಂಚಿನ ಜನರಲ್ಲಿ ಆತಂಕ ಮೂಡಿಸಿ, ನಾಲ್ವರನ್ನು ತಿಂದು ತೇಗಿದ್ದ ನರಭಕ್ಷಕ ಹುಲಿಯನ್ನು ಗುರುವಾರ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಬುಧವಾರ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿತ್ತು, ಆದರೆ, ಗುರುವಾರ ಜೀವಂತವಾಗಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮಂಗಳವಾರ ನರಭಕ್ಷಕ ಹುಲಿ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮದ ಬಸಪ್ಪ (55) ಅವರನ್ನು ತಿಂದು ಹಾಕಿತ್ತು. ಗುರುವಾರ ಅದೇ ಗ್ರಾಮದ ಅರಣ್ಯದ ಅಂಚಿನಲ್ಲಿ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಬುಧವಾರ ಬೆಳಗ್ಗೆಯಿಂದಲೇ ಹುಲಿಯನ್ನು ಹಿಡಿಯಲು ಗ್ರಾಮದ ಅರಣ್ಯದ ಅಂಚಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಸದ್ಯ ಹುಲಿಯನ್ನು ಬನ್ನೇರುಘಟ್ಟಕ್ಕೆ ಕರೆತರಲಾಗುತ್ತಿದೆ.
ಹುಲಿಯನ್ನು ಕಂಡಲ್ಲಿ ಗುಂಡಿಕ್ಕುವಂತೆ ಸರ್ಕಾರ ಆದೇಶ ನೀಡಿದ್ದರೂ, ಎಸಿಎಫ್ ರವಿಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಜೀವಂತವಾಗಿ ಸೆರೆ ಹಿಡಿದಿದ್ದಾರೆ. ಇದರಿಂದ ನಾಲ್ವರನ್ನು ತಿಂದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಜನರಲ್ಲಿ ಆತಂಕ ಮೂಡಿಸಿದ್ದ ನರಭಕ್ಷರ ಸೆರೆಸಿಕ್ಕಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. (ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಲು ಆದೇಶ)
ನರಭಕ್ಷಕ ಹುಲಿ ಮೊದಲು ನ.27ರಂದು ನೆಡ್ಯಾಡಿಯ ಬಸವರಾಜ್, ನ.29 ರಂದು ಸೀಗೋಡಿ ಹಾಡಿಯ ಚೆಲುವ, ನ.30ರಂದು ಡಿ.ಪಿ.ಕುಪ್ಪೆ ವಾಸಿ ಅರಣ್ಯ ಇಲಾಖೆಯ ವಾಚರ್ ಸುರೇಶ್ ಅವರನ್ನು ಹುಲಿ ಕೊಂದು ಹಾಕಿತ್ತು. ಮಂಗಳವಾರ ದನ ಕಾಯುತ್ತಿದ್ದ ಬಸಪ್ಪ (55) ಎಂಬ ವ್ಯಕ್ತಿಯನ್ನು ತಿಂದು ತೇಗಿತ್ತು. (ಹುಲಿ ಗುಂಡಿಕ್ಕಲು ಆದೇಶಿಸಿದ್ದಕ್ಕೆ ಓದುಗರ ಆಕ್ರೋಶ)
ಹುಲಿಯ ಆರೋಗ್ಯ ತಪಾಸಣೆ : ಮೊದಲು ಹುಲಿಯ ಆರೋಗ್ಯ ತಪಾಸಣೆ ಮಾಡಲಾಗುವುದು ನಂತರ ಹುಲಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದು ನಿರ್ಧರಿಸಲಾಗುವುದು ಎಂದು ಮೈಸೂರು ಮೃಗಾಲಯದ ನಿರ್ದೇಶಕರರಾದ ರವಿ ಅವರು ಹೇಳಿದ್ದಾರೆ. ಹುಲಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.
ಹುಲಿ ಸೆರೆಹಿಡಿದದ್ದು ಹೇಗೆ : ಬುಧವಾರ ಬೆಳಗ್ಗೆಯಿಂದ ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು. ಸಾಕಾನೆಗಳ ಮೂಲಕ ಕಾಡು ಪ್ರವೇಶಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಯ ಹೆಜ್ಜೆ ಗುರುತಿನ ಆಧಾರದ ಮೇಲೆ ಹುಲಿಯ ಇರುವುದನ್ನು ಮೊದಲು ಖಚಿತಪಡಿಸಿಕೊಂಡರು. ನಂತರ ಅರವಳಿಕೆ ಮದ್ದು ನೀಡಿ ವ್ಯಾಘ್ರನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ನರಭಕ್ಷರ ಹುಲಿಯನ್ನು ಸೆರೆ ಹಿಡಿಯಲು ಮೂರು ತಂಡಗಳನ್ನು ರಚಿಸಲಾಗಿತ್ತು. 12.15ಕ್ಕೆ ಕಾಂತಿ ಆನೆಯು ಹುಲಿಯ ಜಾಡನ್ನು ಪತ್ತೆ ಹಚ್ಚಿತು. ಆನೆಯ ಮೇಲಿದ್ದ ಡಾ.ಸನತ್ ಅವರು ಹುಲಿಗೆ ಅರವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಿದರು ಎಂದು ವೈದ್ಯರಾದ ಡಾ.ನಾಗರಾಜ್ ಮಾಹಿತಿ ನೀಡಿದ್ದಾರೆ.