ಕಡಿಮೆ ದರಕ್ಕೆ ಚಿನ್ನ ನೀಡುವುದಾಗಿ 23 ಲಕ್ಷ ವಂಚನೆ
ಮೈಸೂರು, ಜನವರಿ 05: ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ 23,50,000 ರೂ. ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ನಿವಾಸಿ ಈ ಕುರಿತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಆರ್ಬಿಐನ ಡೀಲರ್ ಎಂದು ಶಂತ ಎಂಬುವವರಿಗೆ ಅವರಿಗೆ ತಮ್ಮ ಸ್ನೇಹಿತ ಮಹಮ್ಮದ್ ಮೂಲಕ ಯೂಸಫ್ ಹಾಜಿ ಎಂಬಾತ ಪರಿಚಯವಾಗಿದ್ದ. ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಆತ ನಂಬಿಸಿದ್ದ. ನಗರದಲ್ಲಿ ಲಾಡ್ಜ್ನಲ್ಲಿ ಉಳಿದುಕೊಂಡಿದ್ದ ಆತ ಜನವರಿ 3ರಂದು ರಾತ್ರಿ ಭೇಟಿಯಾಗಿ ಮರುದಿನ ಚಿನ್ನ ಕೊಡಿಸುವುದಾಗಿ ಹೇಳಿದ್ದ.
ಸೋಮವಾರ ಬೆಳಗ್ಗೆ ವಿವಿ ಮೊಹಲ್ಲಾ ಟೆಂಪಲ್ ರಸ್ತೆಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ಬಳಿ ಬರುವಂತೆ ಯೂಸಫ್ ಹಾಜಿ ಹೇಳಿದ್ದ. ಶಂತ ಸ್ನೇಹಿತರೊಡನೆ ಬ್ಯಾಂಕ್ ಬಳಿ ಹೋಗಿದ್ದರು. ಬ್ಯಾಂಕ್ ಎದುರು ಯೂಸಫ್ ಹಾಜಿ ಮೂರು ಕವರ್ ನೀಡಿ ಕೆಲವು ದಾಖಲಾತಿಗಳನ್ನು ಪಡೆದುಕೊಂಡು ಬ್ಯಾಂಕ್ಗೆ ಹೋಗಿದ್ದ.

ಸ್ವಲ್ಪ ಸಮಯದ ಬಳಿಕ ಶಂತ ಅವರನ್ನು ಬ್ಯಾಂಕಿಗೆ ಕರೆಸಿಕೊಂಡು ಹಣದ ಡಿನಾಮಿನೇಷನ್ ಬರೆಯಬೇಕೆಂದು ಬ್ಯಾಗ್ ನಲ್ಲಿದ್ದ 23,50,000 ರೂ,ಗಳನ್ನು ಪಡೆದು ಕೊಂಡಿದ್ದ. ಬ್ಯಾಂಕ್ ಹೊರಗಿದ್ದ ಮಹಮ್ಮದ್ ಬಳಿ ಪೇಪರ್ ತೆಗೆದುಕೊಂಡು ಬರುವಂತೆ ತಿಳಿಸಿದ್ದ.
ಮಹಮ್ಮದ್ಗೆ ಶಂತ ಕರೆ ಮಾಡುವುದರೊಳಗೆ ಯೂಸಫ್ ಹಾಜಿ ಹಣದ ಸಮೇತ ಬ್ಯಾಂಕ್ನಿಂದ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ.












Click it and Unblock the Notifications