ಟೀ ದುಡ್ಡು ಕೇಳಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?
ಮೈಸೂರು, ಅಕ್ಟೋಬರ್ 31: ಟೀ ಕುಡಿದಿದ್ದಕ್ಕೆ ಹಣ ಕೇಳಿದ ಅಂಗಡಿಯವರ ಮೇಲೇ ಹಲ್ಲೆ ಮಾಡಿದ ವ್ಯಕ್ತಿ ನಂತರ ಅಂಗಡಿಯಲ್ಲಿದ್ದ ವಸ್ತುಗಳನ್ನೆಲ್ಲ ಬಿಸಾಡಿ ರಂಪಾಟ ಮಾಡಿದ ಘಟನೆ ಮೈಸೂರಿನ ಎಂಜಿ ರಸ್ತೆಯಲ್ಲಿ ನಡೆದಿದೆ.
ಬುಧವಾರ ಈ ಘಟನೆ ನಡೆದಿದ್ದು, ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೈಸೂರಿನ ಕಾಕರವಾಡಿ ನಿವಾಸಿ ಕಲೀಂ (35) ಟೀ ಅಂಗಡಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿರುವವನು.
ಯಾದಗಿರಿಯಲ್ಲಿ ಮಂಗಳಮುಖಿ ಮೇಲೆ ಮಾರಣಾಂತಿಕ ಹಲ್ಲೆ; ಚಿಕಿತ್ಸೆ ಫಲಿಸದೇ ಸಾವು
ನಿನ್ನೆ ಬೆಳಿಗ್ಗೆ 7.30ರ ಸುಮಾರಿಗೆ ಎಂಜಿ ರಸ್ತೆಯ ಡಬಲ್ ಟ್ಯಾಂಕ್ ಬಳಿ ಇರುವ ಬಿಬಿ ಟೀ ಸ್ಟಾಲ್ ಗೆ ಬಂದ ಕಲೀಂ, ಟೀ ಕುಡಿದು, ಸಿಗರೇಟ್ ಸೇದಿ ಹಣ ಕೊಡದೆ ಹೋಗಿದ್ದ. ಮತ್ತೆ 10 ಗಂಟೆಗೆ ಬಂದ ಆತ, ಟೀ ಕೇಳಿದ್ದು, ಬೆಳಿಗ್ಗೆ ಹಣ ಕೊಡದೆ ಹೋಗಿ ಮತ್ತೆ ಈಗ ಕೇಳಿದರೆ ಹೇಗೆ ಎಂದು ಅಂಗಡಿಯವರು ಟೀ ಕೊಡಲು ನಿರಾಕರಿಸಿದ್ದರು. ಅದರಿಂದ ಕೋಪಗೊಂಡ ಕಲೀಂ, ಅಂಗಡಿ ಹುಡುಗರ ಮೇಲೆರಗಿ ಹಲ್ಲೆ ನಡೆಸಿದ್ದಲ್ಲದೆ, ಅಲ್ಲಿದ್ದ ಗಾಜಿನ ಬಾಟಲಿಗಳನ್ನು ತೆಗೆದು ಫುಟ್ಪಾತ್ ಗೆಸೆದು ಟೇಬಲ್, ಕಂಟೇನರ್ ಗಳನ್ನು ಬೀಳಿಸಿ ಧ್ವಂಸ ಮಾಡಿದ್ದ.
ಆತ ಗಾಜಲಿ ಬಾಟಲಿ ಒಡೆದು ಕೈಯಲ್ಲಿ ಹಿಡಿದುಕೊಂಡಿದ್ದರಿಂದ ಹೆದರಿದ ಅಂಗಡಿ ಹುಡುಗರು ಹತ್ತಿರ ಹೋಗಲಿಲ್ಲ. ಸುಮಾರು 10 ನಿಮಿಷಗಳ ಕಾಲ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳನ್ನೂ ಬೀದಿಗೆಸೆದು ತನ್ನ ಸ್ನೇಹಿತನ ಸ್ಕೂಟರ್ ಹತ್ತಿ ಪರಾರಿಯಾಗಲೆತ್ನಿಸಿದಾಗ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೆಹ್ಲು ಖಾನ್ ಮತ್ತು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪ ರದ್ದು
ಆತ ನಡೆಸಿದ ದಾಂಧಲೆ, ರಂಪಾಟದ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕಳೆದ ನಾಲ್ಕೈದು ದಿನಗಳಿಂದಲೂ ಈ ವ್ಯಕ್ತಿ ಇದೇ ರೀತಿ ಹಣ ಕೊಡದೆ ಟೀ ಕುಡಿದು ಹೋಗುತ್ತಿದ್ದ, ನಾವೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಎಂದಿದ್ದಾರೆ ಅಂಗಡಿ ಮಾಲೀಕರು. ಲಕ್ಷ್ಮೀಪುರಂ ಠಾಣೆ ಗರುಡ ಪೊಲೀಸರು, ಕಲೀಂನನ್ನು ವಶಕ್ಕೆ ಪಡೆದು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ ನಂತರ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳದ ಮಹಜರು ನಡೆಸಿ ಅಲ್ಲಿನ ಸಿಸಿ ಕ್ಯಾಮೆರಾ ಫೂಟೇಜ್ ಗಳನ್ನು ಸಂಗ್ರಹಿಸಿದ್ದಾರೆ.