ಮೈಸೂರು ಅರಮನೆಯಲ್ಲಿ ಆನೆ ಮೇಲಿಂದ ಬಿದ್ದು ಮಾವುತ ಸಾವು
ಮೈಸೂರು, ಜುಲೈ 9: ಸಾಕಾನೆಯನ್ನು ಮುನ್ನಡೆಸುವ ಸಂದರ್ಭ, ಆಯ ತಪ್ಪಿ ಬಿದ್ದು ಮಾವುತ ಸಾವನ್ನಪ್ಪಿರುವ ಘಟನೆ ಮೈಸೂರು ಅರಮನೆಯ ಆವರಣದಲ್ಲಿ ನಡೆದಿದೆ.
ಎಚ್ ಡಿ ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯ ನಿವಾಸಿ ಮಾವುತ ಕಾಳಪ್ಪ ಆನೆ ಮೇಲಿಂದ ಬಿದ್ದು ಮೃತಪಟ್ಟವರು. ಕಳೆದ ಹದಿನೈದು ವರ್ಷಗಳಿಂದ ಅರಮನೆಯಲ್ಲಿರುವ ರೂಬಿ ಆನೆಯನ್ನು ನೋಡಿಕೊಳ್ಳುತ್ತಿದ್ದ ಕಾಳಪ್ಪ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಎಂದಿನಂತೆ ಆನೆಯನ್ನು ಮುನ್ನಡೆಸಲು ಬೆನ್ನ ಮೇಲೆ ಏರಿದ್ದಾರೆ. ಆದರೆ ಆನೆ ಚಲಿಸುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯವಾಗಿದೆ.
ಆನೆ ಸ್ಥಳದಲ್ಲಿಯೇ ಕದಲದೆ ನಿಂತಿದ್ದ ದೃಶ್ಯವನ್ನು ಗಮನಿಸಿದ ಬೇರೆ ಮಾವುತರು ಬಂದು, ಆನೆಯನ್ನು ಕಟ್ಟಿಹಾಕಿ ಕೆಳಗೆ ಬಿದ್ದಿದ್ದ ಮಾವುತ ಕಾಳಪ್ಪನನ್ನು ಕೂಡಲೇ ಕೆ.ಆರ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಾಳಪ್ಪನ ಶವ ಪರೀಕ್ಷೆ ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ನಡೆದದ್ದು, ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಬಳ್ಳೆ ಹಾಡಿಯಲ್ಲಿ ಇಂದು ಕಾಳಪ್ಪನ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications