Lok Sabha Election: ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಎದುರಾಳಿ ಆಗ್ತಾರಾ ಕೈ ನಾಯಕಿ: ಫಲಕೊಡುತ್ತಾ ತಂತ್ರ?
ಮೈಸೂರು, ಡಿಸೆಂಬರ್ 09: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ರಾಜ್ಯದಲ್ಲಿ ಅಧಿಕಾರ ಹಿಡಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ. ಹೀಗಾಗಿಯೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಟಿಕೆಟ್ ಗಾಗಿ ಪೈಪೋಟಿಗಳು ಆರಂಭವಾಗಿವೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಘಟಾನುಘಟಿ ನಾಯಕರೆಲ್ಲರೂ ಮುಗಿಬಿದ್ದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಿ ಎದುರಾಳಿ ಪಕ್ಷದವರೊಂದಿಗೆ ಹೋರಾಡಿ ಗೆಲ್ಲುವುದಕ್ಕಿಂತಲೂ ತಮ್ಮದೇ ಪಕ್ಷದಿಂದ ಟಿಕೆಟ್ ಪಡೆಯುವುದು ಇವತ್ತಿನ ರಾಜಕಾರಣದಲ್ಲಿ ದೊಡ್ಡ ಸವಾಲ್ ಆಗಿದೆ. ಅಭ್ಯರ್ಥಿ ಸಾರ್ವಜನಿಕ ಒಡನಾಟದಲ್ಲಿದ್ದು ಮತಗಳಿಸುವ ಸಾಮರ್ಥ್ಯವಿದ್ದರೂ ಕೆಲವೊಮ್ಮೆ ಪಕ್ಷದ ಹಿರಿಯ ನಾಯಕರ ಕೃಪೆಯಿಲ್ಲದೆ ಆತ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಕಷ್ಟವೇ ಅದರಲ್ಲೂ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾದಷ್ಟೂ ಅಭ್ಯರ್ಥಿಯ ಆಯ್ಕೆ ಕಷ್ಟವಾಗುವುದಲ್ಲದೆ, ಅಸಮಾಧಾನ, ಬಂಡಾಯಗಳು ಪಕ್ಷದೊಳಗೆ ಹೆಚ್ಚಾಗುವ ಕಾರಣ ಕೆಲವೊಮ್ಮೆ ಹರಸಾಹಸ ಮಾಡಿ ಟಿಕೆಟ್ ಪಡೆದರೂ ಅಭ್ಯರ್ಥಿ ಎಲ್ಲರನ್ನೂ ಒಗ್ಗಟ್ಟಾಗಿಸಿ ಚುನಾವಣೆಗೆ ಹೋಗುವುದು ಕಷ್ಟವಾಗುತ್ತದೆ.

ಇವತ್ತು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಪರಿಸ್ಥಿತಿಯನ್ನು ಗಮನಿಸಿದರೆ ಇಲ್ಲಿಂದ ಸ್ಪರ್ಧಿಸಲು ನಾಯಕರು ನಾ ಮುಂದು.. ತಾ ಮುಂದು ಎಂಬಂತೆ ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರ ಜತೆ ಮನಸ್ತಾಪ ಮಾಡಿಕೊಂಡು ಪಕ್ಷ ಬಿಟ್ಟು ಹೋಗಿ ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷರಾಗಿ, ಶಾಸಕರಾಗಿ, ಆ ನಂತರ ಬದಲಾದ ರಾಜಕಾರಣದಲ್ಲಿ ಬಿಜೆಪಿಗೆ ಮುಖ ಮಾಡಿ ಉಪಚುನಾವಣೆಯಲ್ಲಿ ಸೋಲು ಕಂಡು ತದ ನಂತರ ಅದೇ ಪಕ್ಷದವರ ಸಹಕಾರದಿಂದ ವಿಧಾನಪರಿಷತ್ ಸದಸ್ಯರಾಗಿರುವ ಹೆಚ್ ವಿಶ್ವನಾಥ್ ಅವರು ಬಿಜೆಪಿಯಿಂದ ದೂರವಾಗಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವ ಬಯಕೆಯನ್ನು ಹೊರ ಹಾಕುತ್ತಿದ್ದಾರೆ.
ಪ್ರತಾಪ್ ಸಿಂಹರನ್ನು ಸೋಲಿಸಲು ತಂತ್ರ
ಅವಕಾಶವಾದಿ ರಾಜಕಾರಣ ಮಾಡದೆ ಪಕ್ಷದಲ್ಲಿಯೇ ಉಳಿದು ಪಕ್ಷಕ್ಕಾಗಿ ದುಡಿಯುತ್ತಾ ಬಂದಿರುವ ನಾಯಕರು ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲು ಒಪ್ಪಿಗೆ ನೀಡುವುದು ಕಷ್ಟವಿದೆ. ಇದು ಪಕ್ಷದೊಳಗೆ ದೊಡ್ಡಮಟ್ಟದ ಬಂಡಾಯಕ್ಕೆ ಕಾರಣವಾದರೂ ಅಚ್ಚರಿಯಿಲ್ಲ. ಈ ಬಾರಿ ಕಾಂಗ್ರೆಸ್ ಗೆ ಪೂರಕ ವಾತಾವರಣವಿದ್ದು ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವೇ ಹತ್ತಕ್ಕೂ ಹೆಚ್ಚು ನಾಯಕರು ಟಿಕೆಟ್ ಗಾಗಿ ದುಂಬಾಲು ಬೀಳಲು ಕಾರಣವಾಗಿದೆ. ಜೊತೆಗೆ ಕಳೆದೊಂದು ವರ್ಷದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಸೋಲಿಸಲೇ ಬೇಕು ಎಂಬ ಹಠಕ್ಕೆ ಕಾಂಗ್ರೆಸ್ ನಾಯಕರು ಬಿದ್ದಂತೆ ಕಾಣಿಸುತ್ತಿದೆ.

ಮೈಸೂರು ಮತ್ತು ಕೊಡಗು ಲೋಕಸಭಾ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಾಗಿ ಗೆಲುವು ಕಂಡಿದೆ. ಹೀಗಾಗಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದರೆ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬುದು ಕೈ ನಿಂದ ಸ್ಪರ್ಧಿಸಲು ಬಯಸುವ ನಾಯಕರ ಆಲೋಚನೆಯಾಗಿದ್ದು, ಹೀಗಾಗಿ ಆಕಾಂಕ್ಷಿಗಳು ದಿನಕ್ಕೊಬ್ಬರಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಆದರೆ ಡಜನ್ ಗಟ್ಟಲೆ ಇರುವ ಆಕಾಂಕ್ಷಿಗಳ ಪೈಕಿ ಕೊಡಗಿನ ಕಾಂಗ್ರೆಸ್ ಮಹಿಳಾ ನಾಯಕಿಯಾಗಿರುವ ವೀಣಾ ಅಚ್ಚಯ್ಯ ಅವರು ಮಹಿಳಾ ಪ್ರಾತಿನಿಧ್ಯದ ಆಧಾರದಲ್ಲಿ ಟಿಕೆಟ್ ಕೇಳುತ್ತಿರುವುದು ಕೈ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವೀಣಾ ಅಚ್ಚಯ್ಯ ಪ್ರಭಾವಿ ನಾಯಕಿ
ವೀಣಾ ಅಚ್ಚಯ್ಯ ಕೊಡಗಿನ ಮಟ್ಟಿಗೆ ಪ್ರಭಾವಿ ಮಹಿಳಾ ನಾಯಕಿಯಾಗಿದ್ದು, ತಳಮಟ್ಟದಿಂದ ಪಕ್ಷದಲ್ಲಿ ಬೆಳೆದು ಬಂದಿದ್ದಾರೆ. ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ವಿಧಾನ ಪರಿಷತ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಭಾವಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಅವರು ಟಿಕೆಟ್ ಕೇಳುತ್ತಿರುವುದು ಆಕಾಂಕ್ಷಿಗಳಿಗೆ ತಲೆನೋವಾಗಿದೆ.
ಈ ಹಿಂದೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷ ನಾಯಕರಾಗಿ ಪ್ರವಾಹ ಪರಿಶೀಲನೆಗಾಗಿ ಕೊಡಗಿಗೆ ತೆರಳಿದ್ದ ಸಂದರ್ಭದಲ್ಲಿ ಆದ ಅವಮಾನವನ್ನು ಎರಡು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಮಾಡಿದ್ದು, ಮುಂದೆ ನಡೆಯುವ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯನ್ನು ಸೋಲಿಸಿ ಸೇಡು ತೀರಿಸಿಕೊಳ್ಳಬೇಕೆಂಬ ಹಂಬಲ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೆ, ಕಾಂಗ್ರೆಸ್ ನ ಎಲ್ಲ ನಾಯಕರಿಗೂ ಇದೆ.

ಟಿಕೆಟ್ ಪಡೆಯುವುದೇ ದೊಡ್ಡ ಸವಾಲ್
ಲೋಕಸಭಾ ಕ್ಷೇತ್ರಕ್ಕೆ ಮೈಸೂರು ಮತ್ತು ಕೊಡಗು ಜಿಲ್ಲೆ ಸೇರುವುದರಿಂದ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ನ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಕೊಡಗಿನ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ಮೋದಿ ಮೇನಿಯಾವಿದೆ ಹೀಗಾಗಿ ಅಲ್ಲಿನ ಮತದಾರರನ್ನು ಸೆಳೆಯಬೇಕಾದರೆ ಸ್ಥಳೀಯರಿಗೆ ಟಿಕೆಟ್ ನೀಡಿದರೆ ಉತ್ತಮ ಎಂಬುದು ಕೆಲವರ ಲೆಕ್ಕಾಚಾರವಾಗಿದ್ದು, ಅದರಂತೆ ವೀಣಾ ಅಚ್ಚಯ್ಯ ಅವರ ಸ್ಪರ್ಧೆಗೆ ಒತ್ತಾಯ ಮಾಡಲಾಗುತ್ತಿದೆ.
ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಘಟಾನುಘಟಿಗಳೇ ಟಿಕೆಟ್ ಗಾಗಿ ಫೈಟ್ ಮಾಡುತ್ತಿರುವುದರಿಂದ ವೀಣಾ ಅಚ್ಚಯ್ಯ ಅವರನ್ನು ಪರಿಗಣಿಸಲಾಗುತ್ತಾ? ಅದನ್ನು ಈಗಲೇ ಹೇಳುವುದು ಕಷ್ಟಸಾಧ್ಯ. ಆದರೆ ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ತೂಗಿ ಅಳೆದು ಅರ್ಹ ಅಭ್ಯರ್ಥಿಗೆ ಟಿಕೆಟ್ ನೀಡುವುದು ಪಕ್ಷದ ಮುಖಂಡರಿಗೆ ಸುಲಭವಾಗಿ ಉಳಿದಿಲ್ಲ. ಹೀಗಿರುವಾಗ ಮಹಿಳಾ ಪ್ರಾತಿನಿಧ್ಯದ ವಿಚಾರ ಇಲ್ಲಿ ಕೆಲಸ ಮಾಡುತ್ತಾ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.












Click it and Unblock the Notifications