Get Updates
Get notified of breaking news, exclusive insights, and must-see stories!

LokSabha Election: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ತೆಕ್ಕೆಗೆ ಪಡೆಯಲು ಭರ್ಜರಿ ರಣತಂತ್ರ ರೂಪಿಸಿದ "ಕೈ" ಪಡೆ

ಮೈಸೂರು, ನವೆಂಬರ್‌, 01: ಕಾಂಗ್ರೆಸ್‌ ಪಕ್ಷದ ಮುಖಂಡರು ಮೈಸೂರು ಮತ್ತು ಕೊಡಗು ಕ್ಷೇತ್ರವನ್ನು ಗೆಲ್ಲಲು ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನ ಕೈಗೊಂಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಸರತ್ತುಗಳು ಶುರುವಾಗಿದ್ದು, ಕೆಲವು ನಾಯಕರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಅವರಿಗೆ ಗೌರವ ತಂದುಕೊಡುವ ನಿಟ್ಟಿನಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸವನ್ನು ಮಾಡೋಣ ಎಂಬ ಸಲಹೆಗಳನ್ನು ನೀಡುತ್ತಿದ್ದಾರೆ.

ಮೈಸೂರು ಕೊಡಗು ಕ್ಷೇತ್ರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಕೀಲ ಚಂದ್ರಮೌಳಿ, ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಪುಷ್ಪಾ ಅಮರ್ ನಾಥ್, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಮುಖಂಡ ಜೆ.ಜೆ.ಆನಂದ್ ಹೀಗೆ ಆಕಾಂಕ್ಷಿಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಇದು ಮುಂದುವರೆದರೆ ಕಷ್ಟವಾಗಲಿದ್ದು, ಹೀಗಾಗಿ ಬಹುಬೇಗವೇ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂಬ ಸಲಹೆಗಳು ಪಕ್ಷದಲ್ಲಿ ಕೇಳಿಬಂದಿದೆ.

lok-sabha-election-2024

ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನಡೆದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ ಪ್ರಮುಖ ಎನಿಸಿದೆ. ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ಕೆಲವೊಂದು ನಿರ್ಣಯಗಳು ಗಮನಸೆಳೆದಿದೆ. ಹತ್ತು ವರ್ಷಗಳ ನಂತರ ಕ್ಷೇತ್ರ ಗೆಲ್ಲುವ ಸಾಮೂಹಿಕ ಪ್ರಯತ್ನಕ್ಕೆ ಪ್ರಾಮಾಣಿಕ ಹೋರಾಟ ಮಾಡುವುದು. ಸಮರ್ಥ ಅಭ್ಯರ್ಥಿಯ ಆಯ್ಕೆಯ ಸಂಪೂರ್ಣ ಅಧಿಕಾರವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿಲ್ಲಾ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಹಾಗೂ ಬೋಸರಾಜರಿಗೆ ವಹಿಸಲು ತೀರ್ಮಾನ ಮಾಡಲಾಗಿದೆ.

ಪಕ್ಷಕ್ಕೆ ದುಡಿದವರಿಗೆ ಮನ್ನಣೆ ನೀಡಿ

ಯಾವುದೇ ಚುನಾವಣೆಗಳ ಅಭ್ಯರ್ಥಿಯ ಆಯ್ಕೆ ಸಂದರ್ಭದಲ್ಲಿ ಪಕ್ಷಕ್ಕಾಗಿ ದೀರ್ಘಾವಧಿಯಿಂದ ಪ್ರಾಮಾಣಿಕವಾಗಿ ದುಡಿದವರಿಗೆ ಮಾತ್ರ ಮನ್ನಣೆ ನೀಡಬೇಕು. ರಾಜಸ್ಥಾನದ ಮಾದರಿಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ನಂತರವೇ ಮುಂದಿನ ಅಧಿಕಾರಕ್ಕೆ ಚಿಂತನೆ ಮಾಡಬೇಕು. ಆಯಾ ಜಿಲ್ಲಾ ವ್ಯಾಪ್ತಿ ಹಾಗೂ ವಿಧಾನಸಭಾ ವ್ಯಾಪ್ತಿಯ ಯಾವುದೇ ಪಕ್ಷದ ಸಭೆಗಳು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಅನುಮತಿಗೆ ಮಾತ್ರ ಒಳಪಟ್ಟಿರಬೇಕು.

ಈಗಾಗಲೇ ಅಭ್ಯರ್ಥಿ ಎಂದು ಅನಧಿಕೃತವಾಗಿ ಘೋಷಣೆ ಮಾಡಿಕೊಂಡು ಪಕ್ಷದ ಪದಾಧಿಕರಿಗಳನ್ನು ಭೇಟಿ ಮಾಡಿ ಆಮಿಷ ಒಡ್ಡುತ್ತಿರುವವರ ವಿರುದ್ಧ ಕೆಪಿಸಿಸಿಗೆ ದೂರು ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಲೋಕಸಭಾ ವ್ಯಾಪ್ತಿಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಕಚೇರಿಗೆ ಅಂತಹವರನ್ನು ನಿಷೇಧಿಸಿ ಎಚ್ಚರವಹಿಸಬೇಕು. ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ದೀರ್ಘಾವಧಿ ಪಕ್ಷಕ್ಕಾಗಿ ದುಡಿದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನಕ್ಕಾಗಿ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂಬಿತ್ಯಾದಿ ತೀರ್ಮಾನ ಮಾಡಲಾಗಿದೆ.

ಕೈ ಮುಖಂಡರ ನೀಡುವ ಸಲಹೆಗಳೇನು?

ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಕೀಲ ಚಂದ್ರಮೌಳಿ ಅವರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಈಗಾಗಲೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ. ಬಿಜೆಪಿ ಪ್ರಧಾನಿ ನರೇಂದ್ರಮೋದಿ ಮುಖ ತೋರಿಸಿ ಗೆಲ್ಲುತ್ತಿದ್ದು, ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ಹಾಕಬೇಕಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಗಳಲ್ಲಿ ಗೆಲುವು ಎಂಬ ಮಾತು ಇತ್ತು. ಈಗ ಇದು ಎಲ್ಲೆಡೆ ಸುಳ್ಳಾಗಿದೆ. ಇದಕ್ಕೆ ಕೊಡಗು ಜಿಲ್ಲೆಯೇ ಸಾಕ್ಷಿಯಾಗಿದೆ. ಹೀಗಾಗಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಾತಾವರಣ ಕಾಂಗ್ರೆಸ್‍ಗೆ ಇದೆ. ಹೀಗಾಗಿ ಎಲ್ಲರೂ ಒಂದಾಗಿ ಹೋಗೋಣ ಎಂಬ ಸಲಹೆ ನೀಡಿದ್ದಾರೆ.

ಕೆಪಿಸಿಸಿ ಸದಸ್ಯ ಡಾ.ರವೀಂದ್ರ ಅವರು ಪಕ್ಷದ ಪದಾಧಿಕಾರಿಗಳ ಸೂಚಿಸಿದವರನ್ನೇ ಅಭ್ಯರ್ಥಿ ಮಾಡಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದಲೇ ನಾವು ಗೆಲ್ಲುತ್ತೇವೆಂಬ ಭ್ರಮೆಯಿಂದ ಹೊರ ಬರಬೇಕು. ಏಕೆಂದರೆ ಯಡಿಯೂರಪ್ಪ ಹಾಗೂ ಮೋದಿಯವರು ಸಹ ಉತ್ತಮ ಯೋಜನೆ ಜಾರಿಗೊಳಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಜನ ಮೆಚ್ಚಿಕೊಂಡರು. ಈಗ ಲೋಕಸಭಾ ಚುನಾವಣೆಯಲ್ಲಿಯೂ ನಾವು ನೀಡುವ ಭರವಸೆಗಳೇ ನಾವು ಅಧಿಕಾರಕ್ಕೆ ಬರಲು ಸಹಾಯ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಜಿದ್ದಾ ಜಿದ್ದಿ ಏರ್ಪಡುತ್ತಾ?

ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು ಕಳೆದ 10 ವರ್ಷಗಳಿಂದ ದಿನನಿತ್ಯ ಕಿಡಿ ಹೊತ್ತಿಸುತ್ತಿರುವ ಹಾಲಿ ಸಂಸದ ಪ್ರತಾಪ್ ಸಿಂಹ ಸೋಲಿಸಬೇಕು. ಇದು ಸಿದ್ದರಾಮಯ್ಯನವರ ಕ್ಷೇತ್ರ ಆಗಿರುವುದರಿಂದ ಅವರಿಗೆ ಪ್ರತಿಷ್ಠೆಯಾಗಿದೆ ಎಂದು ಹೇಳಿದರೆ, ಕೆಪಿಸಿಸಿ ಉಪಾಧ್ಯಕ್ಷ ಸೂರಜ್ ಹೆಗಡೆ ಮಾತನಾಡಿ, ಕಾಂಗ್ರೆಸ್‌ನ ಜನಪರ ಗ್ಯಾರಂಟಿಗಳಿಂದ ತತ್ತರಿಸಿ ಜೆಡಿಎಸ್ ಬಿಜೆಪಿ ಮೈತ್ರಿಯಾಗಿದೆ. ಹೀಗಾಗಿ ಈ ಚುನಾವಣೆ ಜಿದ್ದಾಜಿದ್ದಿಗೆ ಕಾರಣವಾಗಿದೆ ಎಂದರು.

ಕಾರ್ಯಕರ್ತರ ಆಶಯದಂತೆ ಪಕ್ಷದಲ್ಲಿ ದುಡಿದವರಿಗೆ ಟಿಕೆಟ್ ಕೊಡಬೇಕು ಎನ್ನುವ ಮಾತಿಗೆ ನನ್ನ ಸಹಮತವಿದೆ. ಆದರೆ, ವರಿಷ್ಠರು ತೀರ್ಮಾನಿಸಿ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಿಕೊಂಡು ಬರಲು ಸಜ್ಜಾಗಬೇಕು ಎಂಬ ಸಲಹೆ ನೀಡಿದ್ದಾರೆ.

ಇನ್ನು ಸಭೆಯಲ್ಲಿದ್ದ ಕಾಂಗ್ರೆಸ್ ಮುಖಂಡರಾದ ಅರುಣ್ ಮಾಚಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೊಡಗು ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಮಾಜಿ ಮೇಯರ್ ಅಯೂಬ್ ಖಾನ್, ಕಾಂಗ್ರೆಸ್ ನಗರಾಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮಹಾಪೌರರಾದ ಪುಷ್ಪವಲ್ಲಿ, ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ ಸೇರಿದಂತೆ ಹಲವು ನಾಯಕರು ಹಾಜರಿದ್ದು, ತಮ್ಮ ಸಲಹೆ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ಸಿಗರು ಹುಮ್ಮಸ್ಸಿನಲ್ಲಿದ್ದು, ರಾಜ್ಯದಲ್ಲಿ 20 ಸ್ಥಾನಗಳ ಟಾರ್ಗೆಟ್ ರೀಚ್ ಮಾಡುವ ಸಲುವಾಗಿ ಪ್ರತಿ ಕ್ಷೇತ್ರದಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ಮೈಸೂರು ಕೊಡಗು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಇಲ್ಲಿ ಗೆದ್ದೇ ಗೆಲ್ಲಬೇಕೆಂಬುದು ಪ್ರಮುಖ ಅಜೆಂಡವಾಗಿದೆ. ಚುನಾವಣೆಗೆ ಕನಿಷ್ಠ ಐದಾರು ತಿಂಗಳು ಬಾಕಿಯಿರುವಾಗಲೇ ಅಖಾಡಕ್ಕಿಳಿದಿದ್ದಾರೆ. ಅದರ ಫಲಾಫಲಗಳೇನು ಎಂಬುದನ್ನು ಕಾದು ನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+