ಎರಡು ಚಿರತೆಗಳ ಪ್ರತ್ಯಕ್ಷ: ಮೈಸೂರಿನ ಸಿಎಫ್ಟಿಆರ್ಐ ಶಾಲೆಗೆ ರಜೆ ಘೋಷಣೆ, ಆತಂಕ
ಮೈಸೂರು, ಜನವರಿ, 04: ಕಾಡಂಚಿನ ಭಾಗದಲ್ಲಿ ಇಷ್ಟು ದಿನ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ನಗರದಲ್ಲಿಯೇ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ. ಕೆಆರ್ಎಸ್ ರಸ್ತೆಯಿಂದ ಹುಣಸೂರು ರಸ್ತೆಯವರೆಗೂ ಹರಡಿಕೊಂಡಿರುವ ಸಿಎಫ್ಟಿಆರ್ಐ ಆವರಣದಲ್ಲಿ ಹಸಿರು ವಲಯವೂ ಸಾಕಷ್ಟಿದೆ. ಹೀಗಾಗಿ ಈ ಭಾಗದಲ್ಲಿ ಮಂಗಳವಾರ ಮಧ್ಯರಾತ್ರಿ (ಜನವರಿ 03) ಎರಡು ಚಿರತೆಗಳು ಕಾಣಿಸಿಕೊಂಡಿವೆ. ಭದ್ರತಾ ಕಾವಲುಗಾರ ಚಿರತೆಯನ್ನು ನೋಡಿ ಅಧಿಕಾರಿಗಳಿಗೆ ವಿಷಯ ಮುಟ್ಟಸಿದ್ದಾನೆ. ನಂತರ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ರಜೆ ಘೋಷಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಪೊಲೀಸರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಶಾಲೆ ಆವರಣದಲ್ಲಿ ಕೂಂಬಿಂಗ್ ಶುರು ಮಾಡಿದೆ. ಆದರೆ, ಎಲ್ಲಿಯೂ ಚಿರತೆಯಾಗಲಿ ಅದರ ಹೆಜ್ಜೆ ಗುರುತಾಗಲಿ ಸಿಕ್ಕಿಲ್ಲ. ಹಾಗಾಗಿ ರಾತ್ರಿ ಒಳಗೆ ಎರಡು ಬೋನು ಇಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಅಲ್ಲದೆ, ಕ್ಯಾಮೆರಾ ಟ್ರ್ಯಾಪ್ ಮೂಲಕ ಚಿರತೆಯನ್ನು ಪತ್ತೆ ಹಚ್ಚಲು ಮುಂದಾಗಿದೆ.
ಕೆಆರ್ಎಸ್ ಬೃಂದಾವನದಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ, ನಷ್ಟದ ವಿವರ ಇಲ್ಲಿದೆ
ಇದೀಗ ನಗರದೊಳಗೆ ಲಗ್ಗೆ ಇಡುತ್ತಿರುವ ಚಿರತೆಗಳು
ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಇದೀಗ ನಗರದ ಕೇಂದ್ರ ಭಾಗದಲ್ಲಿರುವ ಒಂಟಿಕೊಪ್ಪಲಿನ ಸಿಎಫ್ಟಿಆರ್ಐ ಆವರಣದಲ್ಲಿ ಪ್ರತ್ಯಕ್ಷವಾಗಿದ್ದು, ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಮಂಗಳವಾರ ತಡರಾತ್ರಿ ಸಿಎಫ್ಟೆಆರ್ಐ ಆವರಣದಲ್ಲಿರುವ ಕಾಡು ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿವೆ.
ಚಿರತೆ ಪ್ರತ್ಯಕ್ಷದಿಂದ ಆತಂಕಕ್ಕೊಳಗಾದ ಜನ
ಕೆಆರ್ಎಸ್ ರಸ್ತೆಯಿಂದ ಹುಣಸೂರು ರಸ್ತೆಯವರೆಗೂ ಹರಡಿಕೊಂಡಿರುವ ಸಿಎಫ್ಟಿಆರ್ಐ ಆವರಣದಲ್ಲಿ ಹಸಿರು ವಲಯವೂ ಸಾಕಷ್ಟಿದೆ. ಆ ಆವರಣದಲ್ಲಿರ ಸಿಎಫ್ಟಿಆರ್ಐ ಶಾಲೆಯೂ ಇದ್ದು, ಆ ಶಾಲೆಯ ಸಮೀಪ ತಡರಾತ್ರಿ ಒಂದೂವರೆ ಗಂಟೆ ಸಮಯದಲ್ಲಿ ಎರಡು ಚಿರತೆಗಳು ಸಂಚರಿಸುತ್ತಿದ್ದವು ಎನ್ನುವ ಮಾಹಿತಿ ಲಭ್ಯವಾಗಿದೆ. ಅಂದಿನ ರಾತ್ರಿ ಕರ್ತವ್ಯದಲ್ಲಿದ್ದ ಪ್ರಭಾಕರ್ ಎಂಬ ಭದ್ರತಾ ಸಿಬ್ಬಂದಿ ಕೂಡ ಚಿರತೆಗಳನ್ನು ಕಂಡಿರುವುದಾಗಿ ಹೇಳಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು, ಪೊಲೀಸರು
ಆಗ ಕೂಡಲೇ ಅವರು ಈ ವಿಷಯವನ್ನು ಸಿಎಫ್ಟಿಆರ್ಐ ಅಧಿಕಾರಿಗಳಿಗೆ ತಿಳಿಸಿದ್ದು, ಅವರಿಂದ ಅರಣ್ಯಾಧಿಕಾರಿಗಳಿಗೂ ವಿಷಯ ಮುಟ್ಟಿದೆ. ಮುಂಜಾನೆಯೇ ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ. ಇದೇ ಸಂದರ್ಭದಲ್ಲಿ ಶಾಲೆಗೆ ಮಕ್ಕಳು ಮತ್ತು ಪೋಷಕರು ಆಗಮಿಸಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ ಎಂದು ಸಿಎಫ್ಟಿಆರ್ಐ ಶಾಲೆಯ ಪ್ರಾಂಶುಪಾಲರಾದ ತಂಗಮ್ಮ ತೆರೇಸಾ ಅವರು ತಿಳಿಸಿದರು.
ಮುಂಜಾಗ್ರತೆಗಾಗಿ ಶಾಲೆಗೆ ರಜೆ ಘೋಷಣೆ
"ಮಧ್ಯರಾತ್ರಿ ಶಾಲೆ ಒಳಗೆ ಚಿರತೆ ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಶುರು ಮಾಡಿದ್ದಾರೆ. ಹಾಗೆಯೇ ಅವರು 24 ಗಂಟೆಗಳ ಕಾಲ ಅಲ್ಲಿಯೇ ಗಸ್ತು ತಿರುಗಾಡಲಿದ್ದಾರೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗೆ ಈಗಾಗಲೇ ರಜೆ ಘೋಷಿಸಲಾಗಿದೆ. ಪೋಷಕರು ಹಾಗೂ ಮಕ್ಕಳು ಭಯಪಡುವ ಅವಶ್ಯಕತೆ ಇಲ್ಲ. ಚಿರತೆ ಇದ್ದರೆ ಸೆರೆ ಹಿಡಿಯಲಾಗುವುದು," ಎಂದು ಸಿಎಫ್ ಮಾಲತಿಪ್ರಿಯ ತಿಳಿಸಿದ್ದಾರೆ.