ಈಶ್ವರಪ್ಪಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ; ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 10; ಕಾಂಗ್ರೆಸ್ ನಾಯಕರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ. ಯಾರು ಬೇಕಾದರೂ ಅವರು ಬಳಸಿರುವ ಪದವನ್ನು ಬಳಸಬಹುದು" ಅಂತ ಪ್ರತಿಕ್ರಿಯೆ ನೀಡಿದರು.
"ಸಂಸ್ಕಾರ ಇರುವವರು ಅಂತಹ ಪದವನ್ನು ಬಳಸುವುದಿಲ್ಲ. ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ. ಅವರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು" ಎಂದು ಸಿದ್ದರಾಮಯ್ಯ ಹೇಳಿದರು.

"ಆಡಳಿತದಲ್ಲಿರುವವರು ಟೀಕೆಗಳನ್ನು ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನಿಡುವುದು ಸರಿಯಲ್ಲ" ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.
"ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತನಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿ ಇಲ್ಲ. ಬಿಜೆಪಿಯವರ ಸಂಸ್ಕೃತಿಯೇ ಇಂತದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದರು.
"ಸಿದ್ದರಾಮಯ್ಯ ಇಲಿ" ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ, "ನಾನು ಇಲಿಯಾ, ಹುಲಿಯಾ, ಮನುಷ್ಯಾನಾ ಎಂದು ತೀರ್ಮಾನ ಮಾಡಬೇಕಾದವರು ಜನ. ಇದಕ್ಕೆ ಈಶ್ವರಪ್ಪ ಕೊಡೋ ಸರ್ಟಿಫಿಕೇಟ್ ಬೇಕಾ?. ಇದಕ್ಕೆ ಜನರು ಉತ್ತರ ಕೊಡುತ್ತಾರೆ. ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ" ಎಂದರು.
ಈಶ್ವರಪ್ಪ ಹೇಳಿದ್ದೇನು?; ಈಶ್ವರಪ್ಪ ಜೋಕರ್ ಎಂದ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುವ ಭರದಲ್ಲಿ ಸಚಿವ ಈಶ್ವರಪ್ಪ ಸೂ...ಮಕ್ಕಳು ಅಂತ ಕೆಟ್ಟಪದ ಬಳಕೆ ಮಾಡಿದ್ದರು.
ಇದಾದ ಕೆಲವೇ ಕ್ಷಣದಲ್ಲಿ ತಮ್ಮ ತಪ್ಪನ್ನು ಅರಿತ ಈಶ್ವರಪ್ಪ, ತಮ್ಮ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಸಚಿವ ಕೆ. ಎಸ್. ಈಶ್ವರಪ್ಪ ನೀಡಿದ ಈ ಹೇಳಿಕೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ನಿಮ್ಹಾನ್ಸ್ಗೆ ಸೇರಿಸಬೇಕು; ಸಚಿವ ಈಶ್ವರಪ್ಪ ಹೇಳಿಕೆಗೆ ಹಲವಾರು ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ಮಾತನಾಡಿ, "ಆದಷ್ಟು ಬೇಗ ಈಶ್ವರಪ್ಪರನ್ನು ನಿಮ್ಹಾನ್ಸ್ಗೆ ಸೇರಿಸಬೇಕು" ಎಂದು ಹೇಳಿದ್ದಾರೆ.
"ಈಶ್ವರಪ್ಪ ನೋಟು ಎಣಿಸುವ ಮೆಷಿನ್ ಇಟ್ಟುಕೊಂಡಿದ್ದಾರೆ. ಆದರೂ ಸಿಎಂ, ಡಿಸಿಎಂ ಆಗುವುದಕ್ಕೆ ಆಗಲಿಲ್ಲ. ಹೀಗಾಗಿ ಈಶ್ವರಪ್ಪ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಸಚಿವ ಸಂಪುಟದಿಂದ ಉಚ್ಛಾಟನೆ ಮಾಡಬೇಕು" ಎಂದು ಹರಿಪ್ರಸಾದ್ ಆಗ್ರಹಿಸಿದರು.
ಬಿಜೆಪಿಗೆ ಒಂದು ಕಳಂಕ; ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆಗೆ ಆಕ್ರೋಶವನ್ನು ವ್ಯಕ್ತಪಡಿಸಿದರು, "ಬಿಜೆಪಿಗೆ ಇದು ನಾಚಿಗೇಡಿನ ಸಂಗತಿ. ಬಿಜೆಪಿಗೆ ಒಂದು ಕಳಂಕ" ಎಂದು ಹೇಳಿದ್ದಾರೆ.
"ಸಚಿವ ಈಶ್ವರಪ್ಪ ನಾಲಿಗೆ ಅವರ ಆಚಾರ ತೋರಿಸುತ್ತೆ. ಬಿಜೆಪಿಯವರ ತಂದೆ ತಾಯಂದಿರು ಈ ಸಂಸ್ಕೃತಿ ಕಲಿಸಿದ್ದಾರೆ. ಇಂತಹ ಭಾಷೆ ಬಳಸುವವರನ್ನು ಪಕ್ಷದಿಂದ ಕಿತ್ತುಹಾಬೇಕು. ಈ ರೀತಿ ಕೆಟ್ಟ ಭಾಷೆ, ಕೆಟ್ಟ ಪದ ಬೇರೆಯವರಿಗೂ ಗೊತ್ತಿರುತ್ತೆ. ಅದೇ ಪದವನ್ನು ಅವರ ಮೇಲೆ ಬಳಕೆ ಮಾಡಿದರೆ ಹೇಗಿರಬಹುದು?" ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.
ಈ ರೀತಿ ಹೇಳಿಕೆ ನೀಡಬಾರದು; ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಸಹ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ರೀತಿ ಹೇಳಿಕೆ ನೀಡಬಾರದು. ಇದು ತಪ್ಪು, ನಿಮಗೆ ಶಕ್ತಿ ಬಂದಿದೆ ಎಂದರೆ ಅದಕ್ಕೆ ಏಳು ವರ್ಷಗಳ ಮೋದಿ ಸರ್ಕಾರ ಕಾರಣ. ಸಚಿವರಾಗಿ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣಬೇಕು" ಎಂದು ಹೇಳಿದರು.











Click it and Unblock the Notifications