ಅಚ್ಚರಿಯ ಬೆಳವಣಿಗೆ: ಮೋದಿಗೆ ಜೈ ಎಂದ ಕೆ.ಎಸ್.ಭಗವಾನ್!
ಮೈಸೂರು, ಆಗಸ್ಟ್ 06: ಬಿಜೆಪಿ ಮತ್ತು ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಒಂದಿಲ್ಲೊಂದು ಟೀಕೆ ಮಾಡುತ್ತಲೇ ಇರುತ್ತಿದ್ದ ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ಅವರು ಕಾಶ್ಮೀರಕ್ಕೆ ಕುರಿತ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈ ಎಂದು ಭಗವಾನ್ ಅವರು ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. "ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ನಾನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ. 72 ವರ್ಷಗಳ ಸಂಕಟಕ್ಕೆ ಇದೀಗ ಮುಕ್ತಿ ಸಿಕ್ಕಿದೆ. ನರೇಂದ್ರ ಮೋದಿ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ" ಎಂದು ಭಗವಾನ್ ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಪತ್ರದ ಸತ್ಯಾಸತ್ಯತೆ ಅರಿಯಲು 'ಒನ್ ಇಂಡಿಯಾ ಕನ್ನಡ' ಪ್ರತಿನಿಧಿ, ಕೆ.ಎಸ್. ಭಗವಾನ್ ಅವರನ್ನು ಸಂಪರ್ಕಿಸಿದಾಗ, ಈ ಪತ್ರವನ್ನು ತಾವೇ ಬರೆದಿದ್ದು ಎಂದು ಭಗವಾನ್ ಖಚಿತಪಡಿಸಿದ್ದಾರೆ.
370 ನೇ ವಿಧಿ ರದ್ದು: ವಿಶ್ವಸಂಸ್ಥೆಯ ಮೊರೆಹೋದ ಪಾಕಿಸ್ತಾನ
"ಇಡೀ ದೇಶವನ್ನೂ ಒಂದೇ ಸಂವಿಧಾನದ ಅಡಿಯಲ್ಲಿ ತರುವ ಮೂಲಕ ಮೋದಿಯವರು ತಮ್ಮ ಹೆಸರು ಭಾರತದ ಇತಿಹಾಸದಲ್ಲಿ ಅಜರಾಮರವಾಗುವಂತೆ ಮಾಡಿದ್ದಾರೆ. ಅವರ ಈ ನಡೆಯ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಭಗವಾನ್ ಹೇಳಿದ್ದಾರೆ.
ಮೊದಲಿನಿಂದಲೂ ಬಲಪಂಥೀಯವಾದ, ಆರೆಸ್ಸಸೆಸ್ ಮತ್ತು ಬಿಜೆಪಿಯನನ್ನು ಟೀಕಿಸುತ್ತಲೇ ಬಂದಿದ್ದ ಭಗವಾನ್ ಅವರ ಈ ಹೇಳಿಕೆ ಸಾಕಷ್ಟು ಅಚ್ಚರಿ ಮೂಡಿಸಿದೆ.
ಕೆ.ಎಸ್. ಭಗವಾನ್ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಯಥಾವತ್ ಪ್ರತಿ ಇಲ್ಲಿದೆ...
"ಸುಮಾರು 72 ವರ್ಷಯಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯಲ್ಲಿ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಯವರು ಆರ್ಟಿಕಲ್ 370 ಅನ್ನು ರದ್ದು ಮಾಡುವ ಮೂಲಕ ರಾಷ್ಟ್ರವನ್ನು ಸಂತಸಪಡಿಸಿದ್ದಾರೆ. ಪ್ರತಿದಿನ ಏನಿಲ್ಲ ಅಂದರೂ 7-8 ಕೋಟಿ ರೂಪಾಯಿಗಳು ವ್ಯರ್ಥವಾಗಿ ಖರ್ಚಾಗುತ್ತಿದ್ದವು. ಅದನ್ನು ಜನತೆಯ ಕಲ್ಯಾಣಕ್ಕಾಗಿ ಅಭಿವೃದ್ಧಿಗಾಗಿ ಇನ್ನು ಮುಂದೆ ಬಳಸಲು ಅನುಕೂಲವಾಗುತ್ತದೆ.
ಆರ್ಟಿಕಲ್ 370 ಅನ್ನು ರದ್ದು ಮಾಡುವುದರ ಮುಖಾಂತರ ಪ್ರಧಾನಿ ಮೋದಿ ಮತ್ತು ಅವರ ಕೇಂದ್ರ ಸರ್ಕಾರ ಇಡೀ ದೇಶವನ್ನು ಒಂದೇ ಸಂವಿಧಾನದಡಿ ತಂದಿರುವುದು ಬಹಳ ಶ್ಲಾಘನೀಯವಾದ ಕಾರ್ಯ, ಇದಕ್ಕಾಗಿ ಇಡೀ ರಾಷ್ಟ್ರ ಕಾಯುತ್ತಿತ್ತು. ಸನ್ಮಾನ್ಯ ಮೋದಿ ಅವರು ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ. ಜೈ ನರೇಂದ್ರ ಮೋದಿ"
-ಕೆ.ಎಸ್.ಭಗವಾನ್
ವಿಚಾರವಾದಿಗಳು
ಹಾಗೂ
ಸಾಹಿತಿಗಳು