ಮತ್ತೆ ಆರಂಭವಾಗಿದೆ ಆಪರೇಷನ್ ಚಾಮುಂಡಿ ಕಾರ್ಯಾಚರಣೆ
ಮೈಸೂರು, ನವೆಂಬರ್.5: ಕಳೆದ ವಾರ ನಡೆದ ದರೋಡೆ ಪ್ರಕರಣದಿಂದ ಎಚ್ಚೆತ್ತ ಕೃಷ್ಣರಾಜ ಠಾಣಾ ಪೊಲೀಸರು ಮತ್ತೆ ಆಪರೇಷನ್ ಚಾಮುಂಡಿ' ಕಾರ್ಯಾಚರಣೆ ಆರಂಭಿಸಿದ್ದು, ಕಳೆದ ಐದು ದಿನಗಳಲ್ಲಿ ಬೆಟ್ಟದ ಪ್ರಮುಖ ಸ್ಥಳಗಳಲ್ಲಿ ಕುಳಿತು ಕಾಲ ಕಳೆಯುತ್ತಿದ್ದ ಸುಮಾರು 28 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಚಾಮುಂಡಿಬೆಟ್ಟದ ಮೇಲೆ ಪೊಲೀಸರು ಗಸ್ತು ತಿರುಗುವ ವೇಳೆ ರಾತ್ರಿ 8ರಿಂದ 11 ಗಂಟೆಯ ನಡುವೆ ಬೆಟ್ಟದ ನಿರ್ಜನ ಪ್ರದೇಶದಲ್ಲಿ ಕುಳಿತು ಕಾಲ ಕಳೆಯುತ್ತಿದ್ದ ಸುಮಾರು 28 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಅವರೊಂದಿಗಿದ್ದ ಯುವತಿಯರು ಹಾಗೂ ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.
ಕಳೆದ ವಾರ ರಾತ್ರಿ 9 ಗಂಟೆ ಸುಮಾರಿಗೆ ನಿರ್ಜನ ಪ್ರದೇಶದಲ್ಲಿ ನಡೆದು ಹೋಗುತ್ತಿದ್ದ ಯುವಕ-ಯುವತಿಯ ಮೇಲೆ ದಾಳಿ ನಡೆಸಿದ್ದ ಮೂವರು ಯುವಕರ ತಂಡ ಅವರಿಂದ ಹಣ, ಚಿನ್ನದ ಸರ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೆ.ಆರ್.ಠಾಣಾ ಪೊಲೀಸರು ಮತ್ತೆ ಆಪರೇಷನ್ ಚಾಮುಂಡಿ' ಆರಂಭಿಸಿದ್ದಾರೆ. ಕಾರ್ಯಾಚರಣೆ ಆರಂಭಿಸಿದ ಐದು ದಿನಗಳಲ್ಲಿ ಸುಮಾರು 25 ರಿಂದ 30 ಜೋಡಿಗಳನ್ನು ವಶಕ್ಕೆ ಪಡೆದು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಯುವತಿಯರಿಗೆ ಬುದ್ಧಿವಾದ ಹೇಳಿದ್ದಾರಲ್ಲದೆ, ಅವರ ಪೋಷಕರ ಹೆಸರು, ಮನೆಯ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆದು ಮತ್ತೊಮ್ಮೆ ಈ ರೀತಿ ಸಿಕ್ಕಿಬಿದ್ದರೆ ಪೊಲೀಸ್ ಠಾಣೆಗೆ ನಿಮ್ಮ ಪೋಷಕರನ್ನು ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ಜಾರಿಯಾಗದ ಗೇಟ್ ಅಳವಡಿಕೆ
ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳಿಗೆ ಈಗಾಗಲೇ ಗೇಟ್ ಅಳವಡಿಸಲಾಗಿದೆ. ರಾತ್ರಿ 9 ಗಂಟೆಯ ನಂತರ ಮುಖ್ಯದ್ವಾರವನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ.
ಆದರೆ, ಗೇಟ್ ಅಳವಡಿಸಿದ್ದರೂ ರಾತ್ರಿ ವೇಳೆ ಗೇಟ್ ಬಂದ್ ಮಾಡುವ ಕಾರ್ಯ ನಡೆಯುತ್ತಿಲ್ಲ. ಇದರಿಂದಾಗಿ ಯುವಕರು ಬೆಟ್ಟದ ಮೇಲೆ ಹೊತ್ತಲ್ಲದ ಹೊತ್ತಿನಲ್ಲಿ ಅಡ್ಡಾಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗೇಟ್ ಬಂದ್ಗೊಳಿಸಬೇಕಿದೆ.












Click it and Unblock the Notifications