ಕೊಡಗು ಜಿಲ್ಲೆಯಲ್ಲಿ ಆನೆ ದಾಳಿ ಭಯ:ಮತದಾನಕ್ಕೆ ಹಿಂದೇಟು ಹಾಕಿದ ಜನರು!
ಮೈಸೂರು, ಏಪ್ರಿಲ್ 12: ಕಾಡಾನೆ ಹಾಗೂ ವನ್ಯಪ್ರಾಣಿಗಳು ದಾಳಿ ಮಾಡಬಹುದೆಂಬ ಭಯದಿಂದ ಕೊಡಗು ಲೋಕಸಭಾ ಕ್ಷೇತ್ರದ ಜನರು ಮತದಾನದಿಂದ ಹಿಂದುಳಿಯಲು ಚಿಂತನೆ ನಡೆಸುತ್ತಿದ್ದಾರೆ. ಉರಿ ಬಿಸಿಲಿಗೆ ನೀರನ್ನು ಆರಿಸಿ ನಾಡಿನತ್ತ ಲಗ್ಗೆಯಿಡಲು ಆನೆಗಳು ಮುಂದಾಗುತ್ತಿದ್ದು, ಇದು ಕಾಡಂಚಿನ ಗ್ರಾಮದ ಜನರಿಗೆ ತಲೆನೋವಾದಂತಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹಾಗಾಗಿ ಚುನಾವಣಾ ಕರ್ತವ್ಯಕ್ಕೆ ಆಯೋಜಿಸಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಸೇರಿದಂತೆ ಎಲ್ಲರೂ ಇಲ್ಲಿನ ಹಲವೆಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಇದೇ ಏ.18ರಂದು ಮೈಸೂರು -ಕೊಡಗು ಕ್ಷೇತ್ರಕ್ಕೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯಲಿದೆ. ಇದುವರೆಗೂ ಕೊಡಗು ಜಿಲ್ಲೆಯಲ್ಲಿ 543 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 61 ಮತಗಟ್ಟೆಗಳಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 482 ಮತಗಟ್ಟೆಗಳಿವೆ.

ಗ್ರಾಮೀಣ ಪ್ರದೇಶದ 482 ಮತಗಟ್ಟೆಗಳಲ್ಲಿ 144 ಮತಗಟ್ಟೆಗಳನ್ನು ಕಾಡಾನೆ ಸಂಘರ್ಷವಿರುವ ಮತಗಟ್ಟೆಗಳೆಂದು ಈಗಾಗಲೇ ಜಿಲ್ಲಾಡಳಿತ ಗುರುತಿಸಿದ್ದು, ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಲು ಸಿಬ್ಬಂದಿ ವರ್ಗ ಹೆದರುತ್ತಿದ್ದಾರೆ.
ಬೇಸಿಗೆ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಮಾರ್ಚ್ ಕೊನೆಯಲ್ಲಿ ನಾಪೋಕ್ಲು ಸಮೀಪದ ಕಾಫಿ ತೋಟಕ್ಕೆ ಬಂದಿದ್ದ ಕಾಡಾನೆಗಳು ಕೆರೆಯಲ್ಲಿ ಬಿದ್ದಿದ್ದವು. ಅವುಗಳನ್ನು ಮೇಲಕ್ಕೆ ಎತ್ತಲಾಗಿತ್ತು. ಕಳೆದ ವಾರ ಪಾಲಂಗಾಲದಲ್ಲಿ ಮರಿಯಾನೆಯೊಂದು ಹೊಂಡಕ್ಕೆ ಬಿದ್ದಿತ್ತು.
ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಲ್ಲಿ ಸೂಕ್ಷ್ಮ- ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸುವ ಸ್ಥಿತಿಯಿದ್ದರೆ, ಕೊಡಗಿನಲ್ಲಿ ಮಾತ್ರ ಆನೆ- ಮಾನವ ಸಂಘರ್ಷವಿರುವ ಕೇಂದ್ರಗಳಲ್ಲೂ ತೀವ್ರ ನಿಗಾ ವಹಿಸಬೇಕಾದ ಪರಿಸ್ಥಿತಿಯಿದೆ. ಬೇಸಿಗೆ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ನಾಡಿನತ್ತ ಹೆಜ್ಜೆ ಹಾಕುತ್ತಿವೆ.
ಮತದಾರರು ಸಹ ಮತ ಚಲಾವಣೆ ಸಂದರ್ಭದಲ್ಲಿ ಗ್ರಾಮದ ಒಳಭಾಗಕ್ಕೆ ತಲುಪಲು ಹರಸಾಹಸ ಪಡಬೇಕು. ಹಾಗಾಗಿ ಅವರು ಸಹ ಕಾಡಾನೆ ದಾಳಿಗೆ ಬೆದರಿ ಮತದಾನ ಮಾಡಲು ಹಿಂಜರೆಯುತ್ತಿದ್ದಾರೆ.












Click it and Unblock the Notifications