ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸರ್ಕಾರದ ಒಪ್ಪಿಗೆ
ಮೈಸೂರು, ಸೆಪ್ಟೆಂಬರ್ 29 : ಕರ್ನಾಟಕದಲ್ಲಿ ಚಿತ್ರನಗರಿ ನಿರ್ಮಾಣಗೊಳ್ಳುವ ಕನಸು ನನಸಾಗಲಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 133 ಎಕರೆ ಪ್ರದೇಶದಲ್ಲಿ ಚಿತ್ರನಗರಿ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಚಿತ್ರ ನಗರಿ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಅ.14ರಿಂದ ಆರಂಭವಾಗುವ ಮೈಸೂರು ದಸರಾದ ಕಾರ್ಯಕ್ರಮಗಳ ನಡುವೆ ಚಿತ್ರ ನಗರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ. [ಬಸವೇಶ್ವರ ಬಸ್ ನಿಲ್ದಾಣದಿಂದ ಮೈಸೂರಿಗೆ ಬಸ್ ಸೇವೆ]

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಇಮ್ಮಾವು ಗ್ರಾಮದ ಬಳಿಯ 133 ಎಕರೆ ಪ್ರದೇಶದಲ್ಲಿ ಚಿತ್ರ ನಗರಿ ನಿರ್ಮಾಣಗೊಳ್ಳಲಿದೆ. ಈ ಯೋಜನೆಗಾಗಿ ಈಗಾಗಲೇ 100 ಎಕರೆ ಸ್ಥಳವನ್ನು ಗುರುತಿಸಲಾಗಿದೆ. ಇನ್ನೂ 33 ಎಕರೆ ಜಾಗವನ್ನು ಶೀಘ್ರದಲ್ಲೇ ಗುರುತಿಸಲಾಗುತ್ತದೆ. [ಬೆಂಗಳೂರು-ಮೈಸೂರು ನಡುವೆ ವಿಮಾನ ಹಾರಾಟ ಆರಂಭ]
ಮೂಲ ಸೌಕರ್ಯ ಸಚಿವ ರೋಷನ್ ಬೇಗ್ ಅವರು ಈ ಕುರಿತು ಮಾಹಿತಿ ನೀಡಿದ್ದು, 'ನೋಯ್ಡಾದಲ್ಲಿರುವ ಚಿತ್ರನಗರಿ ಮಾದರಿಯಲ್ಲಿಯೇ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಮೈಸೂರಿನಲ್ಲಿ ಚಿತ್ರ ನಗರಿ ಸ್ಥಾಪನೆ ಮಾಡಲಾಗುತ್ತದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವ ಚಿಂತನೆಯೂ ಸರ್ಕಾರದ ಮುಂದಿದೆ' ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ರೋಷನ್ ಬೇಗ್, ಎಚ್.ಸಿ.ಮಹದೇವಪ್ಪ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರು ಪಾಲ್ಗೊಂಡಿದ್ದರು. [ಸ್ವಚ್ಛ ಭಾರತ ಅಭಿಯಾನ, ದೇಶಕ್ಕೆ ಮೈಸೂರು ನಂ 1]












Click it and Unblock the Notifications