ಆರ್ ಆರ್ ನಗರ ಚುನಾವಣೆ ಮುಂದೂಡಿದ್ದು ಸರಿಯಲ್ಲ: ಸಿದ್ದು
ಬೆಂಗಳೂರು, ಮೇ 12: "ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿದ್ದು ಸರಿಯಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು(ಮೇ 12) ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮತದಾನ ಮಾಡಿದ ಸಿದ್ದರಾಮಯ್ಯ, "ಚುನಾವಣೆ ಮುಂದೂಡುವುದಕ್ಕೆ ಆಯೋಗದ ಬಳಿ ಏನಿದೆ ಸಾಕ್ಷಿ?" ಎಂದು ಪ್ರಶ್ನಿಸಿದ್ದಾರೆ.
ಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳು
"ಯಾವುದೋ ಕಾರ್ಡ್ ಗಳು ಎಲ್ಲೋ ಸಿಕ್ಕಿದ್ದಕ್ಕೆ, ಚುನಾವಣೆ ಮುಂದೂಡಿದರೆ, ಹೇಗೆ ಅದನ್ನು ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ?" ಎಂದು ಅವರು ಕೇಳಿದ್ದಾರೆ. ಮೇ 08 ರಂದು ಸಂಜೆ ರಾಜರಾಜೇಶ್ವರಿ ನಗರದ ಜಾಲಹಳ್ಳಿ ವ್ಯಾಪ್ತಿಯ ಎಸ್ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ 9,746 ವೋಟರ್ ಐಡಿ ಪತ್ತೆಯಾಗಿದ್ದವು. ಇದೆಲ್ಲವೂ ಅಸಲಿ ವೋಟರ್ ಐಡಿಗಳು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು. ಚುನಾವಣಾ ಅಕ್ರಮದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಮೇ 28 ಕ್ಕೆ ಕೇಂದ್ರ ಚುನಾವಣಾ ಆಯೋಗ ಮುಂದೂಡಿದ್ದು, ಫಲಿತಾಂಶ ಮೇ 31 ರಂದು ಹೊರಬೀಳಲಿದೆ.
LIVE: ಕರ್ನಾಟಕ ಚುನಾವಣೆ: ಇದುವರೆಗೂ ಶೇ.37 ರಷ್ಟು ಮತದಾನ ದಾಖಲು
ಗೆಲ್ಲುವ ವಿಶ್ವಾಸ
"ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ. ಬಾದಾಮಿಯಲ್ಲೂ ನನ್ನ ಗೆಲುವು ಖಚಿತ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ಡಮ್ಮಿ ಅಭ್ಯರ್ಥಿ ಕಣಕ್ಕಿಳಿಸಿದೆ. ಆದರೂ ನಾನು ಉತ್ತಮವಾದ ಅಂತರದಿಂದ ಗೆಲ್ಲುತ್ತೇನೆ. ರಾಜ್ಯಾದ್ಯಂತ ನಮ್ಮ ಪಕ್ಷದ ಪರವಾಗಿ ಉತ್ತಮ ಮತದಾನವಾಗುತ್ತಿದೆ" ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು.