ಪಕ್ಷೇತರ ಅಭ್ಯರ್ಥಿಗಳಿಂದ ಈ ಬಾರಿ ಜೆಡಿಎಸ್ ಗೆ ಬೆಂಬಲ : ದೇವೇಗೌಡ
Recommended Video
ಮೈಸೂರು, ಮೇ 08: ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವೇ ಸರ್ಕಾರ ನಡೆಸಲಿದೆ. ಪಕ್ಷೇತರ ಅಭ್ಯರ್ಥಿಗಳು ಜೆಡಿಎಸ್ ಅನ್ನೇ ಬೆಂಬಲಿಸಲಿದ್ದಾರೆ" ಎಂದು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಇಂದು(ಮೇ 08) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದುವರೆಗೂ ನಡೆದ ಸರ್ವೆಗಳಲ್ಲಿ ಜೆಡಿ ಎಸ್ ಗೆ ಉಳಿದೆರಡು ರಾಷ್ಟ್ರೀಯ ಪಕ್ಷ(ಕಾಂಗ್ರೆಸ್, ಬಿಜೆಪಿ)ಗಳಿಗಿಂತ ಕಡಿಮೆ ಸೀಟು ಬಂದಿದೆ. ಅದಕ್ಕೆ ಕಾರಣ ಸರ್ವೆಯನ್ನು ದುಡ್ಡು ಕೊಟ್ಟು ಮಾಡಿಸಿರುವುದು. ಹಣ ಕೊಟ್ಟವರ ಪರವಾಗಿ ಮಾಡುವ ಸರ್ವೆಗಳ ಬಗ್ಗೆ ನನಗೆ ನಂಬಿಕೆ ಇಲ್ಲ" ಎಂದಿದ್ದಾರೆ.
ಇಂದಿಗೂ ನೆನಪಾಗಿ ಕಾಡುವ ದೇವೇಗೌಡರು ಹೇಳಿದ ಆ ಸ್ವಾರಸ್ಯಕರ ಕಥೆ
"ನಾನು ರಾಜಕಾರಣದಲ್ಲಿ ಸಾಕಷ್ಟು ಸಿಹಿ ಕಹಿ ಅನುಭವಿಸಿದ್ದೇನೆ. ನಾವು ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತೇವೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷರೂ ಆಗಿರುವ ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ನನಗೆ ದಣಿವಾಗೋಲ್ಲ!
ನಾನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೆಲ್ಲ ನಡೆಸುವಷ್ಟು ಅದ್ಧೂರಿಯಾಗಿ ರೋಡ್ ಶೋ ನಡೆಸುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ ಜೆಡಿಎಸ್ ಗೆಲುವಿಗಾಗಿ ನಾನು ದಣಿವರಿಯದೆ ಕೆಲಸ ಮಾಡುತ್ತಿದ್ದೇನೆ. ನನಗೆ ದಣಿವಾಗುತ್ತಿಲ್ಲ. ಈ ಬಾರಿ ಉತ್ತರ ಕರ್ನಾತಕ ಭಾಗದಲ್ಲೂ ಜೆಡಿಎಸ್ ಅಭೂತಪೂರ್ವ ಯಶಸ್ಸು ಪಡೆಯಲಿದೆ ಎಂದು ಗೌಡರು ಹೇಳಿದರು.
10-12 ಪಕ್ಷೇತರ ಅಭ್ಯರ್ಥಿಗಳು
ಈ ಚುನಾವಣೆಯಲ್ಲಿ ಸುಮಾರು 10-12 ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಗೆ ಬೆಂಬಲ ನೀಡದೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಬೆಂಬಲ ನೀಡಲಿವೆ ಎಂದು ಅವರು ಹೇಳಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ನಮ್ಮ ಪ್ರಣಾಳಿಕೆ ಬಡವರು, ಮಹಿಳೆಯರು, ರೈತರು, ಶ್ರಮಿಕ ವರ್ಗದ ಪರವಾಗಿದೆ. ಜನರು ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕುಮಾರಸ್ವಾಮಿ ಬಹಿಷ್ಕಾರ ಎಂಬ ಗೌಡರ ಹೊಸ ತಂತ್ರದ ಹಿಂದೇನಿದೆ?
ಅಂಬರೀಶ್ ಜೆಡಿಎಸ್ ಗೆ ಬರುತ್ತಾರಾ?
"ಜೆಡಿಎಸ್ ಗೆ ಆಹ್ವಾನಿಸುವ ಕುರಿತಂತೆ ಕಾಂಗ್ರೆಸ್ ಮುಖಂಡ ಅಂಬರೀಶ್ ಅವರೊಂದಿಗೆ ನಾನು ಮಾತನಾಡಿಲ್ಲ, ಮಾತನಾಡುವುದೂ ಇಲ್ಲ" ಎಂದು ಇದೇ ಸಂದರ್ಭದಲ್ಲಿ ದೇವೇಗೌಡರು ಹೇಳಿದರು. ಅಂಬರೀಶ್ ಅವರ ಆತ್ಮಸಾಕ್ಷಿಗೆ ಯಾರನ್ನು ಬೆಂಬಲಿಸಬೇಕು ಅನ್ನಿಸುತ್ತದೆಯೋ ಹಾಗೆಯೇ ಮಾಡಲಿ. ನಾನು ಅವರಿಗೆ ಒತ್ತಾಯ ಮಾಡುವುದಿಲ್ಲ ಎಂದರು. ಇತ್ತೀಚೆಗೆ ಅಂಬರೀಶ್ ಅವರ ಬೆಂಗಳೂರು ನಿವಾಸದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ಸಂದರ್ಭದಲ್ಲಿ ಜೆಡಿಎಸ್ ಅನ್ನು ಬೆಂಬಲಿಸುವಂತೆ ಕೋರಿದ್ದರು ಎನ್ನಲಾಗಿದೆ.
ಅನಾರೋಗ್ಯದ ನಡುವಲ್ಲೂ ಎಚ್ಡಿಕೆ ಪ್ರಚಾರ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲೇಬೇಕೆಂದು ಆರೋಗ್ಯ ಲೆಕ್ಕಿಸದೆ ಪ್ರಚಾರ ನಡೆಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ ಟಿ ದೇವೇಗೌಡ ಒಬ್ಬರೇ ಪ್ರಚಾರ ನಡೆಸಿ ಗೆದ್ದು ಬರುತ್ತಾರೆ. ಅವರಿಗೆ ಆ ಸಾಮರ್ಥ್ಯವಿದೆ. ಮೈಸೂರಿನಲ್ಲಿ ಚುನಾವಣೆಗೂ ಮುನ್ನ ಇದು ನನ್ನ ಕೊನೆಯ ಪತ್ರಿಕಾಗೋಷ್ಠಿ. ಚಾಮರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹರೀಶ್ ಗೌಡಗೆ ಈಗಲೂ ಮನವಿ ಮಾಡುತ್ತೇನೆ. ಅವರು ಜೆಡಿಎಸ್ ಅಭ್ಯರ್ಥಿ ಪ್ರೋ. ರಂಗಪ್ಪ ಅವರಿಗೆ ಬೆಂಬಲ ನೀಡಲಿ. ಮುಂದೆ ಸರ್ಕಾರ ಬರುತ್ತದೆ ಉತ್ತಮ ಸ್ಥಾನ ನೀಡ್ತೀವಿ. ಕೊನೆಯಲ್ಲಿ ಏನೂ ಹೇಳಲಾರೆ. ಸಹಕಾರ ನೀಡೋದು ಬಿಡೋದು ಹರೀಶ್ ಗೌಡನಿಗೆ ಬಿಟ್ಟಿದ್ದು. ಹರೀಶ್ ಗೌಡ ನಮ್ಮ ಹುಡುಗ ಎಂದಷ್ಟೇ ಹೇಳಬಲ್ಲೆ. ವರುಣಾ ಹಾಗೂ ಕೆ.ಆರ್. ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಕಡಿಮೆ ಎರಡು ರಾಷ್ಟ್ರೀಯ ಪಕ್ಷಗಳು ಹಣ ಬಲದ ಮೇಲೆ ಹೋರಾಟ ಮಾಡುತ್ತಿವೆ. ನಮ್ಮ ಬಳಿ ಬಂಡವಾಳ ಇಲ್ಲ ಎಂದು ಅವರು ಮಾತು ಮುಗಿಸಿದರು.