ಕೊನೆಗೂ ವರುಣಾಕ್ಕೆ ಬರದ ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
ಮೈಸೂರು, ಜೂನ್ 10 : ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ವರುಣಾ ಕ್ಷೇತ್ರಕ್ಕೆ ಬಿ.ವೈ ವಿಜಯೇಂದ್ರ ಬರುತ್ತಾರೆಂಬ ಕನಸು ಕಂಡಿದ್ದ ಇಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ಅಸಮಾಧಾನ ಉಂಟಾಗಿದೆ.
ಟಿಕೆಟ್ ಕೈ ತಪ್ಪಿದಾಗ ವರುಣಾಗೆ ಬರುತ್ತೇನೆ, ಪ್ರಚಾರ ಕೂಡ ನಡೆಸುತ್ತೇನೆ ಎಂದಿದ್ದ ವಿಜಯೇಂದ್ರ ಅಮೀತ್ ಷಾ ರೋಡ್ ಶೋ ಹೊರತುಪಡಿಸಿದರೆ ವರುಣಾದತ್ತ ಮುಖ ಮಾಡಲೇ ಇಲ್ಲ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ವರುಣಾ ಮತದಾರರಲ್ಲಿ ಮನವಿ ಮಾಡಿರುವ ವಿಜಯೇಂದ್ರ, ಬಿಜಿಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ಪರ ಮತಯಾಚನೆ ಮಾಡಿದ್ದಾರೆ.
ಬಿಜೆಪಿ ಅಲೆ ಇದ್ದು ಯಡಿಯೂರಪ್ಪ ಸಿಎಂ ಆಗಲಿದ್ದಾರೆ. ಈ ಕಾರಣಕ್ಕೆ ತೋಟದಪ್ಪ ಬಸವರಾಜು ಗೆಲ್ಲಬೇಕಿದೆ. ಎಲ್ಲ ವರುಣಾ ಮತದಾರರು ಬಿಜೆಪಿಗೆ ಮತಚಲಾಯಿಸಿ ಎಂದು ವಿಜಯೇಂದ್ರ ಮನವಿ ಮಾಡಿ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಟಿಕೇಟ್ ಕೈ ತಪ್ಪಿದ ಬಳಿಕ ಮೈಸೂರು ಚಾಮರಾಜನಗರ ಭಾಗದಲ್ಲಿ 15 ದಿನ ಪ್ರಚಾರ ನಡೆಸಿರುವ ವಿಜಯೇಂದ್ರ, ಒಂದೇ ಒಂದು ದಿನವು ವರುಣಾಗಾಗಿ ಮೀಸಲಿಡದೆ ಚುನಾವಣೆ ಪ್ರಚಾರ ಮುಗಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲೂ ಸ್ಪಷ್ಟನೆ ನೀಡಿದ ವಿಜಯೇಂದ್ರ:
ನಮ್ಮ ಎಲ್ಲ ಮುಖಂಡರು ಸೇರಿ ವರುಣ ಅಭ್ಯರ್ಥಿ ಬಸವರಾಜ್ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ. ವೈ ವಿಜಯೇಂದ್ರ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಒಂದು ತಿಂಗಳ ಹಿಂದೆ ವರುಣಾ ಕ್ಷೇತ್ರದ ಮೂಲಕ ಹಳೆ ಮೈಸೂರು ಭಾಗಕ್ಕೆ ಬಂದಿದ್ದೆ. ಈಗ ವರುಣಾದಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದೆ. ನಾನು ಅಭ್ಯರ್ಥಿಯಾಗದಿದ್ದರೂ ನನ್ನನ್ನು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನ ಕೊಟ್ಟು ಹಳೆ ಮೈಸೂರು ಭಾಗದಲ್ಲಿ ಓಡಾಡಬೇಕು ಎಂದು ಹೈಕಮಾಂಡ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಿದ್ದೇನೆ. ವರುಣಾ ಕ್ಷೇತ್ರದಲ್ಲಿ ಸಣ್ಣಪುಟ್ಟ ಗದ್ದಲ ಆಗಿದೆ. ಆದರೆ ಇದರ ಬಗ್ಗೆ ಕ್ಷೇತ್ರದ ಜನರನ್ನು ಕ್ಷಮೆಯಾಚಿಸಿದ್ದೇನೆ. ನಮ್ಮ ಎಲ್ಲ ಮುಖಂಡರು ಸೇರಿ ಬಸವರಾಜ್ ಅವರನ್ನು ಗೆಲ್ಲಿಸಬೇಕು ಎಂದರು.
ನನಗೆ ಮತದಾರರ ಜಾತ್ಯತೀತವಾಗಿ ಪ್ರೀತಿ ತೋರಿದ್ದಾರೆ. ವರುಣಾದಲ್ಲಿ ಬಸವರಾಜ್ ಅವರು ಗೆಲ್ಲುತ್ತಾರೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಸೆಯಲು ಬಿಜೆಪಿ ಸರ್ಕಾರ ಬರುತ್ತದೆ. ಹಳೇ ಮೈಸೂರು ಭಾಗದಲ್ಲಿ ಬಹಳ ಆಶ್ಚರ್ಯ ರೀತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ. ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ಅಭ್ಯರ್ಥಿಗಳು ಗೆದ್ದು ಬರಲಿದ್ದಾರೆ ಎಂದರು.
ಸ್ಪಷ್ಟ ಬಹುಮತ ಬಂದೇ ಬರುತ್ತದೆ. ಅತಂತ್ರ ಸ್ಥಿತಿ ಕಲ್ಪನೆ ಅಸ್ಪಷ್ಟವಾಗಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು. ನಾನು ಇದೀಗ ಮತ್ತೆ ಶಿಕಾರಿಪುರಕ್ಕೆ ತೆರಳುತ್ತಿದ್ದೇನೆ. ಈ ಭಾಗದ ಜನರು ನನಗೆ ಅತಿಯಾದ ಪ್ರೀತಿ ತೋರಿದ್ದಾರೆ. ಮೈಸೂರಿನ ಎಲ್ಲಾ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.












Click it and Unblock the Notifications