ಸರಗೂರಿನಲ್ಲಿ ಆಧಾರ್ ಕರೆಕ್ಷನ್ ಗಾಗಿ ರಾತ್ರಿಯಿಡಿ ಜಾಗರಣೆ
ಮೈಸೂರು, ಆಗಸ್ಟ್ 1: ಕೇವಲ ಆಧಾರ್ ಕರೆಕ್ಷನ್ ಗಾಗಿ ಜನರು ಬ್ಯಾಂಕ್ ಮುಂದೆ, ಮೋರಿ ಪಕ್ಕ ರಾತ್ರಿಯೆಲ್ಲಾ ಊಟ, ತಿಂಡಿ ಬಿಟ್ಟು ಜಾಗರಣೆ ಮಾಡುವ ಪರಿಸ್ಥಿತಿ ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಸರಗೂರಿನಲ್ಲಿ ನಡೆಯುತ್ತಿದೆ.
ಜನರು ರಾತ್ರಿ 10 ಗಂಟೆಗೆ ಆಧಾರ್ ಕರೆಕ್ಷನ್ ಗೆಂದು ಇಲ್ಲಿಗೆ ಬಂದರೆ ಪಕ್ಕದಲ್ಲಿರುವ ಎಸ್ಬಿಐ ಬ್ಯಾಂಕ್ ಮುಂದೆಯೇ ಜಾಗರಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕ್ಯೂನಲ್ಲಿ ನಿಂತರೂ ಆಧಾರ್ ಕರೆಕ್ಷನ್ ಮಾಡಿಸಲು ಆಗುವುದಿಲ್ಲ.
ಕೇವಲ ಒಂದೇ ಒಂದು ಆಧಾರ್ ಕರೆಕ್ಷನ್ ಗಾಗಿ ಮೋರಿ ಪಕ್ಕವೇ ದಿನಕಳೆಯೋ ಸ್ಥಿತಿ ಅಲ್ಲಿ ಉಂಟಾಗಿದೆ. ಆಧಾರ್ ಕಾರ್ಡ್ ಗಾಗಿ ಬುತ್ತಿ, ಪೇಸ್ಟ್, ಬ್ರಷ್, ಬಟ್ಟೆ ಸಮೇತ ಕಿ.ಮೀ.ಗಟ್ಟಲೆಯಿಂದ ಬಂದು ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಲ್ಲುವ ಜನರು ಈ ಅವ್ಯವಸ್ಥೆಯಿಂದ ಬೇಸತ್ತಿ ಹೋಗಿದ್ದಾರೆ.

ನಾಡ ಕಚೇರಿಯಲ್ಲಿ ಆಧಾರ್ ಕರೆಕ್ಷನ್ ಮಾಡುವ ವ್ಯವಸ್ಥೆ ಇಲ್ಲ. ಬ್ಯಾಂಕ್ ಗೆ ಈ ಕೆಲಸ ವಹಿಸಲಾಗಿದ್ದು, ದಿನಕ್ಕೆ 20 ಜನರಿಗೆ ಮಾತ್ರ ಆಧಾರ್ ಕರೆಕ್ಷನ್ ಮಾಡಲಾಗುತ್ತದೆ. ಆದರೆ ಜನ ಹೆಚ್ಚಾಗಿ ಕ್ಯೂನಲ್ಲಿದ್ರು ಕೂಡ ನಾಳೆ ಬನ್ನಿ ಅಂತಾರೆ ಅಲ್ಲಿನ ಸಿಬ್ಬಂದಿ .
ಒಂದು ಆಧಾರ್ ಕರೆಕ್ಷನ್ ಮಾಡಿಸಲು ಹೆಣಗಾಡುವ ಜನರು ಇಡೀ ಕುಟುಂಬದ ಆಧಾರ್ ಕರೆಕ್ಷನ್ ಮಾಡಿಸಬೇಕಾದರೆ ಎಲ್ಲರೂ ಜಾಗರಣೆ ಮಾಡಬೇಕಾಗುತ್ತದೆ.
ಇನ್ನು ಎಚ್.ಡಿ.ಕೋಟೆ ಜನರ ಗೋಳು ಕೇಳಲು ಯಾವುದೇ ಜನಪ್ರತಿನಿಧಿಗಳು ಮುಂದೆ ಬಂದಿಲ್ಲ. ಎಚ್.ಡಿ ಕೋಟೆ ಶಾಸಕರು ಮತ್ತು ಸಂಸದರಿಗೆ ಮತ ಹಾಕಿದ ಮತದಾರನ ಈ ನೋವು ಕಾಣತ್ತಿಲ್ಲ.
ಇದನ್ನು ಅಲ್ಲಿನ ಜನರು ಪ್ರಶ್ನಿಸಿದರೆ ಆಧಾರ್ ಸರಿಪಡುವ ಗೋಜಿಗೇ ಹೋಗುವುದಿಲ್ಲ. ನಿಮಗೇ ಬೇಕಾದಲ್ಲಿ ಕ್ಯೂನಲ್ಲಿ ನಿಲ್ಲಿ. ಇಲ್ಲ ಜಾಗ ಖಾಲಿ ಮಾಡಿ ಅಂತ ಬ್ಯಾಂಕ್ ಸಿಬ್ಬಂದಿ ಸಿಡಿಮಿಡಿಗೊಳ್ಳುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನಹರಿಸಬೇಕಿದೆ.












Click it and Unblock the Notifications