ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಸಂದರ್ಶನ
ಮೈಸೂರು, ಡಿಸೆಂಬರ್ 07 : ಈಗಾಗಲೇ ಹಲವು ಕೃತಿಗಳನ್ನು ಬರೆದು, ಪತ್ರಕರ್ತನೋರ್ವ ಎಲ್ಲಾ ಕ್ಷೇತ್ರದಲ್ಲೂ ನಿಪುಣನಾಗಬಲ್ಲ ಎಂದು ಸಾಬೀತುಪಡಿಸಿರುವ ಲೇಖಕ ಹಾಗೂ ಮೈಸೂರಿನ ಕನ್ನಡಪ್ರಭ ಪತ್ರಿಕೆಯ ವರದಿಗಾರ ಪ್ರಸನ್ನಕುಮಾರ್ ನಮಗೆ ಚಿರಪರಿಚಿತರು.
ಸದ್ಯ ಅವರು ಸುಮಾರು 10 ಕೃತಿಗಳನ್ನು ಕೃಷಿ, ಪ್ರವಾಸ, ಪತ್ರಿಕೋದ್ಯಮ ಸೇರಿದಂತೆ ಹಲವು ವಿಭಾಗಗಳಲ್ಲಿ ಬರೆದು ಪ್ರಕಟಿಸಿದ್ದಾರೆ. ಶುಕ್ರವಾರ ಅವರ ಬಹುನಿರೀಕ್ಷಿತ ಕೃತಿ 'ಮೈಸೂರು - ಚಾಮರಾಜನಗರ ರಾಜಕೀಯ ಇತಿಹಾಸ' ಪುಸ್ತಕವನ್ನು ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.
ಪುಸ್ತಕ ರೂಪಕ್ಕಿಳಿದ 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ'
ಡಿಸೆಂಬರ್ 8ರಂದು ಸಂಜೆ 4.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರೂ ಬರುವಂತೆ ಅಂಶಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.
ಇನ್ನು ಈ ಪುಸ್ತಕದ ಕುರಿತಾದ ಸ್ವಾರಸ್ಯಕರ ಸಂಗತಿಯನ್ನು ಲೇಖಕ ಪ್ರಸನ್ನ ಕುಮಾರ್ ಒನ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದಾರೆ... . ಸಂದರ್ಶನದ ವಿವರ ಇಲ್ಲಿದೆ...
ನಿಮ್ಮ ಪುಸ್ತಕ ಇತರ ಪುಸ್ತಕಕ್ಕಿಂತ ಭಿನ್ನ ಹೇಗೆ?
'ಮೈಸೂರು-ಚಾಮರಾಜನಗರ ರಾಜಕೀಯ ಇತಿಹಾಸ' ಪುಸ್ತಕ ಚಿತ್ತನ ಚಿತ್ತಾರ ಪ್ರಕಟಿಸಿರುವ, 728 ಪುಟಗಳ, ಬಹುವರ್ಣದ ಈ ಕೃತಿಯ ಮೂಲಬೆಲೆ 900 ರೂ. ಲೋಕಾರ್ಪಣೆಯ ದಿನ ಅಂದರೆ ನಾಳೆ
ರಿಯಾಯ್ತಿ ದರದಲ್ಲಿ ರೂ.500ಗೆ ದೊರೆಯಲಿದೆ. ನನಗಿರುವುದು ಸುಮಾರು 3 ದಶಕಗಳ ಪತ್ರಿಕೋದ್ಯಮದ ಅನುಭವ. ಮೂವತ್ತು ವರುಷಗಳಿಂದಲೂ ಪತ್ರಿಕೋದ್ಯಮದ ಗರಡಿಯಲ್ಲೇ ಬೆಳೆದ ನಾನು, ಹಲವು ರಾಜಕಾರಣಿ ರಾಜಕಾರಣವನ್ನು ಹತ್ತಿರದಿಂದ ಬಲ್ಲೆ.
ಈಗಾಗಲೇ ಕೆಲವು ಕೃತಿಗಳನ್ನು ಬರೆದಿರುವ ನನಗೆ ರಾಜಕಾರಣದ ಬಗ್ಗೆ ಬರೆಯಬೇಕೆಂಬ ಮನಸ್ಸು ಬಂದಿದ್ದು 2008ರಿಂದ ಈಚೆಗೆ. ಅಂದಿನಿಂದ ಹಿಡಿದು ಈ ಪುಸ್ತಕದಲ್ಲಿ ನನ್ನ ಕೈಲಾದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲು ಶುರುವಿಟ್ಟುಕೊಂಡೆ. ಅದೇ ನಿಮ್ಮ ಕೈ ಸೇರಲಿರುವ ಈ ಪುಸ್ತಕ.
ಈ ಪುಸ್ತಕವನ್ನು ರಾಜಕಾರಣದ ವಿಕೀಪಿಡಿಯಾ ಎನ್ನಬಹುದೇ ?
ಇದು ನನ್ನ ಬಹುದಿನಗಳ ಕನಸಿನ ಕೂಸು. ಇದರಲ್ಲಿ ಕೇವಲ ಮೈಸುರು, ಚಾಮರಾಜನಗರ ಮಾತ್ರವಲ್ಲ ಕೊಡಗಿನ ಮಾಹಿತಿ ಕೂಡ ದಾಖಲಾಗಿದೆ. ಭವ್ಯ ಇತಿಹಾಸವುಳ್ಳ ಅವಿಭಜಿತ ಮೈಸೂರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣಕ್ಕೆ ನೀಡಿರುವ ಕೊಡುಗೆ ಅಪಾರ. ಈ ಭಾಗದ ರಾಜಕಾರಣಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮಂತ್ರಿಗಳಾಗಿ ಮಹತ್ವದ ಖಾತೆಗಳನ್ನು ನಿರ್ವಹಿಸಿದ್ದಾರೆ. ರಾಜ್ಯಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.
ಡಿ. ದೇವರಾಜ ಅರಸು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದರು. ಎಂ.ಎಸ್. ಗುರುಪಾದಸ್ವಾಮಿ, ಕೆ.ಎಸ್. ನಾಗರತ್ನಮ್ಮ, ಬಿ. ರಾಚಯ್ಯ, ಅಬ್ದುಲ್ ನಜೀರ್ಸಾಬ್, ಎಂ. ರಾಜಶೇಖರಮೂರ್ತಿ ಅವರಿಗೂ ಮುಖ್ಯಮಂತ್ರಿಗಳಾಗುವ ಅರ್ಹತೆಗಳಿದ್ದವು. ಆದರೆ, ಅವಕಾಶ ಸಿಗಲಿಲ್ಲ ಮುಂತಾದವೂ ಸೇರಿದಂತೆ ಇವೆಲ್ಲವೂ ಈ ಕೃತಿಯಲ್ಲಿ ಅಡಕವಾಗಿದೆ.
ಪುಸ್ತಕ ಓದಿ ಮತ ಯಾರಿಗೆ ನೀಡಬಹುದೆಂದು ನಿರ್ಧರಿಸಬಹುದೇ?
ಓರ್ವ ವ್ಯಕ್ತಿ ಮಾಡಿದ ಸಾಧನೆಯನ್ನು ಅವರ ಸಾಮಾಜಿಕ ಕಳಕಳಿಯನ್ನು ಇಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ. ಹಾಗಾಗಿ ಇದು ಪುಸ್ತಕವಾಗಿ ಉಳಿಯದೇ ಗ್ರಂಥ ರೂಪವಾಗಿ ಹೊರಹೊಮ್ಮುತ್ತಿದೆ.
ಇದೇ ಕೃತಿ ಹಾಗೂ ವಿಷಯದ ರಚನೆ ಏಕೆ?
ನಾನು ಕಾಲಕಾಲಕ್ಕೆ ಚುನಾವಣಾ ಮಾಹಿತಿ ಸಂಗ್ರಹಿಸುತ್ತಾ ಬಂದಿರುವುದರಿಂದ ಯಾವಾಗಲೋ ರಾಜಕೀಯ ಇತಿಹಾಸ ಕೃತಿ ಹೊರತರಬಹುದಿತ್ತು. ತೀರಾ ಇತ್ತೀಚೆಗೆ ಕ್ಷೇತ್ರ ವಿಂಗಡಣೆ ನಡೆದ 2008ರ ಚುನಾವಣೆ ನಂತರ ಈ ಪುಸ್ತಕ ಹೊರತರಬಹುದಿತ್ತು. ಆದರೆ ಡಿ. ದೇವರಾಜ ಅರಸು ಅವರ ನಂತರ ಈ ಭಾಗದವರೊಬ್ಬರು ಮುಖ್ಯಮಂತ್ರಿಯಾದಲ್ಲಿ ವಿಮರ್ಶಾತ್ಮಕವಾಗಿ ಬರೆಯಲು ಅನುಕೂಲವಾಗುತ್ತದೆ ಎಂದು ಕಾಯುತ್ತಿದ್ದೆ.
2013 ರ ಮೇ 13 ರಂದು ಈ ಭಾಗದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಮೂಲಕ ಆ ಕಾಲ ಕೂಡಿ ಬಂದಿತು. ಹೀಗಾಗಿ 2018ರ ಚುನಾವಣೆಗೆ ಮೊದಲು ಪುಸ್ತಕ ಹೊರತರಲೇಬೇಕು ಎಂಬ ಉದ್ದೇಶದಿಂದ ಮೊದಲ ಸಾರ್ವತ್ರಿಕ ಚುನಾವಣೆ ನಡೆದ 1952 ರಿಂದ 2017ರ ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆವರೆಗೆ ಎಲ್ಲಾ ದೃಷ್ಟಿಕೋನಗಳನ್ನು ಒಳಗೊಂಡ ವಿವರವಾದ ಮಾಹಿತಿ ಕಲೆ ಹಾಕಿದೆ.
ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತು ಎಂಬ ಮೂರು ವಿಭಾಗಗಳ ಜೊತೆಗೆ ಇತ್ತೀಚೆಗೆ ನಮ್ಮನ್ನು ಅಗಲಿದವರು, ಲೋಕಸಭೆ ಹಾಗೂ ವಿಧಾನಸಭಾ ವರ್ಷವಾರು ಫಲಿತಾಂಶ ಎಂಬ ಮತ್ತೂ ಮೂರು ವಿಭಾಗಗಳನ್ನು ಸೇರಿಸಿದೆ. ಒಟ್ಟಾರೆ ಆರು ವಿಭಾಗಗಳಲ್ಲಿ 250 ಅಧ್ಯಾಯಗಳಿವೆ.
ಪುಸ್ತಕದಲ್ಲಿ ಏನೇನಿದೆ ?
ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ವಿವರದ ಜೊತೆಗೆ ಇಡೀ ರಾಜ್ಯದಿಂದ ಲೋಕಸಭೆಯ್ಕೆಗೆ ಆಯ್ಕೆಯಾದವರ ವಿವರ ಕೂಡ ಸಿಗುತ್ತದೆ. ಅಲ್ಲದೇ ಚುನಾವಣೆಯಿಂದ ಚುನಾವಣೆಗೆ ಆದ ಬದಲಾವಣೆಗಳು, ಗೆದ್ದವರು, ರಾಜಕೀಯ ಪರಿಣಾಮಗಳು, ವಿಶ್ಲೇಷಣೆಗಳಿವೆ.
ಅದೇ ರೀತಿ ವಿಧಾನಸಭಾ ಕ್ಷೇತ್ರಗಳು, ಈಗಾಗಲೇ ರದ್ದಾಗಿರುವ ವಿಧಾನಸಭಾ ಕ್ಷೇತ್ರಗಳ ಪರಿಚಯ, ಗೆದ್ದವರ ವಿವರ, ಮಂತ್ರಿಯಾದವರು, ಸೋತವರು, ಗೆದ್ದವರು, ಅತಿ ಹೆಚ್ಚು ಬಾರಿ ಆಯ್ಕೆಯಾದವರು, ಹ್ಯಾಟ್ರಿಕ್, ಡಬಲ್ ಹ್ಯಾಟ್ರಿಕ್ ಪಡೆದವರು, ಕುಟುಂಬ ರಾಜಕಾರಣ, ರಾಜಕೀಯ ಸ್ಥಿತ್ಯಂತರಗಳ ಜೊತೆಗೆ, ಚಾಮರಾಜನಗರ, ಚಾಮರಾಜಕ್ಕೆ ರಾಜ್ಯದಲ್ಲಿ, ಮೈಸೂರಿಗೆ ಕೇಂದ್ರದಲ್ಲಿ ಮಂತ್ರಿಗಿರಿ ಸಿಗದಿರುವುದು, ರಾಷ್ಟ್ರ ರಾಜಕಾರಣದಲ್ಲಿ ಮಾಲಂಗಿ ಮಹಿಮೆ ಸೇರಿದಂತೆ ಹತ್ತು ಹಲವು ಸ್ವಾರಸ್ಯಕರ ಸಂಗತಿಗಳೂ ಇವೆ. ಒಟ್ಟಾರೆ ಎರಡು ಜಿಲ್ಲೆಗಳ ರಾಜಕಾರಣವನ್ನು ಎಲ್ಲಾ ದೃಷ್ಟಿಕೋನಗಳಿಂದ ಕಟ್ಟಿಕೊಡುವ ಪ್ರಯತ್ನ ನಡೆದಿದೆ.