ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ : ಅಸಮಾಧಾನ ಸ್ಫೋಟ
ಮೈಸೂರು, ಫೆಬ್ರವರಿ 19 : ಜೆಡಿಎಸ್ ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿ ಬಿಡುಗಡೆ ಬೆನ್ನಲ್ಲೇ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮೈಸೂರಿನಲ್ಲಿ ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರ ವಿರುದ್ಧ ವಿಧಾನಪರಿಷತ್ ಸದಸ್ಯ ಹಾಗೂ ಚಿತ್ರ ನಿರ್ಮಾಪಕ ಸಂದೇಶ ನಾಗರಾಜ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.
'ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಹಾಳಾಗಲು ಶಾಸಕ ಸಾ.ರಾ.ಮಹೇಶ್ ಕಾರಣ. ನನ್ನ ತಮ್ಮ ಸಂದೇಶ ಸ್ವಾಮಿಗೆ ಟಿಕೆಟ್ ಕೈ ತಪ್ಪಲು ಸಾ.ರಾ.ಮಹೇಶ್ ಕೈವಾಡವಿದೆ' ಎಂದು ಆರೋಪಿಸಿದರು.

'ಪ್ರತಿ ಕ್ಷೇತ್ರದ ವಿಚಾರದಲ್ಲಿ ವರಿಷ್ಠರ ದಿಕ್ಕು ತಪ್ಪಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಎಚ್.ಡಿ.ಕೋಟೆ, ಚಾಮರಾಜ, ನರಸಿಂಹರಾಜ ಕ್ಷೇತ್ರದಲ್ಲಿ ಟಿಕೆಟ್ ಬಗ್ಗೆ ಗೊಂದಲ ಉಂಟಾಗಲು ಅವರೇ ಕಾರಣ' ಎಂದು ದೂರಿದರು.
'ಮೈಸೂರು ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಎಚ್.ಡಿ. ದೇವೆಗೌಡರು ಶಾಸಕ ಜಿ.ಟಿ.ದೇವೆಗೌಡರಿಗೆ ವಹಿಸಿದ್ದರು. ಆದರೆ, ಅವರ ಮಾತು ಏನೇನು ನಡೆಯುತ್ತಿಲ್ಲ. ಸಾ.ರಾ.ಮಹೇಶ್ ಮಾತನ್ನು ವರಿಷ್ಠರು ನಂಬಿ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ' ಎಂದರು.
'ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾತನಾಡುವ ಶಕ್ತಿ ನಮ್ಮ ಕುಟುಂಬಕ್ಕಿಲ್ಲ. ಶೀಘ್ರದಲ್ಲೇ ಈ ಬೆಳವಣಿಗೆಗಳ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುತ್ತೇನೆ' ಎಂದು ಸಂದೇಶ್ ನಾಗರಾಜ್ ಹೇಳಿದರು.
ಸಂದೇಶಸ್ವಾಮಿ ಹೇಳುವುದೇನು? : 'ನನಗೆ ಟಿಕೆಟ್ ಕೈತಪ್ಪಿದ್ದು ಆಘಾತ ತಂದಿದೆ.
ಟಿಕೆಟ್ ಕೊಡುವ ಬಗ್ಗೆ ವರಿಷ್ಠರು ನಿರ್ಧರಿಸಿದ್ದರು. ಆದರೆ, ಏಕಾಏಕಿ ಬೇರೊಬ್ಬರಿಗೆ ಟಿಕೆಟ್ ನೀಡಿರುವ ಬೆಳವಣಿಗೆಯಿಂದ ಆಘಾತವಾಗಿದೆ. ಟಿಕೆಟ್ ಕೊಡುವ ಭರವಸೆ ಹಿನ್ನಲೆಯಲ್ಲಿ ಆರು ತಿಂಗಳಿಂದ ಪಕ್ಷದ ಸಂಘಟನೆ ಮಾಡುತ್ತಿದ್ದೆ. ಈಗಲೂ ನನಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸವಿದೆ. ಎನ್.ಆರ್. ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಂತೂ ನಿಶ್ಚಿತ' ಎಂದು ಸಂದೇಶಸ್ವಾಮಿ ಹೇಳಿದ್ದಾರೆ.












Click it and Unblock the Notifications