ಮುಡುಕುತೊರೆ ಜಾತ್ರೆಯಲ್ಲಿ ಮಿಂದೇಳುತ್ತಿರುವ ಜನ!
ಮೈಸೂರು, ಫೆಬ್ರವರಿ 15; ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿಗೆ ಸೇರಿದ ತಲಕಾಡು ಬಳಿಯಿರುವ ಮುಡುಕುತೊರೆಯಲ್ಲೀಗ ಜಾತ್ರಾ ಸಂಭ್ರಮ ಮನೆ ಮಾಡಿದೆ. ಸುಮಾರು ಹದಿನೇಳು ದಿನಗಳ ಕಾಲ ನಡೆಯಲಿರುವ ಜಾತ್ರೆಗೆ ಫೆಬ್ರವರಿ 13ರಿಂದಲೇ ಚಾಲನೆ ದೊರೆತಿದ್ದು, ಪ್ರತಿ ದಿನವೂ ಒಂದೊಂದು ಕಾರ್ಯಕ್ರಮಗಳು ಜಾತ್ರೆಗೆ ಕಳೆ ಕಟ್ಟುತ್ತಿದೆ.
ಕೋವಿಡ್ ಮಹಾಮಾರಿಯಿಂದ ಹಬ್ಬ, ಜಾತ್ರೆಗಳಿಂದ ದೂರವಾಗಿದ್ದ ಜನ ಇದೀಗ ಮಹಾಮಾರಿಯನ್ನು ಬದಿಗೆ ತಳ್ಳಿ ಜಾತ್ರಾ ಸಡಗರದಲ್ಲಿ ಮಿಂದೇಳಲು ತಯಾರಾಗಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಕೃಷಿ ಕಾರ್ಯಗಳು ಮೈಕೈ ಸುಡುತ್ತಿರುವ ಈ ದಿನದಲ್ಲಿಯೂ ಭೂಮಿ ತಾಯಿಯೇ ದೇವರೆಂದು ಆಕೆಯನ್ನೇ ನಂಬಿ ಬದುಕು ಸವೆಸುತ್ತಿರುವ ರೈತರು ಜಾತ್ರೆಯ ಸಡಗರದಲ್ಲಿ ತೇಲಾಡಿ ತಮ್ಮ ನೋವನ್ನು ಮರೆಯುತ್ತಾರೆ.
ಜಾತ್ರೆಯಲ್ಲಿ ಜನರು ಆಧಿದೇವರಾದ ಮಲ್ಲಿಕಾರ್ಜುನನ್ನೇ ನಂಬಿ ಆತನ ಅನುಗ್ರಹಕ್ಕಾಗಿ ತಲೆ ಬಾಗುತ್ತಾರೆ. ವರ್ಷ ಪೂರ್ತಿ ತಮ್ಮೊಂದಿಗೆ ಹೆಗಲು ಕೊಟ್ಟು ದುಡಿಯುವ ಜಾನುವಾರುಗಳಿಗೂ ಈ ಜಾತ್ರೆಯಲ್ಲಿ ಪ್ರಮುಖ ಸ್ಥಾನ ನೀಡಲಾಗುತ್ತದೆ. ಹೀಗಾಗಿ ದನಗಳ ಜಾತ್ರೆ ವಿಶೇಷವಾಗಿ ಗಮನಸೆಳೆಯುತ್ತದೆ. ಮೈಸೂರು ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಜಾತ್ರೆ ನಡೆಯುತ್ತದೆಯಾದರೂ ಮುಡುಕುತೊರೆಯಲ್ಲಿ ನಡೆಯುವ ಜಾತ್ರೆ ಮಾತ್ರ ವಿಭಿನ್ನ ಮತ್ತು ವಿಶಿಷ್ಟವಾಗಿದೆ.
ಈಗಾಗಲೇ ಜಾತ್ರೆ ಆರಂಭವಾಗಿದ್ದು ಫೆ.13ರಂದು ಅಂಕರಾರ್ಪಣೆ, 14 ಧ್ವಜಾರೋಹಣ, 15 ಚಂದ್ರ ಮಂಡಲಾರೋಹಣ ನಡೆದಿದ್ದರೆ, 16 ಅನಂತಪೀಠಾರೋಪಣ, 17 ಪುಷ್ಪ ಮಂಟಪಾರೋಹಣ, 18 ವೃಷಭಾರೋಹಣ, 19 ಗಿರಿಜಾಕಲ್ಯಾಣ, ಗಜಾರೋಹಣ, 20 ಶ್ರೀಮದ್ದಿನ್ಮ ಬ್ರಹ್ಮರಥೋತ್ಸವ, 21 ಚಿತ್ರರಥೋತ್ಸವ, ಶಯನೋತ್ಸವ, 22 ಅವಭೃತ ತೀರ್ಥಸ್ನಾನ, ರಾತ್ರಿ ಪುಷ್ಪಪಲ್ಲಕಿ ಉತ್ಸವ, 23 ತೆಪ್ಪೋತ್ಸವ, 24 ಮರಿ ತೆಪ್ಪೋತ್ಸವ, 25 ಕೈಲಾಸ ವಾಹನೋತ್ಸವ, 26 ಮಂಟಪೋತ್ಸವ, 27 ಗಿರಿಪ್ರದಕ್ಷಿಣೆ, 28 ಪರ್ವತಪರಿಷೆ, ಬಸವಮಾಲೆ ಮಾ.1ರಂದು ಮಹಾಭಿಷೇಕ ಮತ್ತು ಶೆಟ್ಟರ ಸೇವೆ ನಡೆಯಲಿದೆ.

ಸುಂದರ ನಿಸರ್ಗ ರಮಣೀಯ ಸ್ಥಳ
ಮುಡುಕುತೊರೆಯ ಜಾತ್ರೆ ಮತ್ತು ಸ್ಥಳ ಮಹಿಮೆಯನ್ನು ನೋಡುವುದಾದರೆ ಇದೊಂದು ಸುಂದರ ನಿಸರ್ಗ ರಮಣೀಯ ಸ್ಥಳವಾಗಿದ್ದು, ಆಸ್ತಿಕರು ಮತ್ತು ನಾಸ್ತಿಕರೆಲ್ಲರೂ ಇಲ್ಲಿಗೆ ತೆರಳಲು ಹಾತೊರೆಯುತ್ತಾರೆ. ಸೋಮಗಿರಿ ಬೆಟ್ಟದ ಮೇಲೆ ಭ್ರಮರಾಂಭ ಸಹಿತ ಮಲ್ಲಿಕಾರ್ಜುನ ಸ್ವಾಮಿ ನೆಲೆನಿಂತಿರುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಜಾತ್ರೆಗೆ ಸುತ್ತಮುತ್ತಲಿನ ಜನ ನೆರೆಯುತ್ತಾರೆ. ಅಷ್ಟೇ ಅಲ್ಲದೆ ದೂರದಿಂದ ಜಾನುವಾರುಗಳೊಂದಿಗೆ ಆಗಮಿಸುವ ರೈತರು ಜಾತ್ರೆ ಮುಗಿಯುವ ತನಕ ಇಲ್ಲಿಯೇ ದನಕರುಗಳೊಂದಿಗೆ ವಾಸ್ತವ್ಯ ಹೂಡಿ ವ್ಯಾಪಾರ ಮಾಡುತ್ತಾರೆ. ಜಾತ್ರೆ ಎಂದರೆ ಬರೀ ಪೂಜೆ, ಸಂಭ್ರಮ ಮಾತ್ರವಲ್ಲ. ಇಲ್ಲಿ ಹತ್ತಾರು ವ್ಯವಹಾರಗಳು ನಡೆಯುತ್ತವೆ. ಸಂಬಂಧಗಳು ಗಟ್ಟಿಯಾಗುತ್ತವೆ.

ಸೋಮಗಿರಿಯಲ್ಲಿ ನೆಲೆನಿಂತ ಮಲ್ಲಿಕಾರ್ಜುನ
ಈ ಕ್ಷೇತ್ರಕ್ಕೆ ಮುಡುಕುತೊರೆ ಎಂಬ ಹೆಸರು ಕಾವೇರಿ ನದಿ ಪಶ್ಚಿಮದಿಂದ ಉತ್ತರ ದಿಕ್ಕಿನತ್ತ ಹರಿದು, ಪೂರ್ವಕ್ಕೆ ಮುರಿದು ದಕ್ಷಿಣಕ್ಕೆ ಪ್ರವೇಶಿಸಿದ್ದರಿಂದ ಬಂದಿರಬಹುದೆಂದು ಹೇಳಲಾಗುತ್ತಿದೆ. ಮಲ್ಲಿಕಾರ್ಜುನ ದೇಗುಲ ನೆಲೆ ನಿಂತ ಸೋಮಗಿರಿ ಬೆಟ್ಟವು ಸುಮಾರು 300 ಅಡಿಯಷ್ಟು ಎತ್ತರದಲ್ಲಿದ್ದು, ಈ ಬೆಟ್ವನ್ನೇರಲು 101 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇಗುಲದಲ್ಲಿ ಭ್ರಮರಾಂಭ ಸಹಿತ ಮಲ್ಲಿಕಾರ್ಜುನ ಸ್ವಾಮಿ ಮೂರ್ತಿಗಳಲ್ಲದೆ, ಉತ್ತರಭಾಗದಲ್ಲಿ ಕುಮಾರಸ್ವಾಮಿಯ ಉತ್ಸವಮೂರ್ತಿ, ನಟರಾಜ, ವಿಘ್ನೇಶ್ವರ, ಶಿವಕಾಮೇಶ್ವರಿ ಅಮ್ಮನವರ ವಿಗ್ರಹಗಳಿವೆ. ಅಲ್ಲದೆ ಶುಕನಾಸಿಯಲ್ಲಿ ವೃಷಭ ಮೂರ್ತಿಯಿದೆ.

ಪಾಂಡವರು ಸೋಮಗಿರಿಗೆ ಬಂದಿದ್ದರಂತೆ
ದ್ವಾಪರಯುಗದಲ್ಲಿ ಕೌರವರ ಕುಟಿಲತೆಯಿಂದ ರಾಜ್ಯವನ್ನು ಕಳೆದುಕೊಂಡು ವನವಾಸ ಹೊರಟ ಪಾಂಡವರು ಸೋಮಗಿರಿ (ಮುಡುಕುತೊರೆ) ಬಂದಿದ್ದರಂತೆ ಈ ಸಂದರ್ಭ ಸುತ್ತಲಿನ ಪ್ರಕೃತಿಯ ಸೊಬಗನ್ನು ಕಂಡು ಆಕರ್ಷಿತಗೊಂಡ ಅರ್ಜುನ ಲಿಂಗರೂಪಿಯಾಗಿದ್ದ ಈಶ್ವರನನ್ನು ಕಂಡು ಹರ್ಷಗೊಂಡನಲ್ಲದೆ, ಲಿಂಗಕ್ಕೆ ಮಲ್ಲಿಕಾಪುಷ್ಪಗಳಿಂದ ಪೂಜಿಸಿ ತನ್ನ ಇಷ್ಟಾರ್ಥವನ್ನು ಪಡೆದನಂತೆ ಹೀಗೆ ಮಲ್ಲಿಕಾಪುಷ್ಪದಿಂದ ಪೂಜಿಸಲ್ಪಟ್ಟಿದ್ದರಿಂದ ಈ ದೇಗುಲಕ್ಕೆ ಮಲಿಕಾರ್ಜುನಸ್ವಾಮಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ.

ದುಷ್ಟ ರಾಕ್ಷಸನ ಕೊಂದ ಪಾರ್ವತಿ
ಅರುಣ ಎಂಬ ದುಷ್ಟರಾಕ್ಷಸನನ್ನು ಶಿವನ ಪತ್ನಿ ಪಾರ್ವತಿ ದೇವಿ ಭ್ರಮರ(ದುಂಬಿ)ರೂಪ ತಳೆದು ಬಂದು ಸಂಹರಿಸುವುದರ ಮೂಲಕ ಭ್ರಮರಾಂಭೆಯಾಗಿ ನೆಲೆಸಿದಳೆಂದು ಹೇಳಲಾಗುತ್ತಿದೆ. ಬೆಟ್ಟದ ತಳಭಾಗದಲ್ಲಿ ಬೆಟ್ಟಹಳ್ಳಿ ಮಾರಮ್ಮ ಎಂಬ ಗ್ರಾಮ ದೇವತೆಯ ದೇವಸ್ಥಾನವೂ ಇದೆ. ಸುತ್ತಮುತ್ತ ಕಣ್ಣೀರ್ಕಟ್ಟೆ, ಹಾಲುಗಟ್ಟೆ, ಕಪಿಲಗೋಮಾಳ ಮುಂತಾದ ಸ್ಥಳಗಳಿವೆ.

ಜಾತ್ರೆಗೆ ರಥೋತ್ಸವದ ಮೆರಗು
ಜಾತ್ರೆಯ ಸಂದರ್ಭ ನಡೆಯುವ ರಥೋತ್ಸವವು ಪ್ರಮುಖವಾಗಿದ್ದು ಅಂದು (ಫೆ.20) ವಿವಿಧ ಧಾರ್ಮಿಕ ಕಾರ್ಯಗಳು ನಡೆಯುತ್ತವೆಯಲ್ಲದೆ, ಸಾಂಪ್ರದಾಯಿಕ ವಿಧಿವಿಧಾನದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭ ಗೊರವರ ಕುಣಿತ, ನಂದಿಕಂಬ, ಪೂಜಾಕುಣಿತ, ಕಂಸಾಳೆ, ಸೋಬಾನೆ, ಜಾಗಟೆ ಸೇವೆ, ತುತ್ತೂರಿ, ಕೊಂಬುಸೇವೆ ಮೊದಲಾದ ಜನಪದೀಯ ತಂಡಗಳು ತಮ್ಮ ಕಲೆಯ ಪ್ರದರ್ಶನದ ಮೂಲಕ ರಥೋತ್ಸವಕ್ಕೆ ಮೆರಗು ನೀಡಲಿವೆ. ತೆಪ್ಪೋತ್ಸವದ ತೆಪ್ಪದ ದಿನ ಗೊರವರು ಗಿರಿಯ ಮೇಲೆ ಕುಣಿಯುವುದು ವಿಶೇಷವಾಗಿದೆ.












Click it and Unblock the Notifications