ತೀವ್ರ ಕುತೂಹಲ ಕೆರಳಿಸಿದ ಜಾರಕಿಹೊಳಿ-ವಿಶ್ವನಾಥ್ ಭೇಟಿ
ಮೈಸೂರು, ಮೇ 13 : ಕಾಂಗ್ರೆಸ್ ನಲ್ಲಿ ಮೊದಲೇ ಭಿನ್ನಮತ ಭುಗಿಲೇಳುತ್ತಿರುವ ಸಂದರ್ಭದಲ್ಲಿ ಇಬ್ಬರು ಕೈ ವಿರೋಧಿ ನಾಯಕರೇ ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಮೈಸೂರಿನಲ್ಲಿ ಮಾಜಿ ಸಂಸದ ಹೆಚ್. ವಿಶ್ವನಾಥ್ ರನ್ನು ಶಾಸಕ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಗೆಸ್ಟ್ ಹೌಸ್ ನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ನಡವಳಿಕೆ ವಿರುದ್ಧ ಬೇಸತ್ತು ಸಚಿವ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಹೀಗಾಗಿ ಇವರಿಬ್ಬರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.[ಸದ್ಯದಲ್ಲೇ ವಿಶ್ವನಾಥ್ ಜೆಡಿಎಸ್ ಗೆ: ಎಚ್ ಡಿಕೆ ಸ್ಪಷ್ಟನೆ]
ಇತ್ತ ಮುಖ್ಯಮಂತ್ರಿಗಳ ವಿರುದ್ಧ ಮಾಜಿ ಸಂಸದ ಹೆಚ್.ವಿಶ್ವನಾಥ್ ಗುಡುಗುತ್ತಿದ್ದಾರೆ. ವಿಶ್ವನಾಥ್ ಮತ್ತು ಸತೀಶ್ ಜಾರಕಿಹೊಳಿ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳ ನಡೆಯ ಕುರಿತು ಅಸಮಾಧಾನ ಹೊಂದಿರುವ ಇಬ್ಬರು ನಾಯಕರು ಮುಂದಿನ ರಾಜಕೀಯ ತೀರ್ಮಾನ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ ಎಂಬ ವಿಷಯ ಮೂಲಗಳಿಂದ ಲಭ್ಯವಾಗಿದೆ.[ವೇಣುಗೋಪಾಲ್ ಅವರಿಗೆ ವಿಶ್ವನಾಥ್ ಬರೆದ ಪತ್ರದಲ್ಲೇನಿದೆ?]
ಜೆಡಿಎಸ್ ಸೇರುವ ಕುರಿತಾಗಿ ವಿಶ್ವಾನಾಥ್ ಅಭಿಪ್ರಾಯವನ್ನು ಜಾರಕಿಹೊಳಿ ಕೇಳಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ತೊರೆದ ಬಳಿಕ ಯಾವ ಪಕ್ಷಕ್ಕೆ ಸೇರಿದರೆ ರಾಜಕಾರಣದಲ್ಲಿ ಎಲ್ಲಿ ಅಧಿಪತ್ಯ ಸಾಧಿಸಬಹುದು ಎಂಬ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ನಾಯಕರೂ ತಮ್ಮ ಸ್ಥಾನಮಾನ ಭದ್ರ ಪಡೆಸಿಕೊಂಡು ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ ಎಂಬ ಗುಮಾನಿ ಹೆಚ್ಚಾಗುತ್ತಿದೆ.
ಈ ಬಗ್ಗೆ ಸತೀಶ್ ಜಾರಕಿಹೊಳಿ ಯವರನ್ನು ಪ್ರಶ್ನಿಸಿದರೆ ಇದೊಂದು ಸೌಹಾರ್ದಯುತ ಭೇಟಿಯಷ್ಟೇ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಬೇಕೆಂದು ತುಂಬಾ ದಿನದಿಂದ ಅಂದುಕೊಂಡಿದ್ದೆ. ಇಂದು ಫಲಿಸಿದೆ. ವಿಶ್ವನಾಥ್ ಅವರು ಕಾಂಗ್ರೆಸ್ ಬಿಡುವುದಿಲ್ಲ. ರಾಜಕೀಯ ಮಾತುಕತೆ ನಮ್ಮ ನಡುವೆ ನಡೆದಿಲ್ಲ. ಯೋಗಕ್ಷೇಮದ ವಿಚಾರ ಮಾತಾಡಿದ್ದೇವಷ್ಟೇ ಎಂದಿದ್ದಾರೆ. ಒಟ್ಟಾರೆ ಈ ಬೆಳವಣಿಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.