ಎಲ್ಇಡಿ ಪರದೆ ಮೂಲಕ ಜಂಬೂ ಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ವ್ಯವಸ್ಥೆ
ಮೈಸೂರು, ಅಕ್ಟೋಬರ್.04: ನಾಡಹಬ್ಬ ದಸರಾ ಮಹೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಿರುವ ಆಕರ್ಷಕ ಪಂಜಿನ ಕವಾಯತು, ಅಶ್ವಾರೋಹಿ ದಳದ ಚಮತ್ಕಾರ, ಗೌರವ ವಂದನೆ, ಬಾಣ ಬಿರುಸುಗಳ ಪ್ರದರ್ಶನ ಇವುಗಳನ್ನು ಹತ್ತಿರದಿಂದ ನೋಡಲಾಗದವರು ಈ ಬಾರಿ ನಿರಾಶರಾಗಬೇಕಿಲ್ಲ.
ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು ಮಾತ್ರ ಕೆಲವರಿಗೆ ಇಂದಿಗೂ ಮರೀಚಿಕೆಯಾಗೇ ಇದೆ. ಇದು ಕೆಲವು ಪ್ರಭಾವಿಗಳಿಗೆ, ರಾಜಕಾರಣಿಗಳಿಗೆ, ಪಕ್ಷದ ಕಾರ್ಯಕರ್ತರುಗಳಿಗೆ, ಅಧಿಕಾರಿಗಳು ಮತ್ತು ಉಳ್ಳವರಿಗೆ ಮಾತ್ರ ಹತ್ತಿರದಿಂದ ನೋಡಲು ಸಾಧ್ಯವಾಗಿದೆ.
ಉಳಿದಂತೆ ಸಾಮಾನ್ಯ ಜನರು ಇದರಿಂದ ದೂರವೇ ಉಳಿದಿದ್ದಾರೆ. ಹಾಗಾಗಿ ಈ ಬಾರಿ ಪ್ರಮುಖ ಸ್ಥಳಗಳಲ್ಲಿ ಜಂಬೂ ಸವಾರಿ ಹಾಗೂ ಪಂಜಿನ ಕವಾಯತನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.

ಕಳೆದ ವರ್ಷದಂತೆ ಬನ್ನಿ ಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತನ್ನು ವೀಕ್ಷಿಸಲು ನಜರ್ ಬಾದ್ ನ ಚಾಮುಂಡಿವಿಹಾರ, ಕ್ರೀಡಾಂಗಣ, ಮಾನಸಗಂಗೋತ್ರಿ ಬಯಲುರಂಗಮಂದಿರದಲ್ಲಿ ಎರಡು ಬೃಹತ್ ಗಾತ್ರದ ಸ್ಕ್ರೀನ್ ಗಳನ್ನು ಅಳವಡಿಸಲಾಗುತ್ತಿದೆ.
ಆನ್ ಲೈನ್ ರಿಸೀವರ್ ಮೂಲಕ ಪ್ರತಿಯೊಂದು ಕಾರ್ಯಕ್ರಮವನ್ನು ಪ್ರದರ್ಶಿಸಲಾಗುತ್ತಿದ್ದು, ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಕನಿಷ್ಠ 25 ಸಾವಿರ ಮಂದಿಯಷ್ಟು ಕೂತು ನೋಡಬಹುದು. ವಾಹನ ನಿಲುಗಡೆಗೂ ಅವಕಾಶವಿದೆ.
ಇಲ್ಲಿ ನಜರ್ ಬಾದ್, ಗಾಯತ್ರಿಪುರಂ, ಸಿದ್ದಾರ್ಥ ಬಡಾವಣೆ, ಆಲನಹಳ್ಳಿ ಸೇರಿದಂತೆ ವಿವಿಧ ಬಡಾವಣೆಗಳ ಜನರು ಆಗಮಿಸಬಹುದು.
ಅದೇ ರೀತಿ ಮಾನಸ ಗಂಗೋತ್ರಿ ಬಯಲುರಂಗಮಂದಿರದಲ್ಲಿ ಕ್ಯಾಂಪಸ್ ನ ವಿದ್ಯಾರ್ಥಿಗಳಲ್ಲದೆ ಸರಸ್ವತಿಪುರಂ, ಕುಕ್ಕರಹಳ್ಳಿ, ಶಾರದಾ ದೇವಿನಗರ, ಕುವೆಂಪುನಗರ, ಜಯನಗರ, ಕೆ.ಜಿ.ಕೊಪ್ಪಲು ಮೊದಲಾದ ಪ್ರದೇಶಗಳ ಜನರು ಬಂದು ವೀಕ್ಷಿಸಲು ಅನುಕೂಲವಾಗಲಿದೆ.
ಈ ಜಾಗವು ಪ್ರಶಾಂತವಾಗಿದ್ದು, ವಾಹನ ನಿಲುಗಡೆಗೆ ಸೂಕ್ತವಿದೆ. 10 ಸಾವಿರ ಮಂದಿ ಕೂರುವ ಜಾಗವಾಗಿದೆ. ಇದನ್ನು ಮತ್ತಷ್ಟು ಕಡೆ ವಿಸ್ತರಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲು ಚಿಂತನೆ ಸಹ ನಡೆದಿದೆ.












Click it and Unblock the Notifications