ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು; ಸಿ. ಎಂ. ಇಬ್ರಾಹಿಂ
ಮೈಸೂರು, ಮಾರ್ಚ್ 03: "ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು. ನಾಟಿ ತಳಿಗಳು ಈಗ ಸಿಗುತ್ತಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಸಿ. ಎಂ. ಇಬ್ರಾಹಿಂ ಹೇಳಿದರು.
ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಇತ್ತೀಚಿನ ರಾಜಕೀಯದಲ್ಲಿ ಮರ್ಯಾದಸ್ಥರು ಸಿಗೋದು ವಿರಳವಾಗಿದೆ. ವಿರೇಂದ್ರ ಪಾಟೀಲ್, ದೇವೇಗೌಡ, ಜೆ. ಎಚ್. ಪಟೇಲ್ ಅವರಂತವರು ಉಳಿಯಬೇಕು" ಎಂದರು.
ಶಾಸಕ ತನ್ವೀರ್ ಸೇಠ್, ಹ್ಯಾರೀಸ್ ಭೇಟಿ ಕುರಿತು ಮಾತನಾಡಿದ ಇಬ್ರಾಹಿಂ, "ಮೇಯರ್ ಮೈತ್ರಿ ವಿಚಾರದ ಸಂಬಂಧ ಅವರನ್ನು ಕರೆದಿದ್ದೆ. ನಾನೇ ಅವರನ್ನು ಮನೆಗೆ ಕರೆದು ಮಾತುಕತೆ ನಡೆಸಿದ್ದೆ. ಇದೊಂದು ಸಣ್ಣ ವಿಚಾರ ಯಾಕೆ ಇಷ್ಟು ದೊಡ್ಡದು ಮಾಡಿಕೊಂಡಿದ್ದೀರಾ? ಎಂದು ಹೇಳಿದೆ" ಎಂದು ತಿಳಿಸಿದರು.

"ಮಾತುಕತೆ ನಡೆಸಿ ನಾನು ಕೂಡ ಇದರ ಮಾಹಿತಿ ಪಡೆದುಕೊಂಡೆ. ನಾನು ಕಾಂಗ್ರೆಸ್ ಮುಖಂಡರನ್ನು ಕರೆದು ವಿಶ್ವಾಸದಿಂದ ಮಾತುಕತೆ ನಡೆಸಿದೆ. ಅದೇ ರೀತಿ ಜಿ. ಟಿ. ದೇವೇಗೌಡ ಪಕ್ಷ ಬಿಡುತ್ತೀನಿ ಅಂದರೆ ಬೇಡ ಕಣ್ಣಯ್ಯ ಇಲ್ಲೇ ಇರು ಅಂತೀನಿ. ಪಕ್ಷ ಹೊರತುಪಡಿಸಿ ನಾನು ಕೆಲವರೊಂದಿಗೆ ವಿಶ್ವಾಸ ಬೆಳೆಸಿಕೊಂಡಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಸಿಡಿ ಪ್ರಕರಣ; ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ ಅವರು, "ಪರಸತಿ, ಪರಧನ, ಪರದೇಶಿ ಮಧ್ಯೆ ರಾಜಕಾರಣ ಓಡಾಟ ಮಾಡುತ್ತಿದೆ. ರಾಸಲೀಲೆ, ರಸಲೀಲೆ, ಕರ್ಮಕಾಂಡಗಳ ನಡುವೆ ರಾಜಕಾರಣ ಇದೆ" ಎಂದರು.
"ನತದೃಷ್ಟ ಮುಖ್ಯಮಂತ್ರಿ ಸಿಕ್ಕಿರುವುದು ರಾಜ್ಯಕ್ಕೆ ದುರ್ದೈವ. ಸಿಎಂಗೆ ತಕ್ಕನಾದ ಸಹಪಾಠಿ ಮಂತ್ರಿ, ಅದಕ್ಕೊಂದು ಪಾರ್ಟಿ ಬೇರೆ. ಇವರ ಮಧ್ಯೆ ಸಿಲುಕಿ ಕೇಶವ ಕೃಪ, ಬಸವ ಕೃಪ ಒದ್ದಾಡುತ್ತಿವೆ" ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.
"ಇಂದಿನ ರಾಜಕಾರಣ ಹಾಳಾಗಿದ್ದು, ಇದು ಸರಿಯಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಇದಕ್ಕಾಗಿ ಒಂದು ದೊಡ್ಡ ಕ್ರಾಂತಿ ಆಗಬೇಕಿದೆ" ಎಂದು ಹೇಳಿದರು.












Click it and Unblock the Notifications