ಮುಡಾದಲ್ಲಿ ಅಕ್ರಮ ಆರೋಪ: 50:50 ಅನುಪಾತದಡಿ ಹಂಚಿಕೆಯಾಗಿರುವ ನಿವೇಶನ ರದ್ದು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬೆನ್ನಲ್ಲೇ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಮೈಸೂರಿಗೆ ಆಗಮಿಸಿ ಶೇ. 50:50 ಅನುಪಾತದಡಿ ಹಂಚಿಕೆ ಆಗಿರುವ ನಿವೇಶನಗಳ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮೈಸೂರಿನ ಮುಡಾ ಕಚೇರಿಗೆ ಸೋಮವಾರ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣ ಸಂಬಂಧ ಮುಡಾ ಆಯುಕ್ತರು, ಕಾರ್ಯದರ್ಶಿ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆಗೊಳಿಸಲಾಗಿದ್ದು, ತನಿಖೆಗೆ ಇಬ್ಬರು ಐಎಎಸ್ ಅಧಿಕಾರಿಗಳಾ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಐಎಎಸ್ ಅಧಿಕಾರಿಗಳಾದ ವೆಂಕಟಚಲಪತಿ ಹಾಗೂ ಪ್ರಭುಲಿಂಗ ಕವಳಿಕಟ್ಟಿ ಅವರು ತನಿಖೆ ನಡೆಸಲಿದ್ದಾರೆ ಎಂದರು.

ತನಿಖಾ ವರದಿ ಬರುವವರೆಗೂ ಮುಡಾದಲ್ಲಿ ಸಭೆ ನಡೆಸದಂತೆ ಅಧ್ಯಕ್ಷರಿಗೆ ಸೂಚನೆ ನೀಡುತ್ತಿದ್ದೇನೆ. ಹಗರಣದ ಕುರಿತಂತೆ 4 ವಾರಗಳಲ್ಲಿ ವರದಿ ನೀಡುವಂತೆ ಆದೇಶ ನೀಡಲಾಗಿದೆ, ನಿವೇಶನ ಹಂಚಿಕೆಯು ಕಾನೂನು ಚೌಕಟ್ಟಿನಲ್ಲಿ ಹಂಚಿಕೆ ಆಗಿದ್ದರೆ, ತನಿಖೆ ನಂತರ ಅವುಗಳನ್ನು ಹಿಂದಕ್ಕೆ ಕೊಡಲು ನಿರ್ಧರಿಸಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ರಕ್ಷಣೆ ನೀಡಿ, ಮುಡಾದಲ್ಲಿ ಏನನ್ನೋ ಪಡೆಯುವ ಪರಿಸ್ಥಿತಿ ದೇವರು ನನಗೆ ನೀಡಿಲ್ಲ ಎಂದು ಹೇಳಿದರು.
ಮುಡಾ ದಾಖಲಾತಿಗಳನ್ನು ಪೆನ್ ಡ್ರೈವ್ ಮೂಲಕ ವಿಶ್ವನಾಥ್ ಕೇಳಿದ್ದಾರೆ. ಆದರೆ ನಮ್ಮಲ್ಲಿ ಪೆನ್ ಡ್ರೈವ್ ಸಂಸ್ಕೃತಿ ಇಲ್ಲ, ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಈಗ ಮಾತನಾಡುತ್ತಿರುವ ಅವರು ನನ್ನ ಬಳಿ ಸೈಟ್ ಕೊಡಿಸುವಂತೆ ಬಂದಿದ್ದರು. ಅದನ್ನು ನೆನಪು ಮಾಡಿಕೊಳ್ಳಲಿ ಚಾಟಿ ಬೀಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ 87ರ ಅನ್ವಯ ರದ್ದುಪಡಿಸಲು 2023 ರ ಅಕ್ಟೋಬರ್ 27 ರಂದು ಆದೇಶ ಮಾಡಲಾಗಿದೆ. ಆದರೆ 2020ರಲ್ಲಿ 50-50ರ ಅನುಪಾತ ಜಾರಿಗೆ ಬಂದಿದ್ದು, ಈ ಬಗ್ಗೆ ಸಚಿವ ಸಂಪುಟದ ಸಮ್ಮತಿ ಬೇಕೆಂಬ ನಿಯಮವಿದ್ದರೂ, ಈವರೆಗೆ ಮುಡಾ ನೀಡಿರುವ ಜಾಗದ ಕುರಿತು ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ಇದರಿಂದಾಗಿ ಇದೇ ನಿಯಮದಲ್ಲಿ ಈವರೆಗೂ ಸಾಕಷ್ಟು ಸೈಟ್ಗಳನ್ನು ನೀಡಲಾಗಿದೆ. ಆದರೆ ಇದರಲ್ಲಿ ಎಷ್ಟು ಅಕ್ರಮವಾಗಿದೆ ಎಂಬುದು ಗೊತ್ತಿಲ್ಲ ಎಂದರು.












Click it and Unblock the Notifications