ಮೈಸೂರು; ಯಡಿಯೂರಪ್ಪ ಅವರಿಂದ ನಗರ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟನೆ
ಮೈಸೂರು, ನವೆಂಬರ್ 21: ನಗರ ಪೊಲೀಸ್ ಆಯುಕ್ತರ ನೂತನ ಕಚೇರಿ ಕಟ್ಟಡವನ್ನು ನ.24ರಂದು ಸಂಜೆ 4.50ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಉದ್ಘಾಟನೆ ಮಾಡಲಿದ್ದಾರೆ.
ಸುಮಾರು 19 ಕೋಟಿ ರೂ.ವೆಚ್ಚದಲ್ಲಿ ನಜರ್ ಬಾದ್ ನಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 2013ರ ಡಿಸೆಂಬರ್ ನಲ್ಲಿ ಮಂಜೂರಾತಿ ನೀಡಿ 16.76 ಕೋಟಿ ರೂ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2018ರ ಜನವರಿಯಲ್ಲಿ ಹೆಚ್ಚುವರಿಯಾಗಿ 2.60 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿತ್ತು.
ನೂತನ ಕಟ್ಟಡದ ನೆಲಮಹಡಿಯಲ್ಲಿ ಡಿಸಿಪಿ ಕೇಂದ್ರ ಸ್ಥಾನ ಮತ್ತು ಅಪರಾಧ ವಿಭಾಗದ ಕಚೇರಿ, ನಗರ ಅಪರಾಧ ದಾಖಲಾತಿಗಳ ವಿಭಾಗ, ವಿದೇಶಿಯರ ಶಾಖೆ, ಪಾಸ್ ಪೋರ್ಟ್, ಪೊಲೀಸ್ ವೆರಿಫಿಕೇಶನ್ ಒಳಗೊಂಡ ನಗರ ವಿಶೇಷ ವಿಭಾಗ ಇರಲಿದ್ದು ಕಂಪ್ಯೂಟರ್ ಫೋಟೊಗ್ರಫಿ ಶಾಖೆ, ರೆಕಾರ್ಡ್ ರೂಂ, ಕೆಫೆಟೆರಿಯಾಗಳು ಇಲ್ಲೇ ಇರಲಿವೆ.

ನೆಲಮಹಡಿಯಲ್ಲಿಯೇ ಪೊಲೀಸ್ ಆಯುಕ್ತರ ಕೊಠಡಿ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ, ಕಾನೂನು ಮತ್ತು ಆದೇಶ ವಿಭಾಗ, ರಿಸೆಪ್ಶನ್ ಡೆಸ್ಕ್, ಸುಸಜ್ಜಿತ ಸಭಾಂಗಣ ಇರಲಿದೆ. ಮೊದಲ ಮಹಡಿಯಲ್ಲಿ ವೈರ್ ಲೆಸ್ ವಿಭಾಗ, ಡಯಲ್ 100, ಸುರಕ್ಷಾ ಆಪ್, ಟ್ರಾಫಿಕ್ ಆಟೋಮೇಷನ್ ಕೇಂದ್ರ, ಸಿಸಿಟಿವಿ ವಿಭಾಗ, ಡಿಸಿಪಿ ಕೊಠಡಿ, ಗ್ರಂಥಾಲಯ ಹಾಗೂ ಬೆರಳು ಮುದ್ರೆ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದೆ.
ನಜರ್ ಬಾದ್ ನಿವಾಸಿಯೊನ್ನರು 2019ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಮೈಸೂರಿನ ನೂತನ ಪೊಲೀಸ್ ಕಮಿಷನರ್ ಕಟ್ಟಡ ನಿರ್ಮಾಣ ಸಂಬಂಧ ದೂರು ನೀಡಿದ್ದರು. ಮೈಸೂರಿನ ಕಸ್ತೂರಿ ಬಾ ಪಾರ್ಕ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. 2016 ಅಕ್ಟೋಬರ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ತಡೆ ನೀಡಿತ್ತು. 2018 ಮಾರ್ಚ್ ತಿಂಗಳಲ್ಲಿ ಇದೇ ಕಟ್ಟಡ ಉದ್ಘಾಟನೆ ಮಾಡಲು ಬಂದು ಕೊನೆ ಕ್ಷಣದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದಿದ್ದರು.
ಉದ್ಘಾಟನೆಗೆ ನೂರೆಂಟು ವಿಘ್ನಗಳನ್ನು ಕಾಣುತ್ತಲೇ ಬಂದ ನೂತನ ಕಚೇರಿ ಕಟ್ಟಡ ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ಉದ್ಘಾಟನೆಗೊಳ್ಳಲಿದೆ.
ಈ ಕುರಿತು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಸಿಟಿಟುಡೆ ಜೊತೆ ಮಾತನಾಡಿ, ಸಾರ್ವಜನಿಕರಿಗೆ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಕಚೇರಿ ಬಳಿ ಚಿಕ್ಕ ಉದ್ಯಾನವನ ನಿರ್ಮಿಸಲಾಗುವುದು. ಡಿಸಿಪಿ ಕೋರ್ಟ್ ಹಾಲ್ ನಿರ್ಮಿಸಲಾಗಿದ್ದು, ಅಲ್ಲೇ ವಿಚಾರಣೆಗೊಳಪಡಿಸಲಾಗುವುದು. ವಿದೇಶದಲ್ಲಿ ನಡೆಯುವ ರೀತಿ ಅಲ್ಲಿ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥ ಮಾಡಲಾಗುವುದು. ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಚೇರಿಗೆ ಬರುವವರಿಗೆ ಸಂಪೂರ್ಣ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.












Click it and Unblock the Notifications