ಮೈಸೂರಲ್ಲಿ ಅಕ್ರಮ ಮರಳು ಸಾಗಾಟ, ಎತ್ತಿನ ಗಾಡಿ ವಶ
ಮೈಸೂರು, ಡಿಸೆಂಬರ್, 17: ಕಾವೇರಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ 12 ಎತ್ತಿನ ಗಾಡಿಗಳನ್ನು ಕೊಳ್ಳೇಗಾಲದ ಮುಳ್ಳೂರು ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮುಳ್ಳೂರು ಗ್ರಾಮದ ನದಿ ತೀರದಲ್ಲಿ ಮರಳನ್ನು ಎತ್ತಿನ ಗಾಡಿಗಳ ಮೂಲಕ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಆಗ ಮುಳ್ಳೂರು ಹಾಗೂ ಉತ್ತಂಬಳ್ಳಿ ಮಾರ್ಗ ಮಧ್ಯೆ ಸರ್ಕಲ್ ಇನ್ಸ್ ಪೆಕ್ಟರ್ ಅಮರನಾರಾಯಣ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಬ್ಇನ್ಸ್ ಪೆಕ್ಟರ್ ಪಿ.ಸಿ.ರಾಜು ತಂಡ ದಾಳಿ ನಡೆಸಿ ಮರಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.[ಕಾವೇರಿ ನದಿಯೊಳಗೆ 15 ಕೊಪ್ಪರಿಕೆ ಪ್ರತ್ಯಕ್ಷ!]
ಪೊಲೀಸರನ್ನು ಕಂಡ ಮರಳು ಸಾಗಣೆದಾರರು ಎತ್ತಿನ ಗಾಡಿಗಳ ಟೈಯರ್ ಗಾಳಿ ತೆಗೆದು ಮರಳಿನ ಗಾಡಿಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮ ಎತ್ತು ಹಾಗೂ ಮರಳು ಸಹಿತ ಗಾಡಿಗಳನ್ನು ತಂದ ಪೊಲೀಸರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಂದು ನಿಲ್ಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಗಂಗಾ ಮಾತೆಯಂತೆ ಕಾವೇರಿಗೂ ಸ್ವಚ್ಛತಾ ಭಾಗ್ಯ]
ಈ ಕಾರ್ಯಾಚರಣೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ, ರಾಮಚಂದ್ರ, ಮುಖ್ಯಪೇದೆ ಬಂಡಳ್ಳಿ ಮಾದೇಶ್, ರಘು, ಸಿದ್ದರಾಜು, ಸುರೇಶ್, ನಟರಾಜು, ಮಾದೇಶ್, ಶಂಕರ್, ನಾಗೇಂದ್ರ ಮಾದೇಶ್ ಪಾಲ್ಗೊಂಡಿದ್ದರು.