ಅಕ್ರಮ ಮರಳುಗಾರಿಕೆ: ಕಟಕಟೆಯಲ್ಲಿ ಸಚಿವರ ಪುತ್ರ
ಮೈಸೂರು, ಮಾರ್ಚ್ 06: ಅಕ್ರಮ ಮರಳುಗಾರಿಕೆಗೆ ಪರವಾನಗಿ ನೀಡಲು ಲಂಚ ಪಡೆಯಲು ಪ್ರೇರೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಗೆ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಇಂದು ಖುದ್ದು ಹಾಜರಾಗುವಂತೆ ಆದೇಶ ನೀಡಿತ್ತು.
ಅದರಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಲಂಚ ಪಡೆಯಲು ಪ್ರೇರೇಪಣೆ ನೀಡಿದ ಆರೋಪ ಹೊತ್ತು ಸುನಿಲ್ ಬೋಸ್ ನ್ಯಾಯಾಲಯಕ್ಕೆ ಹಾಜರಾದರು. ಫೆ.27ರಂದು ಸುನಿಲ್ ಬೋಸ್ ಗೆ ಖುದ್ದು ಹಾಜರಾಗುವಂತೆ ಈ ಹಿಂದೆಯೂ ನ್ಯಾಯಾಲಯ ಆದೇಶಿಸಿತ್ತು.
ಆದರೆ ದೂರುದಾರ ರಾಜು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಮತ್ತೆ ವಿಚಾರಣೆಯನ್ನು ಮಾ.6 ಕ್ಕೆ ಮೂರನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಮುಂದೂಡಿತ್ತು. ಫೆ.20ರಂದು ಸುನಿಲ್ ಬೋಸ್ ಪರ ವಕೀಲರು ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು ಎಂದು ಕೇಳಿಕೊಂಡಿದ್ದರು.
ಪ್ರಕರಣದಲ್ಲಿ ಸುನಿಲ್ ಬೋಸ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ್ದರಿಂದ ಸುನಿಲ್ ಬೋಸ್ ಹೆಸರನ್ನು ಕೈ ಬಿಡುವಂತೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಸದರಿ ಪ್ರಕರಣವನ್ನು ಇದೀಗ ನ್ಯಾಯಾಲಯ ಮಾ. 14 ಕ್ಕೆ ವಿಚಾರಣೆ ಮುಂದೂಡಿದೆ.