ನಲಪಾಡ್ ಕೊಟ್ಟಿದ್ದ ದೇಣಿಗೆ ಹಣ ವಾಪಸ್ ಮಾಡಿದ್ದೀನಿ: ಪ್ರಕಾಶ್ ರೈ
ನಾನು ದತ್ತು ತೆಗೆದುಕೊಂಡಿದ್ದ ಹಳ್ಳಿಯ ಅಭಿವೃದ್ಧಿಗಾಗಿ ಮೊಹ್ಮದ್ ನಲಪಾಡ್ (ಶಾಸಕ ಎನ್.ಹ್ಯಾರಿಸ್ ಮಗ) ನೀಡಿದ್ದ ದೇಣಿಗೆಯನ್ನು ವಾಪಸ್ ಕೊಟ್ಟಿದ್ದೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. ಮೈಸೂರಿನಲ್ಲಿ ಪತ್ರಕರ್ತರ ಜತೆ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು ಈ ವಿಚಾರ ತಿಳಿಸಿದ್ದಾರೆ.
ವಿದ್ವತ್ ಮೇಲೆ ಮೊಹ್ಮದ್ ನಲಪಾಡ್ ಹಲ್ಲೆ ಮಾಡಿರುವುದನ್ನು ಖಂಡಿಸಿ, ಆ ಹಣವನ್ನು ಹಿಂತಿರುಗಿಸಿದ್ದೇನೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಮೊಹ್ಮದ್ ನಲಪಾಡ್ ನನ್ನು ಪ್ರಕಾಶ್ ರೈ ಹೊಗಳಿದ್ದರು. ಆ ವಿಡಿಯೋ ವೈರಲ್ ಆಗಿ, ವಿವಿಧ ವಲಯಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದರು ಪ್ರಕಾಶ್ ರೈ.
ನಲಪಾಡ್ ಇಷ್ಟೊಂದು ಕ್ರೂರಿ ಎಂದು ಗೊತ್ತಿರಲಿಲ್ಲ: ಪ್ರಕಾಶ್ ರೈ
ಕಾಂಗ್ರೆಸ್ ಶಾಸಕ ಎನ್.ಹ್ಯಾರಿಸ್ ಮಗ ಮೊಹ್ಮದ್ ನಲಪಾಡ್ ಮತ್ತು ಆತನ ಇತರ ಸ್ನೇಹಿತರು ಸೇರಿ, ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ವರ್ತನೆಗೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಈ ಹಿಂದೆ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮೊಹ್ಮದ್ ನಲಪಾಡ್ ನನ್ನು ಪ್ರಕಾಶ್ ರೈ ಹೊಗಳಿದ್ದರು. ಆ ಹಳೆ ವಿಡಿಯೋ ಮತ್ತೆ ಪ್ರಚಾರಕ್ಕೆ ಬಂದು, ಟೀಕೆ ವ್ಯಕ್ತವಾಗುತ್ತಿತ್ತು.
ವಿಡಿಯೋದಲ್ಲಿ ಪ್ರಕಾಶ್ ರೈ ಹೇಳಿದ್ದೇನು?
"ಈ ಸಣ್ಣ ಹುಡುಗ ನನ್ನನ್ನು ಕಾರ್ಯಕ್ರಮಕ್ಕೆ ಕರೆದಾಗ, ಅದ್ಭುತವಾದ ಕೆಲಸ ಮಾಡ್ತಿದ್ದೀರಾ. ನಾನು ಖಂಡಿತಾ ಬರ್ತೀನಿ ಅಂದೆ. ನನ್ನದು ಪ್ರಕಾಶ್ ರಾಜ್ ಫೌಂಡೇಷನ್ ಅಂತಿದೆ, ನಾವು ಹಳ್ಳಿಗಳನ್ನು ದತ್ತು ತೆಗೆದುಕೊಳ್ತೀವಿ. ಸಹಾಯ ಮಾಡಿ ಎಂದು ಕೇಳಿದೆ. ಆತ ನೆರವಿಗೆ ಮುಂದಾದರು. ನಾಳೆ ನಾವು ಚಿತ್ರದುರ್ಗದಲ್ಲಿ ಹಳ್ಳಿ ದತ್ತು ತೆಗೆದುಕೊಂಡು, ಬಡವರಿಗೆ ಮನೆ ಕಟ್ಟಿಸಿಕೊಡ್ತೀವಿ ಅಂದರೆ ಅದಕ್ಕೆ ಈ ಹುಡುಗ ಕಾರಣ" ಎಂದು ಪ್ರಕಾಶ್ ರೈ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದೆ.
ನನಗೊಂದು ಪಾಠ ಕಲಿಸಿದೆ
ಈ ಪ್ರಕರಣವು ನನಗೊಂದು ಪಾಠ ಕಲಿಸಿದೆ. ಇನ್ನು ಮುಂದೆ ಯಾವುದೇ ವ್ಯಕ್ತಿಯ ಹಿನ್ನೆಲೆ ತಿಳಿದುಕೊಳ್ಳದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೊಗಳುವುದಿಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ ಪ್ರಕಾಶ್ ರೈ. ಜತೆಗೆ ಹಲ್ಲೆ ಪ್ರಕರಣವನ್ನು ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ದೇಣಿಗೆ ಹಣ ಹಿಂತಿರುಗಿಸಲು ಒತ್ತಾಯ
ನಲಪಾಡ್ ಬಂಧನವಾದ ಮೇಲೆ ಪ್ರಕಾಶ್ ರೈ ಹೊಗಳಿದ ವಿಡಿಯೋ ವೈರಲ್ ಆಗಿ, ಸಾಮಾಜಿಕ ಜಾಲತಾಣ ಹಾಗೂ ಮೈಕ್ರೋಬ್ಲಾಗ್ ಸೈಟ್ ಗಳಲ್ಲಿ ಭಾರೀ ಟೀಕೆ ಕೇಳಿಬಂದಿತ್ತು. ಪ್ರಕಾಶ್ ರೈ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಹಾಗೂ ಮೊಹ್ಮದ್ ನಲಪಾಡ್ ನಿಂದ ಪಡೆದ ದೇಣಿಗೆ ಹಣವನ್ನು ಹಿಂತಿರುಗಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಪ್ರಕಾಶ್ ರೈ ಆಷಾಢಭೂತಿ
ಶಾಸಕ ಎನ್.ಎ.ಹ್ಯಾರಿಸ್ ರ ಗೂಂಡಾ ಮಗನನ್ನು ಪ್ರಕಾಶ್ ರೈ ಹೊಗಳಿದ್ದಾರೆ. ಅದೂ ಅವರ ಎನ್ ಜಿಒಗೆ ಹಣ ಕೊಟ್ಟ ಕಾರಣಕ್ಕೆ. ಈತನಿಗೆ ಹಣ ಕೊಟ್ಟರೆ ಯಾರನ್ನು ಬೇಕಾದರೂ ಹೊಗಳುವುದಕ್ಕೆ ಸಿದ್ಧ ಎಂಬುದು ಇದರಿಂದ ಸಾಬೀತಾಗುತ್ತದೆ. ಪ್ರಕಾಶ್ ರೈ ಒಬ್ಬ ಆಷಾಢಭೂತಿ. ಪ್ರಧಾನಿ ಮೋದಿಯನ್ನಾಗಲಿ ಅಥವಾ ಬಿಜೆಪಿಯನ್ನಾಗಲಿ ಟೀಕಿಸುವ ಹಕ್ಕು ಪ್ರಕಾಶ್ ರೈಗಿಲ್ಲ ಎಂದು ಬಿಜೆಪಿ ವಕ್ತಾರರೊಬ್ಬರು ಹೇಳಿದ್ದಾರೆ.
ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್
ನಲಪಾಡ್ ಪ್ರಕರಣ: ಕೋರ್ಟ್ನಲ್ಲಿ ಏನೇನು ನಡೆಯಿತು
ಹೀಗೆ ಬೆಳೆಸಬೇಕು ನೋಡಿ ಮಕ್ಕಳನ್ನಾ.. ಹ್ಯಾರೀಸ್ ಬೆನ್ನುತಟ್ಟಿದ್ದ ಪ್ರಕಾಶ್ ರೈ