ಮೈಸೂರು : ಹುಣಸೂರು ಜೋಡಿ ಕೊಲೆ ಸಾಕ್ಷಿಯ ಹತ್ಯೆ
ಮೈಸೂರು, ಮೇ 05 : ಹುಣಸೂರಿನ ತೋಟದ ಮನೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯನ್ನು ಹತ್ಯೆ ಮಾಡಲಾಗಿದೆ. ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೈಸೂರು ನಗರಸಭಾ ಸದಸ್ಯ ಅವ್ವಾ ಮಾದೇಶ ಮತ್ತು ಸಹೋದರ ಮಂಜುನಾಥ್ ಸೇರಿದಂತೆ 10 ಮಂದಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಗುರುವಾರ ಬೆಳಗ್ಗೆ ವಿನಾಯಕನಗರ (ಪಡುವಾರಹಳ್ಳಿ) ನಿವಾಸಿ ದೇವು (36) ಹತ್ಯೆ ನಡೆದಿದೆ. ಬೊಲೆರೋ ಮತ್ತು 2 ಪಲ್ಸರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಬೆಳಗ್ಗೆ 7ಗಂಟೆ ಸಮಯದಲ್ಲಿ ಮಚ್ಚು, ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ. [ನಗರಸಭಾ ಸದಸ್ಯ ಮಾದೇಶ್ ಗೆ ಜೀವಾವಧಿ ಶಿಕ್ಷೆ]

ಬೆಳಗ್ಗೆ ಎದ್ದು ನಿತ್ಯದ ಅಭ್ಯಾಸದಂತೆ ಮನೆ ಸಮೀಪದ ಮಾರಿಗುಡಿ ಬಳಿಯ ಕ್ಯಾಂಟೀನ್ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದಾಗ, ದುಷ್ಕರ್ಮಿಗಳ ತಂಡ ದಾಳಿ ಮಾಡಿ ಹತ್ಯೆ ನಡೆಸಿದೆ. ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡು ದೇವು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ದೇವು ಹತ್ಯೆ ನಡೆದ ನಂತರ ಪಡುವಾರಹಳ್ಳಿಯೇ ಬೆಚ್ಚಿಬಿದ್ದಿದ್ದು, ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ದುಷ್ಕರ್ಮಿಗಳು ಅಪರಿಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜೋಡಿ ಕೊಲೆ ಪ್ರಕರಣದಲ್ಲಿ ನಗರಪಾಲಿಕೆ ಸದಸ್ಯ ಕೆ. ಮಾದೇಶ್ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಲು ದೇವು ಪ್ರಮುಖ ಸಾಕ್ಷಿಯಾಗಿದ್ದನು. ದೇವುನನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿತ್ತೆ? ಎಂಬುದು ತನಿಖೆ ಬಳಿಕ ತಿಳಿದುಬರಬೇಕಿದೆ.
2008ರ ಕೊಲೆ ಪ್ರಕರಣ : ಹುಣಸೂರಿನಲ್ಲಿ 2008ರಲ್ಲಿ ಜೋಡಿ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಮೈಸೂರು ನಗರಸಭೆಯ 32ನೇ ವಾರ್ಡಿನ ಸದಸ್ಯ ಮಾದೇಶ ಅಲಿಯಾಸ್ ಅವ್ವಾ ಮಾದೇಶ ಸೇರಿದಂತೆ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ನಂತರ ಅವ್ವಾ ಮಾದೇಶ ಸೇರಿದಂತೆ ಸಹಚರರು ಜಾಮೀನು ಮೇಲೆ ಹೊರಬಂದಿದ್ದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. 2016ರ ಫೆಬ್ರವರಿಯಲ್ಲಿ ವಿಚಾರಣೆ ಮುಗಿಸಿದ್ದ ಕೋರ್ಟ್ ಮಾದೇಶ ಸೇರಿದಂತೆ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪ್ರಕರಣದಲ್ಲಿ ಕೊಲೆಯಾದ ದೇವು ಸಾಕ್ಷಿ ಹೇಳಿದ್ದ.












Click it and Unblock the Notifications