ಅಗ್ನಿ ಆಕಸ್ಮಿಕ: ಮೈಸೂರು ಬಳಿಯ ತೆಂಗಿನ ತೋಟ ಭಸ್ಮ
ಮೈಸೂರು- ಬನ್ನೂರು ರಿಂಗ್ ರಸ್ತೆಯ ಬಳಿ ನಡೆದ ಘಟನೆ; ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ಗಾಳಿಯಿಂದಾಗಿ ತೋಟಕ್ಕೆ ತಗುಲಿದ್ದು ಅಗ್ನಿ ಅವಗಢಕ್ಕೆ ಕಾರಣ.
ಮೈಸೂರು, ಫೆಬ್ರವರಿ 24: ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತಕ್ಕೆ ಅಪಾರ ಪ್ರಮಾಣದ ತೆಂಗಿನ ಮರಗಳು ಸುಟ್ಟು ನಾಶವಾದ ಘಟನೆ ಮೈಸೂರು- ಬನ್ನೂರು ರಿಂಗ್ ರಸ್ತೆಯ ಸಮೀಪ ನಡೆದಿದೆ.
ಮೈಸೂರು-ಬನ್ನೂರು ರಿಂಗ್ ರಸ್ತೆಯಲ್ಲಿ ಸಂಗ್ರಹಗೊಂಡಿದ್ದ ತ್ಯಾಜ್ಯ ವಸ್ತುಗಳಿಗೆ ಹಚ್ಚಿದ ಬೆಂಕಿಯು ಜೋರಾಗಿ ಗಾಳಿ ಬೀಸಿದ ಪರಿಣಾಮ ಅಲ್ಲಿಯೇ ಪಕ್ಕದಲ್ಲಿದ್ದ ಸ್ಥಳೀಯ ನಿವಾಸಿ ಶಿವಣ್ಣ ಎಂಬುವವರಿಗೆ ಸೇರಿದ ತೆಂಗಿನ ತೋಟಕ್ಕೆ ತಗುಲಿ ಸುಮಾರು 1 ಎಕರೆ ಜಾಗದಲ್ಲಿ ಬೆಳೆದಿದ್ದ ತೆಂಗಿನ ಮರಗಳು ಸೇರಿದಂತೆ ಇನ್ನಿತರೆ ಮರಗಿಡಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.[ನೆಲಮಂಗಲ ಬಸ್ ಬೆಂಕಿಯಲ್ಲಿ ಗಾಯಗೊಂಡಿದ್ದ ಮಮತಾ ಸಾವು]
ತೋಟಕ್ಕೆ ಬೆಂಕಿ ಬಿದ್ದ ವಿಷಯವನ್ನು ಸಾರ್ವಜನಿಕರು ಅಗ್ನಿ ಶಾಮಕ ಠಾಣೆಗೆ ದೂರವಾಣಿ ಮೂಲಕ ತಿಳಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬನ್ನಿಮಂಟಪ ಹಾಗೂ ಸರಸ್ವತಿಪುರಂನ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಗಳು 4 ಅಗ್ನಿ ಶಾಮಕ ವಾಹನಗಳೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು.[ನೆಲಮಂಗಲ ಬಸ್ ಅಗ್ನಿ ದುರಂತಕ್ಕೆ ಪೂಜಾ ಸಾಮಗ್ರಿಯೇ ಕಾರಣ]