ರೋಗಿಗಳಿಗೆ ಆಸ್ಪತ್ರೆ ಆವರಣದಲ್ಲೇ ಬೆಳೆದ ಸಾವಯವ ಆಹಾರ
ಮೈಸೂರು, ಜ. 5: ಮೈಸೂರಿನ ಆಸ್ಪತ್ರೆಯೊಂದು ರೋಗಿಗಳಿಗೆ ಸಾವಯವ ಆಹಾರ ನೀಡಲು ಮುಂದಾಗಿರುವುದಲ್ಲದೇ ಸ್ವತಃ ತನ್ನ ಆವರಣದಲ್ಲೇ ತರಕಾರಿಗಳನ್ನು ಬೆಳೆಸಲು ಮುಂದಾಗಿದೆ.
ಭಾರತ ಕ್ಯಾನ್ಸರ್ ಆಸ್ಪತ್ರೆ ಮೈಸೂರಿನ ಹೆಬ್ಬಾಳದ 5 ರಿಂದ 6 ಎಕರೆ ಜಾಗದಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದೆ. ಎರೆಹುಳು ಗೊಬ್ಬರ ಬಳಸಿ ಸಂಪೂರ್ಣ ನೈಸರ್ಗಿಕ ಕೃಷಿಯ ಮೂಲಕವೇ ಆಹಾರ ವಸ್ತುಗಳನ್ನು ಬೆಳೆಯಲು ತೀರ್ಮಾನಿಸಿದೆ.[ಮೈಸೂರಿನಲ್ಲೊಬ್ಬ ಹುಳು ಭಕ್ಷಕ 'ರಾಘವೇಂದ್ರ']
ಕೃಷ್ಣ ರಾಜ ಸಾಗರ ಅಣೆಕಟ್ಟು ಸಮೀಪದ ಜಾಗದಲ್ಲಿ ಬೀಟ್ ರೂಟ್, ಮೂಲಂಗಿ, ಕ್ಯಾರೇಟ್, ಮೆಣಸಿನಕಾಯಿ, ಸೊರೆಕಾಯಿ ಸೇರಿದಂತೆ ಎಲ್ಲ ಬಗೆಯ ತರಕಾರಿಗಳನ್ನು ಬೆಳೆಯಲಾಗುವುದು. ಇದಕ್ಕೆ ಹನಿ ನೀರಾವರಿ ಪದ್ಧತಿ ಅನುಸರಿಸಲಾಗುವುದು ಎಂದು ಆಸ್ಪತ್ರೆಯ ಕೆಪಿ ಶಿವಪ್ರಸಾದ್ ತಿಳಿಸಿದ್ದಾರೆ.
ಇದಲ್ಲದೇ ಆಸ್ಪತ್ರೆಯ ಆವರಣದಲ್ಲಿ ಮಾವು, ಹಲಸಿನ ಹಣ್ಣು, ಪಪ್ಪಾಯಿ, ಚಿಕ್ಕೋ ಸೇರಿದಂತೆ ಔಷಧಿ ಸಸ್ಯಗಳನ್ನು ಬೆಳೆಸಲಾಗುವುದು. ಸಾವಯವ ಪದ್ಧತಿಯಲ್ಲೇ ರಾಗಿ ಬೆಳೆಯುವ ಚಿಂತನೆಯೂ ಇದೆ ಎಂದು ತಿಳಿಸಿದರು.[ಮಂಗಳೂರು, ಮೈಸೂರಲ್ಲೂ ಏಪ್ರಿಲ್ 1 ರಿಂದ ಬಿಪಿಒ]
ರೋಗಿಗಳ ಉಪಹಾರ, ಊಟವನ್ನು ತಜ್ಞರ ಮಾರ್ಗದರ್ಶನದಲ್ಲಿ ಸಾವಯವ ಪದ್ಧತಿಯಲ್ಲಿ ಆವರಣದಲ್ಲೇ ಬೆಳೆದ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವುದು. ಆಹಾರದಲ್ಲಿ ಇರಬೇಕಾದ ಕೊಬ್ಬು, ಪ್ರೋಟಿನ್ ಮತ್ತು ಜೀವಸತ್ವಗಳನ್ನು ಕಾಲಕಾಲಕ್ಕೆ ಪರಿಶಿಲನೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.