'ಬಲಗಾಲಿಟ್ಟು ಹೋಗಿ': ಒಳಹೋದವರನ್ನು ಹೊರಗೆ ಕರೆದ ರೇವಣ್ಣ
ಮೈಸೂರು, ನವೆಂಬರ್ 16: ನಾಮಪತ್ರ ಸಲ್ಲಿಸಲು ಕಚೇರಿ ಒಳಗೆ ಹೋಗಿದ್ದವರನ್ನು ಹೊರಗೆ ಕರೆದು, ಬಲಗಾಲಿಟ್ಟು ಒಳಗೆ ಹೋಗಿ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ತಮ್ಮ ಕಾರ್ಯಕರ್ತರಿಗೆ ಸೂಚಿಸಿದ ಪ್ರಸಂಗ ಶನಿವಾರ ನಡೆಯಿತು.
ಹುಣಸೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸೋಮಶೇಖರ್ ಶನಿವಾರ ಎ.ಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ರೇವಣ್ಣ ಅವರೂ ತೆರಳಿದ್ದರು.
ಈ ವೇಳೆ ಪಕ್ಷದ ಕೆಲವು ಮುಖಂಡರು ಮತ್ತು ವಕೀಲರು ಎಡಗಾಲು ಇರಿಸಿ ಕಚೇರಿ ಒಳಗೆ ಪ್ರವೇಶಿಸಿದ್ದನ್ನು ಗಮನಿಸಿದ ಎಚ್ ಡಿ ರೇವಣ್ಣ ಅವರು ಕೋಪಗೊಂಡರು. ವಕೀಲರನ್ನು ಎಳೆದು ಹೊರಗೆ ಬರುವಂತೆ ಕರೆದು, ಬಲಗಾಲಿಟ್ಟು ಮತ್ತೆ ಒಳಗೆ ಬರುವಂತೆ ಸೂಚಿಸಿದರು.

ಎಡಗಾಲಿಟ್ಟು ಮತ್ತೊಬ್ಬ ಕಾರ್ಯಕರ್ತರನ್ನೂ ಹೊರಗೆ ಹೋಗ ಬಲಗಾಲಿಟ್ಟು ಬರುವಂತೆ ಹೇಳಿದರು. ಈ ವೇಳೆ ರೇವಣ್ಣ ಶುಭ ಕಾರ್ಯಕ್ಕೆ ಬಲಗಾಲಿಟ್ಟು ಪ್ರವೇಶ ಮಾಡಬೇಕು ಎಂದು ಅವರಿಗೆ ನೀತಿ ಪಾಠ ಮಾಡಿದರು.
ರೋಷನ್ ಬೇಗ್ ಮೊದಲೇ ತಿಳಿಸಿದ್ದರು: ಬಳಿಕ ಹೊಳೆ ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಸಮ್ಮಿಶ್ರ ಸರ್ಕಾರ ಉರುಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಮಾಹಿತಿಯನ್ನು ಕಾಂಗ್ರೆಸ್ನ ಅನರ್ಹ ಶಾಸಕ ರೋಷನ್ ಬೇಗ್ ಮೊದಲೇ ದೇವೇಗೌಡರಿಗೆ ನೀಡಿದ್ದರು ಎಂದು ಹೇಳಿದರು.
'ರೋಷನ್ ಬೇಗ್ ಒಬ್ಬ ಸಜ್ಜನ ರಾಜಕಾರಣಿ. ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳದ ಕಾರಣ ಸ್ವಾಭಿಮಾನದಿಂದ ಆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಷಡ್ಯಂತ್ರಗಳು ನಡೆಯುತ್ತಿವೆ ಎಂದು ಅವರು ದೇವೇಗೌಡರಿಗೆ ಮೊದಲೇ ತಿಳಿಸಿದ್ದರು. ರೋಷನ್ ಬೇಗ್ ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅವರು ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತಿಸುತ್ತೇವೆ' ಎಂದರು.
ಬಿಜೆಪಿಗೆ ಸಿದ್ಧಾಂತವಿಲ್ಲ. ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಉಪ ಚುನಾವಣೆ ಮುಗಿದ ಬಳಿಕ ಬಿಜೆಪಿಗೆ ಸಂಕಷ್ಟ ಶುರುವಾಗಲಿದೆ. ಅವರಿಗೆ ಬುದ್ಧಿ ಕಲಿಸಲು ಜನ ತಯಾರಾಗಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿಯಿಂದ ಜೀವನ ಕಟ್ಟಿಕೊಂಡವರೇ ಅವರನ್ನು ಇಂದು ಟೀಕಿಸುತ್ತಿದ್ದಾರೆ. ಅವರಿಗೆಲ್ಲ ನಾವು ನಂಬಿರುವ ದೇವರೇ ಬುದ್ಧಿ ಕಲಿಸುತ್ತಾನೆ' ಎಂದು ಹೇಳಿದರು.












Click it and Unblock the Notifications