ಅಣ್ಣ ಎಂದು ಕರೆದಿದ್ದಕ್ಕೆ ಬಿಜೆಪಿಗೆ ಎಚ್ಡಿಕೆ ಧನ್ಯವಾದ!
ಮೈಸೂರು, ಫೆಬ್ರವರಿ 2: ತಮ್ಮನ್ನು ಅಣಕಿಸಿ ರಾಜ್ಯ ಬಿಜೆಪಿ ಐಟಿ ಘಟಕ ಮಾಡಿದ್ದ ಟ್ವೀಟ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಾರವಾದ ಪ್ರತ್ಯುತ್ತರ ನೀಡಿದ್ದಾರೆ.
ರವಿ ಪೂಜಾರಿ ಅವರನ್ನು ಬಂಧಿಸಿದ್ದು ತಮ್ಮ ಸರ್ಕಾರದ ಸಾಧನೆ ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ 'ಅಣ್ಣಾ ಕುಮಾರಣ್ಣ ರವಿ ಪೂಜಾರಿಯನ್ನು ಬಂಧಿಸಿದ್ದು ನಮ್ಮ ಸಮ್ಮಿಶ್ರ ಸರ್ಕಾರವೇ ಎಂದು ತಮಗೆ ತಾವೇ ಕೀರ್ತಿ ಪಡೆಯುವ ಮೊದಲು, ಕಂಪ್ಲಿ ಶಾಸಕ ಗಣೇಶ್ರನ್ನು ಬಂಧಿಸಿ ನಿಮ್ಮ ಪೌರುಷ ತೋರಿಸಿ' ಎಂದು ಬಿಜೆಪಿ ಲೇವಡಿ ಮಾಡಿತ್ತು.
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ಪೊಲೀಸರ ವಶಕ್ಕೆ
ಇದಕ್ಕೆ ಸುತ್ತೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ, 'ಟ್ವಿಟ್ಟರ್ನಲ್ಲಿ ನನ್ನನ್ನು ಅಣ್ಣ ಎಂದು ಸಂಬೋಧಿಸಿದ್ದಕ್ಕೆ ಧನ್ಯವಾದ' ಎಂದು ಹೇಳಿದ್ದಾರೆ.
ಕಂಪ್ಲಿ ಗಣೇಶ್ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕಾಗಿ ಯಾರನ್ನೂ ರಕ್ಷಿಸುವುದಿಲ್ಲ. ಯಾರು ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನಿನ ವ್ಯಾಪ್ತಿಯಲ್ಲಿ ಯಾರಿಗೂ ರಕ್ಷಣೆ ನೀಡುವ ಪ್ರಶ್ನೆ ಇಲ್ಲ. ಅವರ ಬಂಧನಕ್ಕೆ ರೀತಿ ರಿವಾಜು ಇರುತ್ತದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಾರೆ. ಆ ಬಗ್ಗೆ ಅನುಮಾನ ಬೇಡ ಎಂದರು.
ಭೂಗತ ಪಾತಕಿ ರವಿ ಪೂಜಾರಿ ಡಾನ್ ಆಗಿ ಬೆಳೆದದ್ದು ಹೇಗೆ?
ರವಿ ಪೂಜಾರಿ ತಲೆಮರೆಸಿಕೊಂಡು 15 ವರ್ಷವಾಗಿತ್ತು. ಆತನ ಬಂಧನಕ್ಕೆ ಆರು ತಿಂಗಳಿನಿಂದ ಸರ್ಕಾರ ಅಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿತ್ತು. ನೀವು ಐದು ವರ್ಷ ಅಧಿಕಾರದಲ್ಲಿ ಇದ್ದಿರಲ್ಲ, ಆಗ ಏನು ಮಾಡಿದ್ದಿರಿ? ಎಂದು ಬಿಜೆಪಿಯನ್ನು ಪ್ರಶ್ನಿಸಿದರು.