ಎಚ್.ಡಿ.ಕೋಟೆಯ ಪ್ರಭಾವಿ ಕಾಂಗ್ರೆಸ್ ನಾಯಕ ಬಿಜೆಪಿಗೆ?
ಮೈಸೂರು, ಡಿಸೆಂಬರ್ 16 : ಎಚ್.ಡಿ.ಕೋಟೆಯ ಪ್ರಭಾವಿ ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ಪಕ್ಷಕ್ಕೆ ಗುಡ್ಬೈ ಹೇಳಲು ಸಿದ್ಧವಾಗಿದ್ದಾರೆ. ಅವರನ್ನು ಬಿಜೆಪಿಗೆ ಸೆಳೆದು ಕ್ಷೇತ್ರದಲ್ಲಿ ಪಕ್ಷವನ್ನು ಭದ್ರಗೊಳಿಸಲು ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ.
2014ರ ಲೋಕಸಭಾ ಚುನಾವಣೆಯ ನಂತರ ಚಿಕ್ಕಣ್ಣ ಮತ್ತು ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್ ಅವರ ನಡುವೆ ಸಂಬಂಧ ಎಣ್ಣೆಸೀಗೆಕಾಯಿಯಂತಾಗಿತ್ತು. ಇದರ ಲಾಭ ಪಡೆದ ಬಿಜೆಪಿ ನಾಯಕರು ಚಿಕ್ಕಣ್ಣ ಅವರನ್ನು ಪಕ್ಷಕ್ಕೆ ಸೇರಿಸಕೊಳ್ಳಲು ಮುಂದಾಗಿದ್ದಾರೆ. [ಎಚ್.ಡಿ.ಕೋಟೆ : ಚಿಕ್ಕಮಾದು vs ಚಿಕ್ಕಣ್ಣ vs ಸಿದ್ದರಾಜು]

ಮಂಗಳವಾರ ಬಿಜೆಪಿ ನಾಯಕರಾದ ವಿ. ಸೋಮಣ್ಣ, ಸಿ.ಟಿ.ರವಿ, ಎ.ಆರ್.ಕೃಷ್ಣಮೂರ್ತಿ, ಮಾಜಿ ಸಚಿವ ಎಂ.ಶಿವಣ್ಣ ಮುಂತಾದವರು ಶಾಸಕ ಬೀಚನಹಳ್ಳಿ ಚಿಕ್ಕಣ್ಣನವರ ನಿವಾಸಕ್ಕೆ ಭೇಟಿ ನೀಡಿ ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದಾರೆ. ಡಿಸೆಂಬರ್ 23ರಂದು ಚಿಕ್ಕಣ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. [ಬಿಜೆಪಿಗೆ ಹಾರಿದ ಕೋಟೆ ಶಿವಣ್ಣ]
ಕಾಂಗ್ರೆಸ್ನಲ್ಲಿ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಚಿಕ್ಕಣ್ಣ ಅವರು, ಕಾಂಗ್ರೆಸ್ ಮುಖಂಡರಾಗಿ, ತಾಲೂಕು ಬೋರ್ಡ್ ಸದಸ್ಯರಾಗಿ, ಜಿ.ಪಂ ಸದಸ್ಯರಾಗಿ, ಶಾಸಕರಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸಂಸದ ಆರ್.ಧ್ರುವನಾರಾಯಣ್ ಮತ್ತು ಚಿಕ್ಕಣ್ಣ ಅವರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳ ಬಳಿಕ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿತ್ತು. ಇದರ ಲಾಭ ಪಡೆದ ಬಿಜೆಪಿ ಮುಖಂಡರು ಮಾತುಕತೆ ನಡೆಸಿದ್ದು, ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ವಿಧಾನಪರಿಷತ್ ಚುನಾವಣೆ ಮುನ್ನವೇ ಅವರನ್ನು ಬಿಜೆಪಿಗೆ ಸೇರಿಸಿಕೊಂಡರೆ ಒಂದಷ್ಟು ಮತವನ್ನು ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.












Click it and Unblock the Notifications