ಹರ್ ಘರ್ ತಿರಂಗ ಬಿಜೆಪಿ ನಾಟಕ, ತ್ರಿವರ್ಣ ಧ್ವಜವನ್ನು ಸಾವರ್ಕರ್ ವಿರೋಧಿಸಿದ್ದರು: ಸಿದ್ದರಾಮಯ್ಯ ಟೀಕೆ
ಮೈಸೂರು, ಆಗಸ್ಟ್ 8: ಸಾವರ್ಕರ್ ಅವರು ಭಾರತದ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. ಈ ಸಾವರ್ಕರ್ರನ್ನು ಆರ್.ಎಸ್.ಎಸ್ ಆರಾಧನೆ ಮಾಡುತ್ತದೆ, ಆರ್.ಎಸ್.ಎಸ್ ನ ಸರಸಂಘಚಾಲಕರಾಗಿದ್ದ ಗೋಳ್ವಾಲ್ಕರ್ ಕೂಡ ತ್ರಿವರ್ಣ ಧ್ವಜವನ್ನು ವಿರೋಧ ಮಾಡಿದ್ದರು. ಆರ್ಗನೈಜರ್ ಎಂಬ ಬಿಜೆಪಿಯ ಮುಖವಾಣಿ ಕೂಡ ಭಾರತದ ಧ್ವಜವನ್ನು ವಿರೋಧ ಮಾಡಿತ್ತು. ಆಗೆಲ್ಲಾ ವಿರೋಧ ಮಾಡಿ ಈಗ 'ಹರ್ ಘರ್ ತಿರಂಗ' ಎಂದು ಅಭಿಯಾನ ಮಾಡುವ ಮೂಲಕ ನಾಟಕವಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಗೆ ಸಂವಿಧಾನದ ಬಗ್ಗೆ, ರಾಷ್ಟ್ರಗೀತೆ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ಗೌರವ ಇಲ್ಲ. ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ರಾಜಕೀಯ ಮಾಡಲು ಹೊರಟಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಾವು ಶ್ರದ್ಧಾ ಭಕ್ತಿಯಿಂದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ, ಕಾರಣ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ಹೋರಾಟದ ಮೂಲಕ ದೇಶಕ್ಕೆ ಸ್ವಾಂತಂತ್ರ್ಯ ಬಂದಿದೆ, ಆರ್ಎಸ್ಎಸ್, ಜನತಾ ಪಕ್ಷಾ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿಕೊಂಡಿವೆ ಎಂದರು.
ಕುಮಾರಸ್ವಾಮಿ ವೆಸ್ಟ್ಎಂಡ್ ಹೋಟೆಲ್ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು: ಸಿದ್ದರಾಮಯ್ಯ
ಭಾರತದ ರಾಷ್ಟ್ರಧ್ವಜ ಖಾದಿ ಅಥವಾ ಸಿಲ್ಕ್ ನಲ್ಲೇ ಮಾಡಬೇಕು. ಕೈ ಮಗ್ಗದಲ್ಲಿ, ಚರಕದಲ್ಲಿ ನೂಲು ತೆಗೆದು ಧ್ವಜ ಮಾಡಿಸಲಾಗುತ್ತಿತ್ತು. ಏಕೆಂದರೆ ಅವರಿಗೆ ಕೆಲಸ ಸಿಗಲಿ ಎನ್ನುವ ಇದರ ಉದ್ದೇಶವಾಗಿತ್ತು. ಆದರೆ ಆತ್ಮ ನಿರ್ಭರ ಎನ್ನುತ್ತಾರೆ, ಆದರೆ ರಪ್ತುಗಿಂತ ಆಗಮದುಗಳೇ ಹೆಚ್ಚಾಗುತ್ತಿವೆ. ಇವರು ಚೀನಾದಿಂದ ಬಾವುಟವನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಹೆಚ್ಚಾಗಿದೆ. ಹಾಗಾದರೆ ಇವರ ಆತ್ಮನಿರ್ಭರ ಎಲ್ಲಿ ಯಶಸ್ವಿಯಾಯಿತು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾಂಗ್ರೆಸ್ಗೆ ಅಧಿಕಾರಕ್ಕೆ ಬರುತ್ತೆ ಎಂತಾ ಭಯ
ಬಿಜೆಪಿಗೆ ನನ್ನ ಕಂಡರೆ ಭಯ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಬಿಜೆಪಿ ಹೆದರಿದೆ. ಅದೇ ಕಾರಣಕ್ಕೆ ನನ್ನ ಜನ್ಮದಿನ ಮುಗಿದು ವಾರ ಕಳೆದರೂ ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ ಎಂದು ಬಿಜೆಪಿನ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಅಲ್ಪ ಸಂಖ್ಯಾತರು, ಹಿಂದುಳಿದವರು ಹಾಗೂ ದಲಿತ ಮತಗಳು ಯಾವಾಗಲೂ ಕಾಂಗ್ರೆಸ್ ಪರ ಇರುತ್ತವೆ. ಆ ಕಾರಣಕ್ಕಾಗಿ ಆ ಮತಗಳನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆದಿರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ವರುಣಾದಿಂದ ಸ್ಪರ್ಧೆ ಮಾಡುತ್ತೇನೆಂಬುದು ಊಹಾಪೋಹ
ತಗಡೂರು ರಾಮಚಂದ್ರ ರಾವ್ ಅವರು ಸ್ವಾತಂತ್ರ್ಯ ಹೋರಾಟಗಾರರು, ಅವರನ್ನು ಕರ್ನಾಟಕದ ಗಾಂಧಿ ಎನ್ನುತ್ತಾರೆ. ಹಾಗಾಗಿ ಇಂದು ತಗಡೂರಿಂದ ಪಾದಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಬೇಕು ಎಂದು ಪಕ್ಷ ತೀರ್ಮಾನ ಮಾಡಿದೆ. ನಾನೊಬ್ಬ ಕಾಂಗ್ರೆಸಿಗನಾಗಿ ಪಕ್ಷದ ಕೆಲಸ ಮಾಡುತ್ತಿದ್ದೇನೆ. ವರುಣಾದಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಬರಿ ಊಹಾಪೋಹ. ನಾನು ಇದಕ್ಕೂ ಮೊದಲು ಮಾಲೂರು, ಚಿಂತಾಮಣಿ, ಚಾಮುಂಡೇಶ್ವರಿಯಲ್ಲಿ ಪಾದಯಾತ್ರೆ ಮಾಡಿದ್ದೆ, ಈ ಎಲ್ಲಾ ಕಡೆ ಚುನಾವಣೆಗೆ ನಿಲ್ಲೋಕಾಗುತ್ತಾ? ಚುನಾವಣೆ ಹತ್ತಿರ ಬಂದಾಗ ಯಾವ ಕ್ಷೇತ್ರ ಎಂದು ಎಲ್ಲರಿಗೂ ಹೇಳುತ್ತೇನ ಎಂದರು.
ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮೂರು ಹಂತದ ಪರೀಕ್ಷೆ
ಸ್ಥಳೀಯ ಚುನಾವಣೆ ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟಾಗಿ ನಡೆದಿಲ್ಲ ಎನ್ನುವುದರ ಬಗ್ಗೆ ಮಾತನಾಡಿ, ಭಕ್ತವತ್ಸಲಂ ನೇತೃತ್ವದಲ್ಲಿ ಸಮಿತಿ ಮಾಡಿದ್ದರು, ಅವರು ಎರಡೇ ತಿಂಗಳಲ್ಲಿ ವರದಿ ನೀಡಿದ್ದಾರೆ. ಇದನ್ನು ಸರ್ಕಾರ ತೆಗೆದುಕೊಂಡಿದೆ. ಅದರ ಬದಲು ಕಾಂತರಾಜ್ ಅವರ ಸಮಿತಿ ನೀಡಿದ್ದ ವರದಿ ಪಡೆಯಬೇಕಿತ್ತು. ಕಾರಣ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮೂರು ಹಂತದ ಪರೀಕ್ಷೆ ಆಗಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ನಿರ್ಣಯದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದೆ. ಹಿಂದುಳಿದ ಜಾತಿಗಳ ಬಗ್ಗೆ ಕರಾರುವಕ್ಕಾದ ಮಾಹಿತಿ ಇರಬೇಕು, ಇದಕ್ಕಾಗಿ ಒಂದು ನಿರ್ಧಿಷ್ಟ ಕಮಿಷನ್ ರಚಿಸಿ, ಅವರು ವರದಿ ನೀಡಬೇಕು. ಈ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿದರೆ ಮಾತ್ರ ಮೀಸಲಾತಿ ನೀಡಲು ಸಾಧ್ಯವಿದೆ.
ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ನಷ್ಟ
ರಾಜ್ಯದಲ್ಲಿ ಮಳೆಯ ಪರಿಣಾಮದ ಬಗ್ಗೆ ಪ್ರತಿಕ್ರಿಯಿಸಿ, ಮಳೆಯಿಂದ ರಾಜ್ಯದಲ್ಲಿ ಸುಮಾರು ಸಾವಿರಾರು ಕೋಟಿ ನಷ್ಟವಾಗಿದೆ. ಸುಮಾರು ಒಂದು ಲಕ್ಷ ಹೆಕ್ಟೇರ್ ಗೂ ಹೆಚ್ಚಿನ ಬೆಳೆ ನಷ್ಟವಾಗಿದೆ. ಸರ್ವೆ ಮಾಡಿದ ಮೇಲೆ ಎಲ್ಲಾ ಸಮಗ್ರ ಮಾಹಿತಿ ತಿಳಿಯುತ್ತದೆ ಎಂದು ತಿಳಿಸಿದರು.
Recommended Video